BBMP: ಮರ ಕಡೀತಿದ್ದಾರೆ, ಯಾರಿಗೆ ದೂರು ನೀಡಲಿ?
ಬೆಂಗಳೂರು, ಜುಲೈ 5: ರಾಜಧಾನಿ ಬೆಂಗಳೂರಿಗೆ ಹವಾನಿಯಂತ್ರಿತ ನಗರ ಎಂಬ ಹೆಸರು/ಹೆಗ್ಗಳಿಕೆಯನ್ನು ತಂದುಕೊಟ್ಟ ಗಿಡ-ಮರಗಳಿಗೆ ಆಗಾಗ ಕೊಡಲಿ ಪೆಟ್ಟು ಬೀಳುತ್ತಲೇ ಇರುತ್ತದೆ. ಆದರೆ ನಮ್ಮ ಸುತ್ತಮುತ್ತಲ ಗಿಡ-ಮರಗಳನ್ನು ರಕ್ಷಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಆಗಬೇಕು. ಇಷ್ಟು ಹೇಳಿದ ಮೇಲೆ...
ಅಯ್ಯೋ ನನ್ನ ಎದುರಿಗೇ ಮರ ಕಡಿಯುತ್ತಿದ್ದಾರೆ ನಾನು ಯಾರಿಗೆ ದೂರು ನೀಡಲಿ? ಎಂಬುದು ನಿಮ್ಮ ಪ್ರಶ್ನೆಯಾದೀತು. ಆದರೆ ಒಂದು ತಿಳಿದುಕೊಳ್ಳಿ. ಬೆಂಗಳೂರಿನಲ್ಲಿ ಅಂತಲೇ ಅಲ್ಲ. ಅಲ್ಲೇ ಆಗಲಿ... ಅದು ಖಾಸಗೀ ಮರ ಅಂದರೆ ನೀವೇ ಬೆಳೆಸಿದ ಮರವಾಗಲಿ ಅಥವಾ ಸರಕಾರದ ವತಿಯಿಂದ ಬೆಳೆಸಿದ ಮರವನ್ನೇ ಆಗಲಿ ಕಡಿಯುವುದು ಶಿಕ್ಷಾರ್ಹ ಅಪರಾಧ.
ಯಾರೇ ಆಗಲಿ ಅವರ ಇಷ್ಟಾನುಸಾರ ಗಿಡ-ಮರಗಳನ್ನು ಕಡಿದು ಹಾಕುವುದು ಶುದ್ಧ ತಪ್ಪು. ಮರಗಳನ್ನು ತಮ್ಮ ಸ್ವಹಿತಾಸಕ್ತಿಗಾಗಿ ಕಡಿದು ಹಾಕುತ್ತಿದ್ದಾರೆ ಎಂಬುದು ನಿಮಗೆ ಮನದಟ್ಟಾದರೆ ಮೊದಲು ನೀವು ಮಾಡಬೇಕಾದ ಕೆಲಸ ಸಮೀಪದ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸುವುದು.
ಇಲ್ಲಿ ಮತ್ತೊಂದು ವಿಷಯವನ್ನು ಸ್ಪಷ್ಟಪಡಿಸಲೇಬೇಕು. ನಿಮ್ಮ ಮನೆ ಬಳಿಯಿರುವ ಮರದಿಂದ ನಿಮಗೆ ಭಾರಿ ತೊಂದರೆ ಆಗುತ್ತಿದೆ ಎಂದಾದರೆ ಖಂಡಿತ ನೀವು ಅದನ್ನು ಕಡಿಸಬಹುದು. ಆದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ order copy ಮಾಡಿಸಿಕೊಳ್ಳಲೇಬೇಕು.
ಅಂದರೆ ಆ ಮರದಿಂದ ನಿಮಗೆ ಏನು ತೊಂದರೆಯಾಗುತ್ತಿದೆ ಎಂಬುದನ್ನು ಮನದಟ್ಟು ಪಡಿಸಿ, ಸಂಬಂಧಪಟ್ಟ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಪರಿಗಣಿಸಿ, ಹಿರಿಯ ಅಧಿಕಾರಿಯು ವಿಷಯವನ್ನು ತಮ್ಮ ತಂಡದ ಗಮನಕ್ಕೆ ತರುತ್ತಾರೆ. ತಂಡವು ಸ್ಥಳ ಪರೀಕ್ಷೆ ನಡೆಸಿ, ಸಮಸ್ಯೆ ಇದೆ ಎಂದು ದೃಢಪಡಿಸಿದರೆ ತಕ್ಷಣ ಹಿರಿಯ ಅಧಿಕಾರಿ ಅರ್ಜಿಯನ್ನು ಊರ್ಜಿತಗೊಳಿಸಿ, ಮರ ಕಡಿಯುವುದಕ್ಕೆ ಆದೇಶ (order copy) ನೀಡುತ್ತಾರೆ.
ಅಲ್ಲಿಂದ ಮುಂದಕ್ಕೆ order copy ಪಡೆದು ಸ್ಥಳಕ್ಕೆ ಧಾವಿಸುವ ಕಾರ್ಯ ತಂಡವು ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ, ವಿದ್ಯುತ್ ತಂತಿ/ಟೆಲಿಫೋನ್ ತಂತಿಗಳು ಮರದ ಮೇಲೆ ಹಾದುಹೋಗುತ್ತಿದ್ದರೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ತಂತಿಗಳಿಗೆ ಧಕ್ಕೆಯಾಗದಂತೆ ಮರ ಕಡಿಯಲು ಮುಂದಾಗುತ್ತಾರೆ.
ಒಂದು ವೇಳೆ ಹೀಗೆ order copy ಇಲ್ಲದೆ ನಿಮಗೆ ನೀವೇ ಮರ ಕಡಿಯುವುದಾದರೆ ಅದು ಖಂಡಿತ ಶಿಕ್ಷಾರ್ಹ ಅಪರಾಧವಾಗುತ್ತದೆ, ಎಚ್ಚರ.