ನಾಳೆಯನ್ನು ಇಂದೇ ನೋಡಬಲ್ಲ ಕನ್ನಡತಿ ಅಶ್ವಿನಿ
ವ್ಯವಸ್ಥೆಯಲ್ಲಿ ಸುಧಾರಣೆ ತಂದು, ದೃಷ್ಟಿ ನ್ಯೂನತೆ ಇರುವ ಜನರ ಕಲಿಕೆಗೆ ಸ್ಪೂರ್ತಿಯಾದ ಬೆಂಗಳೂರಿನ ದೃಷ್ಟಿ ವಿಕಲಚೇತನ ಯುವತಿ ಅಶ್ವಿನಿ ಅಂಗಡಿ ಅವರಿಗೆ ವಿಶ್ವಸಂಸ್ಥೆಯು ಜುಲೈ 12ರ ಮಲಾಲಾ ದಿನದಂದು ಗಾರ್ಡನ್ ಬ್ರೌನ್ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಶಸ್ತಿ ಪಡೆದೆ ಸಂಭ್ರಮವನ್ನು ಹಂಚಿಕೊಂಡಿರುವ ಅಶ್ವಿನಿ, ತಾಲಿಬಾನ್ ಸರ್ಕಾರದ ವಿರುದ್ಧ ಶಿಕ್ಷಣದ ಹಕ್ಕಿಗಾಗಿ ಹೋರಾಡಿದ ಮಾಲಾಲಾ ಅವರು, ನನ್ನ ಭಾಷಣದ ನಂತರ ನನ್ನ ಜೊತೆ ಮಾತನಾಡಿದರು. ನೀವು ಜಗತ್ತಿಗೆ ಸ್ಪೂರ್ತಿಯಾಗಿದ್ದೀರಿ ಎಂದು ಹೇಳಿದರು ಎಂದು ನೆನಪು ಮಾಡಿಕೊಂಡರು.
24 ವರ್ಷ ವಯಸ್ಸಿನ ಅಶ್ವಿನಿ ಅಂಗಡಿ ಮೂಲತಃ ಬಳ್ಳಾರಿ ಜಿಲ್ಲೆ, ಚೆಲಗುರ್ಕಿಯವರು. ಸದ್ಯ ಅವರು ಶೇಷಾದ್ರಿಪುರಂದಲ್ಲಿ ನೆಲೆಸಿದ್ದಾರೆ. ಆದ್ದರಿಂದ ಬೆಂಗಳೂರು ಹುಡುಗಿಯಾಗಿದ್ದಾರೆ.
ಹುಟ್ಟಿನಿಂದಲೇ ದೃಷ್ಟಿ ವಿಕಲಚೇತನರಾಗಿದ್ದ ಅಶ್ವಿನಿ ಜೆಪಿ ನಗರದಲ್ಲಿರುವ ರಮಣಶ್ರೀ ಅಂಧರ ಕೇಂದ್ರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಬಳಿಕ ಜಯನಗರದ ಎನ್ಎಂಕೆಆರ್ ವಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮಹಾರಾಣಿ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದಾರೆ.
ಕಳೆದ ವರ್ಷ ಬಿಎ ಪದವಿ ಮುಗಿಸಿರುವ ಅಶ್ವಿನಿ ಸದ್ಯ ಯುವಧ್ವನಿ ಕಾರ್ಯಕ್ರಮದ ಮೂಲಕ ವಿಕಲಚೇತನ ಮಕ್ಕಳ ಪ್ರತಿಭೆ ಗುರುತಿಸುವಿಕೆ ಮತ್ತು ಅವರಲ್ಲಿ ನಾಯಕತ್ವ ಗುಣ ಬೆಳೆಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕಾಲೇಜು ದಿನದ ನೆನೆಪನ್ನು ಬಿಚ್ಚಿಟ್ಟ ಅಶ್ವಿನಿ ಅವರು, ನಾನು ತರಗತಿಯ ಒಂದು ಮೂಲೆಯಲ್ಲಿ ಕುಳಿತಿರುತ್ತಿದ್ದೆ. ಉಪನ್ಯಾಸಕರಿಗೂ ನಾನು ಕಾಲೇಜಿಗೆ ಬಂದಿದ್ದೇನೆಯೇ ? ಇಲ್ಲವೇ ಎಂಬುದು ಪ್ರಮುಖ ವಿಷಯವಾಗಿರಲಿಲ್ಲ.
ಆದರೆ, ನನಗೆ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಬಂದಾಗ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡುವ ಅವಕಾಶ ಸಿಕ್ಕಿತ್ತು. ಆಗ ನಾನು ನಿಮ್ಮಹಾಗೆ ಒಬ್ಬಳು ವಿದ್ಯಾರ್ಥಿ, ನನಗೂ ಅವಕಾಶ ಕೊಡಿ ಎಂದು ಕೇಳಿದೆ. ಅಂದಿನಿಂದ ನನಗೆ ಕಾಲೇಜಿನ ತುಂಬಾ ಸ್ನೇಹಿತರು ಸಿಕ್ಕಿದರೂ ಎಂದು ಅಶ್ವಿನಿ ಹೇಳಿದರು.
ಸರ್ಕಾರವೂ ಸಹ ವಿಕಲಚೇತನರಿಗೆ ಸೂಕ್ತ ಅವಕಾಶ ನೀಡುತ್ತಿಲ್ಲ ಎಂದು ಅಶ್ವಿನಿ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಸರ್ಕಾರ ನಮ್ಮ ಪ್ರತಿಭೆ ನೋಡಿ ನಮಗೆ ಅವಕಾಶ ನೀಡಬೇಕು. ಆದರೆ, ಅವರು ನಮ್ಮಿಂದ ಏನೂ ಸಾಧ್ಯವಿಲ್ಲ ಎಂಬ ದೃಷ್ಟಿಯಿಂದ ನೋಡುತ್ತದೆ ಎಂದು ಹೇಳಿದರು.
ನಾವೇ ನಮಗೆ ಸ್ಪೂರ್ತಿ : ಜೀವನದ ಸವಾಲುಗಳನ್ನು ಎದುರಿಸಲು ನಾವೇ ನಮಗೆ ಸ್ಪೂರ್ತಿಯಾಗಬೇಕು. ವಿಕಲಚೇತನರ ಬದುಕೇ ಅವರಿಗೆ ಸ್ಪೂರ್ತಿಯಾಗಿ ಸಾಧನೆ ಮಾಡಬೇಕು ಎಂದು ಅಶ್ವಿನಿ ಕರೆ ನೀಡುತ್ತಾರೆ. ಅಶ್ವಿನಿ ಅವರ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗಲಿ ಎಂಬುದೇ ನಮ್ಮ ಆಶಯ. (ಮಹಾತ್ಮಾ ಗಾಂಧಿ ನನ್ನ ಸ್ಫೂರ್ತಿ: ಮಲಾಲಾ)