ಚಂದ್ರಬಾಬು ನಾಯ್ಡು ಹಣಿಯಲು ಸಿಎಂ ಜಗನ್ ಇಟ್ಟ ಮೊದಲ ಹೆಜ್ಜೆ
ಎನ್ಡಿಎ ಮೈತ್ರಿಕೂಟದಿಂದ ತೆಲುಗುದೇಶಂ ಹೊರಬಂದ ನಂತರದ ಬೆಳವಣಿಗೆಗಳು ಚಂದ್ರಬಾಬು ನಾಯ್ಡು ಯೋಜನೆಯಂತೆ ನಡೆಯುತ್ತಿಲ್ಲ. ಒಂದು ಕಡೆ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲು, ಇನ್ನೊಂದು ಕಡೆ ಬಿಜೆಪಿ ವಿರುದ್ದ ಎಲ್ಲಾ ಪಕ್ಷಗಳನ್ನು ಒಗ್ಗೂಡಿಸಬೇಕು ಎನ್ನುವ ನಾಯ್ಡು ಪ್ರಯತ್ನ ಫಲಿಸಲೇ ಇಲ್ಲ.
ನರೇಂದ್ರ ಮೋದಿ, ಅಮಿತ್ ಶಾ ವಿರುದ್ದ ಟೀಕಿಸುವುದರಲ್ಲೇ ನಾಯ್ಡು ಕಾಲಕಳೆದರೆ, ಅತ್ತ ವೈ ಎಸ್ ಜಗನ್, ಪಾದಯಾತ್ರೆಯ ಮೂಲಕ ಮತದಾರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಅದರ ಫಲವೇ ಚುನಾವಣೆಯಲ್ಲಿ ಅಭೂತಪೂರ್ವ ಜಯ. 175 ಸದಸ್ಯ ಬಲದ ಅಸೆಂಬ್ಲಿಯಲ್ಲಿ ವೈಎಸ್ಆರ್ ಕಾಂಗ್ರೆಸ್ 151ಸ್ಥಾನಗಳನ್ನು ಗೆದ್ದರೆ, ತೆಲುಗುದೇಶಂ ಕೇವಲ 23ಸ್ಥಾನಗಳಲ್ಲಿ ಮಾತ್ರ ಜಯಗಳಿಸಲು ಸಾಧ್ಯವಾಯಿತು.
ಜಗನ್ ರೆಡ್ಡಿ ಸಿಎಂ ಪದವಿ ವಹಿಸಿಕೊಂಡ ತಕ್ಷಣ ವೃದ್ಧಾಪ್ಯ ಪಿಂಚಣಿ ಏರಿಕೆಗೆ ಮೊದಲ ಅಂಕಿತ
ಇನ್ನು 25 ಲೋಕಸಭಾ ಕ್ಷೇತ್ರಗಳ ಪೈಕಿ ಜಗನ್ ಪಕ್ಷ 22 ಸ್ಥಾನಗಳಲ್ಲಿ ಮತ್ತು ತೆಲುಗುದೇಶಂ 3ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಚಂದ್ರಬಾಬು ಎನ್ಡಿಎಯಿಂದ ದೂರವಾದ ನಂತರ, ಜಗನ್, ಬಿಜೆಪಿಗೆ ಹತ್ತಿರವಾದರು. ಚುನಾವಣೆಯಲ್ಲಿ ಗೆದ್ದು ಬಂದ ನಂತರ ಜಗನ್, ಮೋದಿಯವರನ್ನು ಭೇಟಿಯಾಗಿ ಶಾಲು ಹೊದಿಸಿ ಬಂದಿದ್ದಾರೆ.
ಆಂಧ್ರದಲ್ಲಿ ಸಿಬಿಐಗೆ ನಿರ್ಬಂಧ: ಚಂದ್ರಬಾಬು ನಾಯ್ಡು ನಿರ್ಧಾರದ ಹಿಂದಿನ ಅಸಲಿಯತ್ತೇನು?
ಅಧಿಕಾರಕ್ಕೆ ಬಂದ ಕೂಡಲೇ ವೃದ್ದಾಪ್ಯ ಪಿಂಚಣಿ ಏರಿಕೆ ಮಾಡಿದ ಜಗನ್, ಇದಾದ ನಂತರ ಆಶಾ ಕಾರ್ಯಕರ್ತರ ಗೌರವಧನವನ್ನೂ ಹೆಚ್ಚಿಸಿದ್ದರು. ಇದರ ಬೆನ್ನಲ್ಲೇ, ಈ ಹಿಂದೆ ಚಂದ್ರಬಾಬು ಅಧಿಕಾರದಲ್ಲಿದ್ದಾಗ ಸಿಬಿಐಗೆ ಹಾಕಿದ್ದ ಅಂಕುಶವನ್ನು ಜಗನ್ ತೆರವುಗೊಳಿಸುವಲ್ಲಿ ಹೆಜ್ಜೆಯನ್ನಿಟ್ಟಿದ್ದಾರೆ. ಇದು ನಾಯ್ಡು ಅವರನ್ನು ಹಣಿಯಲು ಇಟ್ಟ ಮೊದಲ ಹೆಜ್ಜೆಯೆಂದೇ ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ತನಿಖಾ ದಳ ಮತ್ತು ಆದಾಯ ತೆರಿಗೆ ಇಲಾಖೆ
ಆಂಧ್ರಪ್ರದೇಶದಲ್ಲಿ ಕೇಂದ್ರ ತನಿಖಾ ದಳ ಮತ್ತು ಆದಾಯ ತೆರಿಗೆ ಇಲಾಖೆ ಶೋಧ ಮತ್ತು ನೇರ ಕಾರ್ಯಾಚರಣೆ ನಡೆಸಲು ಇದ್ದ ಅನುಮತಿಯನ್ನು ಚಂದ್ರಬಾಬು ನಾಯ್ಡು ಹಿಂದಕ್ಕೆ ಪಡೆದಿದ್ದರು. ಕೇಂದ್ರದ ಮೋದಿ ಸರಕಾರ ಸಿಬಿಐ ಅನ್ನು ದುರಪಯೋಗ ಪಡೆಸಿಕೊಳ್ಳುತ್ತಿದೆ ಎನ್ನುವುದು ಚಂದ್ರಬಾಬು ಆರೋಪವಾಗಿತ್ತು.
ಭಾರೀ ಪ್ರಮಾಣದಲ್ಲಿ ದಾಖಲೆಗಳನ್ನೂ ವಶ ಪಡಿಸಿಕೊಳ್ಳಲಾಗಿತ್ತು
ಆದರೆ, ತಮ್ಮಾಪ್ತರ ಮನೆಯ ಮೇಲೆ ನಡೆದ ಆದಾಯ ತೆರಿಗೆ ದಾಳಿ ಮತ್ತು ಮುಂದಾಗಬಹುದಾದ ತನಿಖೆಗಳನ್ನು ತಪ್ಪಿಸಿಕೊಳ್ಳಲು ನಾಯ್ಡು ಈ ನಿರ್ಧಾರಕ್ಕೆ ಬಂದಿದ್ದರು ಎನ್ನುವ ಮಾತು ಚಾಲ್ತಿಯಲ್ಲಿತ್ತು. ತೆಲುಗುದೇಶಂನ ಹಲವು ಮುಖಂಡರ ಮನೆ/ಕಚೇರಿಯ ಮೇಲೆ ಆದಾಯ ತೆರಿಗೆ ದಾಳಿ ನಡೆದಿತ್ತು ಮತ್ತು ಭಾರೀ ಪ್ರಮಾಣದಲ್ಲಿ ದಾಖಲೆಗಳನ್ನೂ ವಶ ಪಡಿಸಿಕೊಳ್ಳಲಾಗಿತ್ತು.
ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಉಡುಗೊರೆ ಕೊಟ್ಟ ಹೊಸ ಸಿಎಂ ಜಗನ್ ರೆಡ್ಡಿ
ನಾಯ್ಡು ಅವರನ್ನು ಕೂಡಾ ವಿಚಾರಣೆಗೊಳಪಡಿಸಬಹುದು ಎನ್ನುವ ಪರಿಸ್ಥಿತಿ
ಒಂದು ಹಂತದಲ್ಲಿ, ಚಂದ್ರಬಾಬು ನಾಯ್ಡು ಅವರನ್ನು ಕೂಡಾ ವಿಚಾರಣೆಗೊಳಪಡಿಸಬಹುದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರ್ವತ್ರಿಕ ಚುನಾವಣಾ ಹೊಸ್ತಿಲಲ್ಲಿ, ಮುಜುಗರ ತಪ್ಪಿಸಿಕೊಳ್ಳಲು, ಸಿಬಿಐ ಮತ್ತು ಐಟಿಗೆ ನಾಯ್ಡು ನಿರ್ಬಂಧ ಹೇರಿದ್ದಾರೆ ಎನ್ನುವ ಮಾತು ಕೇಳಿಬರುತ್ತಿತ್ತು.
ಸಿಬಿಐಗೆ ನೀಡುವ ಸಾಮಾನ್ಯ ಸಮ್ಮತಿ
ಸಿಬಿಐಗೆ ನೀಡುವ ಸಾಮಾನ್ಯ ಸಮ್ಮತಿಯನ್ನು ಹೆಚ್ಚಾಗಿ ಪ್ರತೀ ರಾಜ್ಯಗಳು ವರ್ಷ ವರ್ಷ ನವೀಕರಣ ಮಾಡುತ್ತದೆ. ಅನುಮತಿ ಹಿಂದಕ್ಕೆ ಪಡೆದ ಮೂರು ತಿಂಗಳ ಹಿಂದೆ, ಅದನ್ನು ರಿನೀವ್ ಮಾಡಿದ್ದ ಚಂದ್ರಬಾಬುಗೆ, ಇದ್ದಕ್ಕಿದ್ದಂತೆಯೇ ಸಿಬಿಐ ಮತ್ತು ಐಟಿ ಮೇಲೆ ಅಪನಂಬಿಕೆ ಬರಲು ಕಾರಣವೇನು ಎನ್ನುವುದು ಆಂಧ್ರದಲ್ಲಿ ಬಹುದೊಡ್ದ ಚರ್ಚೆಯ ವಿಷಯವಾಗಿತ್ತು.
ಸಾಮಾನ್ಯ ಸಮ್ಮತಿ (ಫ್ರೀ ಪಾಸ್) ನೀಡಲು ವೈ ಎಸ್ ಜಗನ್ ನಿರ್ಧಾರಾ
ಈಗ, ಸಿಬಿಐ ಮತ್ತು ಐಟಿ ಇಲಾಖೆಗೆ ಸಾಮಾನ್ಯ ಸಮ್ಮತಿ (general consent, ಫ್ರೀ ಪಾಸ್) ನೀಡಲು ವೈ ಎಸ್ ಜಗನ್ ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ. ಇದು, ಚಂದ್ರಬಾಬು ನಾಯ್ಡು ಅವರನ್ನು ಹಣೆಯಲು, ಸಿಎಂ ಜಗನ್ ಇಟ್ಟ ಮೊದಲ ಹೆಜ್ಜೆಯೆಂದೇ ವ್ಯಾಖ್ಯಾನಿಸಲಾಗುತ್ತಿದೆ. ತಮ್ಮ ಆಪ್ತರ, ಪಕ್ಷದ ಮುಖಂಡರ ಮೇಲೆ, ಈ ಹಿಂದಿನ ದಾಳಿಯ ವೇಳೆ ವಶಪಡಿಸಿಕೊಂಡಿರುವ ದಾಖಲೆಗಳು ಪಕ್ಕಾ ಇದ್ದಲ್ಲಿ ನಾಯ್ಡು ಬಚಾವ್, ಇಲ್ಲದಿದ್ದರೆ ಸಂಕಷ್ಟ ಗ್ಯಾರಂಟಿ.