ಕರ್ತಾರ್ ಪುರ್ ಕಾರಿಡಾರ್ ಯೋಜನೆಗೆ ನಮೋ ಹಸಿರು ನಿಶಾನೆ
ಅಮೃತಸರ್, ನವೆಂಬರ್.08: ಕೋಟ್ಯಂತರ ಸಿಖ್ ರ ಬಹುವರ್ಷಗಳ ಕನಸು ಸಾಕಾರಗೊಂಡಿದೆ. ಕರ್ತಾರ್ ಪುರ್ ಕಾರಿಡಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. ಗುರು ನಾನಕ್ ಜಯಂತಿ ಬೆನ್ನಲ್ಲೇ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ, ಇಂಥ ಪವಿತ್ರ ಸನ್ನಿಧಾನಕ್ಕೆ ಕಾಲಿಟ್ಟು ನಾನು ಧನ್ಯನಾಗಿರುವ ಎಂದು ಹೇಳಿದರು.
ಗುರು ನಾನಕ್ ರ 550ನೇ ಜಯಂತಿಗೂ ಮೊದಲೇ ಕರ್ತಾರ್ ಪುರ್ ಕಾರಿಡಾರ್ ಗೆ ಚಾಲನೆ ಸಿಕ್ಕಿದೆ. ಭಾರತೀಯರ ಭಾವನೆಗಳಿಗೆ ಸ್ಪಂದಿಸಿದ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು. ಪಾಕಿಸ್ತಾನ್ ಪ್ರಧಾನಿ ಇಮ್ರಾನ್ ಖಾನ್ ಸಹಕಾರದಿಂದ ಇಂದು ಕರ್ತಾರ್ ಪುರ್ ಕಾರಿಡಾರ್ ಯೋಜನೆ ಜಾರಿಗೆ ಬಂದಿದೆ. ಇದರಿಂದ ಕೋಟಿ ಕೋಟಿ ಭಾರತೀಯ ಸಿಖ್ ರ ವರ್ಷಗಳ ಕನಸು ಸಾಕಾರಗೊಂಡಿದೆ ಎಂದು ಪ್ರಧಾನಿ ತಿಳಿಸಿದರು.


ವಿಶ್ವಕ್ಕೆ ಸಾರಬೇಕಿದೆ ಗುರು ನಾನಕ್ ಸಂದೇಶ
ಅಂತಾರಾಷ್ಟ್ರೀಯ ಶೈಕ್ಷಣಿಕ, ವೈಜ್ಞಾನಿಕ, ಸಾಂಸ್ಕೃತಿಕ ಸಂಸ್ಥೆಗೂ ಧನ್ಯವಾದ ತಿಳಿಸಿದರು. ಇಂದು ಭಾರತದ ಕೇಂದ್ರ ಸರ್ಕಾರದ ಮನವಿಯನ್ನು ವಿಶ್ವಸಂಸ್ಥಖೆಯ ಯುನೆಸ್ಕೋ ಸ್ಪಂದಿಸಿದೆ. ಮುಂದಿನ ದಿನಗಳಲ್ಲಿ ಗುರು ನಾನಕ್ ರು ಸಮಾಜಕ್ಕೆ ಸಾರಿದ ಸಂದೇಶಗಳನ್ನು ಎಲ್ಲ ಭಾಷೆಗಳ ಅನುವಾದದ ಪ್ರತಿಗಳನ್ನು ಇರಿಸಲಾಗುತ್ತದೆ. ಆ ಮೂಲಕ ನಾನಕ್ ರ ಸಂದೇಶಗಳನ್ನು ವಿಶ್ವಕ್ಕೆ ಸಾರಿ ಹೇಳುವ ಕೆಲಸವನ್ನು ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಗುರುವಿನ ವಾಣಿ ಪಾಲಿಸಿದರೆ ಗೆಲುವು ಶತಸಿದ್ಧ
550ನೇ ಗುರು ನಾನಕ್ ಜಯಂತಿಗೂ ಮುನ್ನ ಕರ್ತಾರ್ ಪುರ್ ಕಾರಿಡಾರ್ ಗೆ ಚಾಲನೆ ಸಿಕ್ಕಿದೆ. ಈ ಸುಸಂದರ್ಭದಲ್ಲಿ ನಾನಕ್ ರ ಸಂದೇಶವನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ಚಿಕ್ಕವರು-ದೊಡ್ಡವರು, ಮೇಲು-ಕೀಳು ಎಂಬ ತಾರತಮ್ಯವನ್ನು ತೊಡೆದುಹಾಕಬೇಕಿದೆ. ಆ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಬೇಕಿದೆ. ಗುರು ನಾನಕ್ ರು ಸಾರಿದ ಸಂಸ್ಕೃತಿ, ಸಂಪ್ರದಾಯ, ವಿಚಾರ ಹಾಗೂ ಚಿಂತನೆಗಳು ಸರ್ವಕಾಲಕ್ಕೂ ಅನ್ವಯವಾಗುತ್ತವೆ. ಗುರುವಿನ ಸಂದೇಶದಂತೆ ನಡೆದರೆ ಗೆಲುವು ಶತಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. (ಚಿತ್ರಕೃಪೆ:ANI)

500 ಯಾತ್ರಿಕರ ಮೊದಲ ತಂಡಕ್ಕೆ ಹಸಿರು ನಿಶಾನೆ
ಕರ್ತಾರ್ ಪುರ್ ಕಾರಿಡಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ವೇಳೆ ಗುರುದಾಸ್ ಪುರ್ ಡೇರಾ ಬಾಬಾ ನಾನಕ್ ದೇವಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕರ್ತಾರ್ ಪುರ್ ಕಾರಿಡಾರ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿಗೆ ಖಡ್ಗ ನೀಡುವ ಮೂಲಕ ಸನ್ಮಾನ ಮಾಡಲಾಯಿತು. ನಂತರ ಪಾಕಿಸ್ತಾನದ ಕರ್ತಾರ್ ಪುರ್ ಗೆ ಹೊರಟ 500 ಸಿಖ್ ಯಾತ್ರಿಕರ ಮೊದಲ ತಂಡಕ್ಕೆ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. ಇದೇ ಸಂದರ್ಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಉಪಮುಖ್ಯಮಂತ್ರಿ ಸುಖ್ ಬೀರ್ ಬಾದಲ್, ಉಪಸ್ಥಿತಿ ವಹಿಸಿದ್ದರು.

ಸಿಖ್ ರಿಗೆ ಈ ಯೋಜನೆಯಿಂದ ಆಗುವ ಉಪಯೋಗವೇನು?
ಭಾರತದ ಪಂಜಾಬ್ ನ ಗುರುದಾಸ್ ಪುರ್ ಜಿಲ್ಲೆಯ ಡೇರಾ ಬಾಬಾ ನಾನಕ್ ಹಾಗೂ ಪಾಕಿಸ್ತಾನ ಕರ್ತಾರ್ ಪುರ್ ನಲ್ಲಿರುವ ಗುರುದ್ವಾರ ದರ್ಬಾರ್ ಸಾಹೀಬ್ ದೇವಸ್ಥಾನಗಳ ನಡುವೆ ಸಂಚಾರಕ್ಕೆ ನಿರ್ಮಿಸಿದ 4.7 ಕಿಲೋ ಮೀಟರ್ ಉದ್ದದ ಹೆದ್ದಾರಿಯೇ ಕರ್ತಾರ್ ಪುರ್ ಕಾರಿಡಾರ್ ಯೋಜನೆ. ಸಿಖ್ ರ ಪವಿತ್ರ ಸ್ಥಳವಾಗಿರುವ ಕರ್ತಾರ್ ಪುರ್ ನ ಗುರುದ್ವಾರಕ್ಕೆ ತೆರಳಲು ಈ ಯೋಜನೆ ರೂಪಿಸಲಾಗಿದೆ. ಇದರಿಂದ ಯಾವುದೇ ವೀಸಾ ಅಗತ್ಯವಿಲ್ಲದೇ, ನೆರೆಯ ಪಾಕಿಸ್ತಾನಕ್ಕೆ ತೆರಳಬಹುದು. ಆದರೆ, ಯಾತ್ರಿಗರು ಪಾಸ್ ಪೋರ್ಟ್ ದಾಖಲೆಗಳನ್ನು ಕಡ್ಡಾಯವಾಗಿ ತೆಗದೆುಕೊಂಡು ಹೋಗಬೇಕು. ಇನ್ನು, ಪಾಕಿಸ್ತಾನ ಕರ್ತಾರ್ ಪುರ್ ಗೆ ತೆರಳುವ 10 ದಿನಗಳಿಗೂ ಮೊದಲೇ ಪಾಕಿಸ್ತಾನ್ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಿರಬೇಕು ಎಂಬ ಷರತ್ತು ಇದೆ.












Click it and Unblock the Notifications