ತಿರುಪತಿಯಲ್ಲಿ ಇಂದು ಅತಿದೊಡ್ಡ ಕ್ಯಾನ್ಸರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಉದ್ಘಾಟನೆ
ತಿರುಪತಿ, ಮೇ 5: ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಇಂದು ತಿರುಪತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಡುತ್ತಿದ್ದಾರೆ. ಶ್ರೀ ವೆಂಕಟೇಶ್ವರ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಇಂದು ಉದ್ಘಾಟಿಸುತ್ತಿದ್ಧಾರೆ. ಇದು ರಾಜ್ಯದಲ್ಲೇ ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆ ಎನಿಸಿದೆ. ಹಾಗೆಯೇ, ಸಿಎಂ ರೆಡ್ಡಿ ಅವರು ಟಿಟಿಡಿಯಿಂದ ಮಕ್ಕಳ ಚಿಕಿತ್ಸೆಗೆ ನಿರ್ಮಿಸಲಾಗುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಇಂದು ಅಡಿಗಲ್ಲು ಹಾಕಲಿದ್ದಾರೆ. ಅಷ್ಟೇ ಅಲ್ಲದೇ ಇನ್ನೂ ಹಲವು ಯೋಜನೆಗಳಿಗೆ ಇಂದು ಸಿಎಂ ಚಾಲನೆ ಕೊಡಲಿದ್ದಾರೆ.
ಇಂದು ಅವರು 'ಜಗನ್ ಅಣ್ಣ ವಿದ್ಯಾ ದೀವೇನ' ಯೋಜನೆಗೆ ಚಾಲನೆ ಕೊಡುತ್ತಿದ್ದಾರೆ. ತಿರುಪತಿಯ ಎಸ್ವಿ ಯೂನಿವರ್ಸಿಟಿ ಸ್ಟೇಡಿಯಂನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಅವರು ಈ ಯೋಜನೆ ಉದ್ಘಾಟಿಸಲಿದ್ದಾರೆ. ಈ ವೇಳೆ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಸಾಧ್ಯತೆ ಇದೆ.
ಎಲಿವೇಟೆಡ್ ಕಾರಿಡಾರ್:
ತಿರುಪತಿಯಲ್ಲಿ ಶ್ರೀನಿವಾಸ ಸೇತು ಎಂಬ ಎಕ್ಸ್ಪ್ರೆಸ್ ಹೈವೇ ಕಾರಿಡಾರ್ ಅನ್ನೂ ಸಿಎಂ ಉದ್ಘಾಟಿಸಲಿದ್ದಾರೆ. ಇದು 684 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ಇದರಲ್ಲಿ ತಿರುಪತಿ ತಿರುಮಲ ದೇವಸ್ಥಾನ (TTD) ಬರೋಬ್ಬರಿ 458.28 ಕೋಟಿ ರೂ ದೇಣಿಗೆ ಕೊಡುತ್ತಿದೆ.

ಈ ಕಾರಿಡಾರ್ ಯೋಜನೆಯ ಮೊದಲ ಹಂತದ ಪ್ರಮುಖ ಕಾಮಗಾರಿ ಮುಗಿದಿದೆ. ತಿರುಪತಿಯ ಶ್ರೀನಿವಾಸಂನಿಂದ ವಾಸವಿ ಭವನ್ವರೆಗೆ ಇರುವ 3 ಕಿಮೀ ಅಂತರ ಇರುವ ಎಲಿವೇಟೆಡ್ ಫ್ಲೈ ಓವರ್ನ ನಿರ್ಮಾಣ ಮುಗಿದಿದೆ. ಇದನ್ನು ಇಂದು ಸಿಎಂ ಉದ್ಘಾಟಿಸಲಿದ್ದಾರೆ. ನಂತರ ಎರಡನೇ ಹಂತದ ಕಾಮಗಾರಿಗೆ ಅವರು ಅಡಿಗಲ್ಲು ಹಾಕಲಿದ್ದಾರೆ. ತಿರುಮಲದಿಂದ ಶೇಷಾಚಲಂ ಅರಣ್ಯಪ್ರದೇಶಕ್ಕೆ ಹೋಗುವ ಶ್ರೀವಾರಿ ಮೆಟ್ಟು (Srivari Mettu) ಎಂಬ ಕಾಲುದಾರಿಯ ಉದ್ಘಾಟನೆ ಕೂಡ ಆಗಲಿದೆ.
ಟಾಟಾ ಟ್ರಸ್ಟ್ನಿಂದ ಕ್ಯಾನ್ಸರ್ ಆಸ್ಪತ್ರೆ:
ತಿರುಪತಿಯಲ್ಲಿ ನಿರ್ಮಾಣವಾಗಿರುವ ಕ್ಯಾನ್ಸರ್ ಆಸ್ಪತ್ರೆ ಕಟ್ಟಿದ್ದು ಟಾಟಾ ಟ್ರಸ್ಟ್ ಸಂಸ್ಥೆ. ತಿರುಪತಿ ವೆಂಕಟೇಶ್ವರನ ಹೆಸರನ್ನ ಈ ಆಸ್ಪತ್ರೆಗೆ ಇಡಲಾಗಿದೆ. ಶ್ರೀ ವೆಂಕಟೇಶ್ವರ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಕೇರ್ ಅಂಡ್ ಅಡ್ವಾನ್ಸ್ ರಿಸರ್ಚ್ (SVICCAR) ಆಂಧ್ರದಲ್ಲೇ ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆ ಎನಿಸಿದೆ. 1.65 ಲಕ್ಷ ಚದರಡಿ ವಿಸ್ತೀರ್ಣದಲ್ಲಿ 180 ಕೋಟಿ ರೂ ವೆಚ್ಚದಲ್ಲಿ ಇದನ್ನ ಕಟ್ಟಲಾಗಿದೆ.

ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನ ಒದಗಿಸಲಾಗಿದೆ. 92 ಬೆಡ್ ವ್ಯವಸ್ಥೆ ಮಾಡಲಾಗಿದೆ. ಆಂಧ್ರದ ಹಲವು ಕಡೆ ಟಾಟಾ ಟ್ರಸ್ಟ್ ಸಂಸ್ಥೆ ಕ್ಯಾನ್ಸರ್ ಆಸ್ಪತ್ರೆಗಳನ್ನ ನಿರ್ವಹಿಸುತ್ತಿದೆ. ಈಗ ತಿರುಪತಿಯಲ್ಲಿ ನಿರ್ಮಾಣವಾಗಿರುವುದು ಆ ರಾಜ್ಯದಲ್ಲೇ ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆ.
ಪದ್ಮಾವತಿ ಮಕ್ಕಳ ಆಸ್ಪತ್ರೆ:
ತಿರುಪತಿಯ ಅಲಿಪಿರಿ ಬಳಿ ಆರು ಎಕರೆ ಪ್ರದೇಶದಲ್ಲಿ ಮಕ್ಕಳ ಸೂಪರ್ ಸ್ಪೆಷಾಲ್ಟಿ ಆಸ್ಪತ್ರೆ ನಿರ್ಮಾಣಕ್ಕೆ ಸಿಎಂ ಜಗನ್ಮೋಹನ ರೆಡ್ಡಿ ಇಂದು ಅಡಿಗಲ್ಲು ಹಾಕುತ್ತಿದ್ದಾರೆ. ಟಿಟಿಡಿ ಸಂಸ್ಥೆಯೇ ಈ ಆಸ್ಪತ್ರೆ ನಿರ್ಮಾಣ ಮಾಡಿಸುತ್ತಿದೆ. 4.11 ಲಕ್ಷ ಚದರಡಿಯಷ್ಟಿರುವ ಕಟ್ಟಡದ ನಿರ್ಮಾಣಕ್ಕೆ 300 ಕೋಟಿ ರೂ ವೆಚ್ಚವಾಗುವ ಅಂದಾಜಿದೆ. ಶ್ರೀ ಪದ್ಮಾವತಿ ಆಸ್ಪತ್ರೆ ಏಳು ಮಹಡಿಗಳಲ್ಲಿ 350 ಬೆಡ್ಗಳನ್ನ ಒಳಗೊಳ್ಳಲಿದೆ.
ಈ ಮಕ್ಕಳ ಆಸ್ಪತ್ರೆಯಲ್ಲಿ ಆನ್ಕಾಲಜಿ, ನ್ಯೂರೋಲಜಿ, ಕಾರ್ಡಿಯೋಲಜಿ ಸೇರಿದಂತೆ 15 ವಿಶೇಷ ವಿಭಾಗಗಳಿದ್ದು, ಇಲ್ಲಿ ಮೂಳೆ, ಹೃದಯ ಮತ್ತಿತರ ಅಂಗಗಳ ಕಸಿ ಮಾಡುವ ವ್ಯವಸ್ಥೆ ಇರಲಿದೆ. ಇದು ಉಚಿತ ಸೇವೆ ನೀಡುವ ಆಸ್ಪತ್ರೆಯಾಗಿದೆ.
ಬರ್ಡ್ ಆಸ್ಪತ್ರೆಯಲ್ಲಿ ಹೆಚ್ಚುವರಿ ವಾರ್ಡ್ಗಳು:
ಇನ್ನು, ಇಂದು ಸಂಜೆ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ತಿರುಪತಿಯ ಬರ್ಡ್ (BIIRD) ಆಸ್ಪತ್ರೆಯಲ್ಲಿ ಮೂಗ, ಕಿವುಡರಿಗೆ ಮತ್ತು ಕ್ಲೆಫ್ಟ್ ಪಲೇಟ್ಗೆ (Cleft Palate) ಪ್ರತ್ಯೇಕ ವಾರ್ಡ್ಗಳನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಸರಕಾರದ ಸರ್ವರಿಗೂ ಆರೋಗ್ಯ ಯೋಜನೆಯ ಭಾಗವಾಗಿ ಈ ವಾರ್ಡ್ಗಳನ್ನ ನಿರ್ಮಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications