ಪಿಎಫ್ ಐ ಸಂಘಟನೆ ಸದ್ಯ ಬ್ಯಾನ್ ಇಲ್ಲ: ರಾಮಲಿಂಗಾರೆಡ್ಡಿ
ಬಾಗಲಕೋಟೆ, ಜನವರಿ 05 : ಪಿಎಫ್ ಐ ಸಂಘಟನೆ ಸೇರಿದಂತೆ ಯಾವುದೇ ಸಂಘಟನೆಗಳನ್ನು ಸದ್ಯ ಬ್ಯಾನ್ ಮಾಡುವುದಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್ ಐ ಸಂಘಟನೆ ಅಥವಾ ಇನ್ನಿತರೆ ಸಂಘಟನೆಗಳನ್ನು ಸದ್ಯ ಬ್ಯಾನ್ ಮಾಡುವುದಿಲ್ಲ. ಮುಖ್ಯಮಂತ್ರಿ ಪ್ರವಾಸದಿಂದ ಮರಳಿದ ಮೇಲೆ ಚರ್ಚಿಸಲಾಗುವುದು ಎಂದರು.
ಪಿಎಫ್ಐ ಜತೆ ಬಿಜೆಪಿಗೆ ನಿಕಟ ಸಂಪರ್ಕ: ರಾಮಲಿಂಗಾ ರೆಡ್ಡಿ ಗಂಭೀರ ಆರೋಪ
ಪಿಎಫ್ ಐ ಸಂಘಟನೆ ನಿಷೇಧಿಸುವಂತೆ ಬಿಜೆಪಿ ಒತ್ತಾಯ ಮಾಡುತ್ತಿದೆ. ಆದರೆ ಪಿಎಫ್ ಐ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಬಿಜೆಪಿಯವರದು ಅವಕಾಶವಾದಿ ರಾಜಕಾರಣ ಎಂದು ದೂರಿದರು.
ಬಿಜೆಪಿಯವರು ಅಧಿಕಾರಕ್ಕೆ ಬರುತ್ತಾರೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ ಪುನಃ ನಾವೇ ರಾಜಕೀಯಕ್ಕೆ ಬರುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ. ಬಿಜೆಪಿ ಸರ್ಕಾರವಿದ್ದಾಗ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ನಮ್ಮ ಸರ್ಕಾರ ಬಂದ ಮೇಲೆ ಕಡಿಮೆಯಾಗಿದೆ ಎಂದರು.
ಕರ್ನಾಟಕ, ಕೇರಳದಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಕಾರ್ಯಕರ್ತರ ಕೊಲೆ ಆರೋಪ ಹೊತ್ತಿರುವ ಪಿಎಫ್ ಐ ಸಂಘಟನೆಯನ್ನು ಕೇಂದ್ರ ನಿಷೇಧಿಸುವ ಸಾದ್ಯತೆ ಇದೆ ಎನ್ನುವ ವಿಚಾರಗಳು ಕೇಳಿಬರುತ್ತಿದ್ದವು.
ಭಯೋತ್ಪಾದಕ ಕೃತ್ಯಗಳಲ್ಲಿ ಶಾಮೀಲಾಗಿರುವ ಆರೋಪದ ಮೇಲೆ ಸಂಘಟನೆಯ ವಿರುದ್ಧ ಕ್ರಮಕ್ಕೆ ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿತ್ತು. ಈ ವಿಚಾರವಾಗಿ ರಾಜ್ಯದಲ್ಲಿರುವ ಪಿಎಫ್ ಐ ಸಂಘಟನೆಗಳನ್ನು ಬ್ಯಾನ್ ಮಾಡುವ ಕುರಿತು ಮಾತನಾಡಿರುವ ರಾಮಲಿಂಗಾರೆಡ್ಡಿ ಸದ್ಯಕ್ಕೆ ಅಂತಹ ಕ್ರಮಕ್ಕೆ ಮುಂದಾಗುವುದಿಲ್ಲ ಎಂದಿದ್ದಾರೆ.