ಮೋದಿಯ ಸ್ವಭಾವದಿಂದಲೇ ದೇಶದ ಅರ್ಥಿಕತೆ ಹಾಳು: ಚಂದ್ರಬಾಬು ನಾಯ್ಡು
Recommended Video

ವಿಶಾಖಪಟ್ಟಣ, ಡಿಸೆಂಬರ್ 22: "ಪ್ರಧಾನಿ ನರೇಂದ್ರ ಮೋದಿಯವರಲ್ಲಿರುವ ಋಣಾತ್ಮಕ ಸ್ವಭಾವದಿಂದಲೇ ಈ ದೇಶದ ಆರ್ಥಿಕತೆ ಹಾಳಾಗಿದೆ. ಮೋದಿ ಸರ್ಕಾರ ಈ ದೇಶದ ದೊಡ್ಡ ದುರಂತ" ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಆಂಧ್ರಪ್ರದೇಶದ ವಿಶಾಖಾಪಟ್ಟಣದಲ್ಲಿ ನಡೆದ ಇಂಡಿಯಾ ಟುಡೇ ಸೌತ್ ಕಾಂಕ್ಲೇವ್ ನಲ್ಲಿ ಅವರು ಮಾತನಾಡುತ್ತಿದ್ದರು. ಆರ್ಥಿಕತೆ ಮತ್ತು ಸಾಮಾಜಿಕ ಸ್ಥಿತಿಯೇ ಈ ಸರ್ಕಾರದ ಸಾಧನೆಯೇನು ಎಂಬುದಕ್ಕೆ ಸಾಕ್ಷಿ ಎಂದು ಲೇವಡಿ ಮಾಡಿದರು.
ಮೋದಿ ತಾವು ಬಹಳ ಗಟ್ಟಿ ಎನ್ನುತ್ತಾರೆ. ಆದರೆ ಈ ದೇಶಕ್ಕಾಗಿ ಅವರು ಏನು ಮಾಡಿದ್ದಾರೆ ಹೇಳಿ. ಭಾರತದ ಜನರಿಗೆ ಸರಿಯಾಗಿ ನಿದ್ದೆಯಿಲ್ಲ. ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾಂಡಪ್ ಇಂಡಿಯಾ ಎಂಬುದೆಲ್ಲ ಕೇವಲ ಘೋಷಣೆಗಳಷ್ಟೆ ಎಂದು ನಾಯ್ಡು, ಕೇಂದ್ರ ಸರ್ಕಾರದ ಮೇಲೆ ಟೀಕೆಗಳ ಸುರಿಮಳೆಗೈದಿದ್ದಾರೆ.

ಮೋದಿಯವರಿಗಿಂತ ಈ ದೇಶದ ಯಾರಾದರೂ ಉತ್ತಮ. ಅವರ ಋಣಾತ್ಮಕ ಮನಸ್ಥಿತಿಯಿಂದಲೇ ಈ ದೇಶದ ಆರ್ಥಿಕತೆ ಹಾಳಾಗಿದೆ. 2014 ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಸರ್ಕಾರವನ್ನು ಹಳಿದು ಅಧಿಕಾರಕ್ಕೆ ಬಂದರು. ಆದರೆ ಈಗ ಮೋದಿಯವರು ಮಾಡುತ್ತಿರುವುದೇನು? ಆ ಸರ್ಕಾರಕ್ಕೂ, ಈ ಸರ್ಕಾರಕ್ಕೂ ಏನು ವ್ಯತ್ಯಾಸ ಎಂದು ಅವರು ಕೇಳಿದರು.
"ಸಿಬಿಐ, ಆದಾಯ ತೆರಿಗೆ ಇಲಾಖೆ, ಇಡಿ ಎಲ್ಲವನ್ನೂ ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಈ ದೇಶದಲ್ಲಿ ಮುಸ್ಲಿಮರು, ಪರಿಶಿಷ್ಟ ಜಾತಿಯವರು ಭಯದಿಂದ ಬದುಕುತ್ತಿದ್ದಾರೆ. ರೈತರಿಗೆ ಸುಳ್ಳು ಹೇಳಲಾಗಿದೆ. ನಾನೂ ಮೊದಲು ಮೋದಿಯವರ ಘೋಷಣೆಯನ್ನೂ, ಮೋದಿಯವರನ್ನೂ ನಂಬಿದ್ದೆ. ಆದರೆ ಈಗ ಇಡೀ ದೇಶವ ಮೋದಿಯವರನ್ನು ನಂಬುತ್ತಿಲ್ಲ. ಅವರು ದೇಶಕ್ಕೆ ಮೋಸ ಮಾಡುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುತ್ತದೆ' ಎಂದು ಮೋದಿ ಸರ್ಕಾರದ ಮೇಲೆ ಎಂದಿನಂತೇ ವಾಕ್ಪ್ರಹಾರ ನಡೆಸಿದರು.
2014 ರ ಚುನಾವಣೆಯ ನಂತರ ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀದಿದ್ದ ಚಂದ್ರಬಾಬು ನಾಯ್ಡು, ನಂತರ ಅಲ್ಲಿಂದ ಹೊರಬಂದರು. ಇದೀಗ ಬಿಜೆಪಿ ವಿರೋಧಿ ಪಕ್ಷಗಳನ್ನೆಲ್ಲ ಒಗ್ಗೂಡಿಸಿ, ಮಹಾಘಟಬಂಧನ ರಚಿಸಲು ಖುದ್ದು ಆಸ್ಥೆಯಿಂದ ಓಡಾಡುತ್ತಿದ್ದಾರೆ.












Click it and Unblock the Notifications