ಮೋದಿ ತವರಲ್ಲಿ ದಯಾಮರಣ ಬಯಸಿದ ಮುಸ್ಲಿಂ ಮೀನುಗಾರರು
ಅಹಮದಾಬಾದ್ ಮೇ 7: 'ಇಲ್ಲಿ ನಾವು ಸಹಸ್ರಾರು ವರ್ಷಗಳಿಂದ ಬದುಕಿದ್ದೇವೆ. ಆದರೆ ಈಗ ಸಾಯಲು ಬಯಸುತ್ತಿದ್ದೇವೆ' ಎಂದು ಮುಸ್ಲಿಂ ಮೀನುಗಾರ ಸಮುದಾಯದ ನಾಯಕರೊಬ್ಬರು ತನಗೆ ಮತ್ತು ತನ್ನ 600 ಜನ ಸದಸ್ಯರಿಗೆ ದಯಾಮರಣಕ್ಕೆ ಅನುಮತಿ ಕೋರಿ ಗುಜರಾತ್ ಹೈಕೋರ್ಟ್ನ ಮೊರೆ ಹೋಗಿದ್ದಾರೆ.
ಇಂಥಹದೊಂದು ಸುದ್ದಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ಪೋರಬಂದರ್ನಿಂದ ಬಂದಿದೆ. ಧರ್ಮದ ಆಧಾರದ ಮೇಲೆ ತುತ್ತು ಅನ್ನಕ್ಕೂ ಕನ್ನ ಹಾಕುತ್ತಿರುವ ಆರೋಪವನ್ನು ಇಲ್ಲಿನ ಮುಸ್ಲಿಂ ಮೀನುಗಾರರು ಮಾಡಿದ್ದಾರೆ.
ಮೀನುಗಾರ ಸಮುದಾಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ವಿಷಾದ ವ್ಯಕ್ತಪಡಿಸಿ ಪೋರಬಂದರ್ನ ಗೋಸಾಬರ ಜೌಗು ಪ್ರದೇಶದ ಅಲ್ಲಾರಾಖಾ ಇಸ್ಮಾಯಿಲ್ಭಾಯಿ ತಿಮ್ಮರ್ ಅವರು ಗುರುವಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಗೋಸಾಬರ ಮುಸ್ಲಿಂ ಮೀನುಗಾರರ ಸೊಸೈಟಿಯ ಪರವಾಗಿ ಸಲ್ಲಿಸಲಾದ ಅರ್ಜಿಯಲ್ಲಿ, "ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರಿಗೆ ಸರ್ಕಾರವು ಸೌಲಭ್ಯಗಳನ್ನು ಒದಗಿಸುವುದಿಲ್ಲ" ಎಂದು ಆರೋಪಿಸಿದೆ.

ರಾಜಕೀಯ ಕಿರುಕುಳವನ್ನು ಎದುರಿಸುತ್ತಿರುವ ಅರ್ಜಿದಾರರು ತಮ್ಮ ಜೀವನವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ಮಟ್ಟದಿಂದ ರಾಜ್ಯಪಾಲರಿಗೆ ಹಲವಾರು ಅರ್ಜಿಗಳನ್ನು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅರ್ಜಿದಾರರ ವಕೀಲ ಧರ್ಮೇಶ್ ಗುರ್ಜಾರ್ ಅವರು ಹೇಳುವಂತೆ, "2016 ರಿಂದ ಗೋಸಾಬರ ಬಂದರಿನಲ್ಲಿ ದೋಣಿಗಳ ಮೂರಿಂಗ್ ಅನ್ನು ನಿಷೇಧಿಸಲಾಗಿದೆ. ಹೀಗಾಗಿ ತಿಮ್ಮರ್ ಮತ್ತು ಅವರ ಸಮುದಾಯವು ಪರವಾನಗಿ ಹೊಂದಿದ್ದರೂ ಅವರ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ," ಎಂದಿದ್ದಾರೆ.

ಧರ್ಮದ ಆಧಾರದ ಮೇಲೆ ಅಧಿಕಾರಿಗಳು ತಮ್ಮ ಕುಟುಂಬಗಳಿಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಹಿಂದೂ ಮೀನುಗಾರರಿಗೆ ನಿಯಮಿತವಾಗಿ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ತಿಮ್ಮರ್ ಆರೋಪಿಸಿದ್ದಾರೆ. ನಮ್ಮ ಸಮುದಾಯವು ಯಾವಾಗಲೂ "ರಾಷ್ಟ್ರಕ್ಕೆ ನಿಷ್ಠವಾಗಿದೆ" ಮತ್ತು ಕಳ್ಳಸಾಗಣೆಯಂತಹ "ದೇಶವಿರೋಧಿ ಚಟುವಟಿಕೆಗಳಲ್ಲಿ" ಎಂದಿಗೂ ತೊಡಗಿಸಿಕೊಂಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಬದಲಾಗಿ ನಮ್ಮ ಮೇಲೆ ಅನೇಕ ಆರೋಪಗಳನ್ನು ಮಾಡಲಾಗುತ್ತಿದೆ. ನಮ್ಮ ದುಡಿಮೆ ಅಡ್ಡಿಪಡಿಸಲಾಗುತ್ತಿದೆ. ಇದರಿಂದ ನಮಗೆ ತುತ್ತು ಅನ್ನಕ್ಕೂ ಕಷ್ಟಪಡುವಂತಾಗಿದೆ. ಹೀಗಾಗಿ ನಮಗೆ ದಯಾಮರಣಕ್ಕೆ ಅನುಮತಿಸಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.












Click it and Unblock the Notifications