ಸೋತ ಶಾಸಕರಿಗೆ ಲೋಕಾಯುಕ್ತರ ಭೀತಿ

ಹಾಲಿ 39 ಶಾಸಕರ ಮೇಲೆ ಅಕ್ರಮ ಆಸ್ತಿ, ಡಿನೋಟಿಫಿಕೇಶನ್, ಸರ್ಕಾರಿ ಆಸ್ತಿ ಕಬಳಿಕೆ ಮುಂತಾದ ಪ್ರಕರಣಗಳು ದಾಖಲಾಗಿವೆ. ಏಳು ಮಂದಿ ಹಾಲಿ ಸಚಿವರು ಮತ್ತು ವಿವಿಧ ಪಕ್ಷಗಳ 32 ಶಾಸಕರ ಮೇಲೆ ಲೋಕಾಯುಕ್ತದಲ್ಲಿ ಖಾಸಗಿ ಪ್ರಕರಣಗಳು ದಾಖಲಾಗಿವೆ.
ಹಾಲಿ ಬಿಜೆಪಿಯ ಶಾಸಕರು ಮತ್ತು ಸಚಿವರ ವಿರುದ್ದ ತನಿಖೆ ನಡೆಸಲು ಅವಕಾಶ ನೀಡುವಂತೆ ಕೋರಿ ಲೋಕಾಯುಕ್ತರು ಸ್ಪೀಕರ್ ಅವರಿಗೆ ಪತ್ರ ಬರೆದು ತಿಂಗಳುಗಳೇ ಕಳೆದಿವೆ. ಆದರೆ, ಇದುವರೆಗೂ ಯಾವುದೇ ಆದೇಶ ಹೊರಬಿದ್ದಿಲ್ಲ.
ಒಂದು ವೇಳೆ ಚುನಾವಣೆಯಲ್ಲಿ ಈ ಶಾಸಕರು ಸೋತರೆ ಯಾರ ಅನುಮತಿಗೂ ಕಾಯದೇ ಲೋಕಾಯುಕ್ತರು ತನಿಖೆ ಮುಂದುವರೆಸಬಹುದು. ಶಾಸಕರು ಜಯಗಳಿಸಿ ಬೇರೆ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದೂ ಇವರಿಗೆ ಲೋಕಾ ಕಂಟಕ ಪ್ರಾರಂಭವಾಗಲಿದೆ.
ಎಲ್ಲಾ ಸಮೀಕ್ಷೆಗಳಂತೆ ಕಾಂಗ್ರೆಸ್ ಸರ್ಕಾರ ಬಹುಮತ ಪಡೆದು ಅಧಿಕಾರ ಪಡೆದರೆ, ಮೊದಲು ಬಿಜೆಪಿ ಸಚಿವರು ಮತ್ತು ಶಾಸಕರ ವಿರುದ್ದ ಲೋಕಾಯುಕ್ತ ತನಿಖೆ ನಡೆಸಲು ಅನುಮತಿ ನೀಡುತ್ತಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ.
ಆದ್ದರಿಂದ ಲೋಕಾಯುಕ್ತ ತನಿಖೆಯಿಂದ ಸ್ವಲ್ಪ ದಿನಗಳ ಮಟ್ಟಿಗೆ ತಪ್ಪಿಸಿಕೊಳ್ಳಲು ಶಾಸಕರು ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಶಾಸಕರ ಭವಿಷ್ಯ ಏನಾಗಲಿದೆ ಎಂಬುದು ನಾಳೆ ಹೊರಬೀಳುವ ಫಲಿತಾಂಶದ ಮೇಲೆ ನಿರ್ಧರಿತವಾಗಲಿದೆ.
ಪ್ರಮುಖ ಸಚಿವರು : ಆರ್.ಅಶೋಕ್, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಜೀವರಾಜ್, ರಾಮದಾಸ್, ವೀಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಎ.ರವೀಂದ್ರನಾಥ್, ಅಪ್ಪಚ್ಚು ರಂಜನ್, ವರ್ತೂರು ಪ್ರಕಾಶ್, ಮುರುಗೇಶ್ ನಿರಾಣಿ ಮುಂತಾದವರು.
ಪ್ರಮುಖ ಶಾಸಕರು : ಎಂ.ಶ್ರೀನಿವಾಸ್, ಶಂಕರಲಿಂಗೇಗೌಡ, ಕಟ್ಟಾ ಸುಬ್ರಮಣ್ಯ ನಾಯ್ಡು, ಎಸ್.ಆರ್.ವಿಶ್ವನಾಥ್, ಶಂಕರಲಿಂಗೇ ಗೌಡ, ಸಂಜಯ್ ಪಾಟೀಲ್, ಅಭಯ್ ಪಾಟೀಲ್, ಸೋಮಶೇಖರ ರೆಡ್ಡಿ ಮುಂತಾದವರು.
ಕಾಗೇರಿ, ಜ್ಞಾನೇಂದ್ರ ವಿರುದ್ಧ ತನಿಖೆಗೆ ಅಸ್ತು : ಎಂಪಿಎಂ ಕಾರ್ಖನೆ ಅನುದಾನ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕ ಆರಗ ಜ್ಞಾನೇಂದ್ರ ವಿರುದ್ದ ತನಿಖೆ ನಡೆಸಿ ಜೂ.6ರಂದು ವರದಿ ನೀಡುವಂತೆ ಶಿವಮೊಗ್ಗ ಲೋಕಾಯುಕ್ತ ನ್ಯಾಯಾಲಯ ಸೋಮವಾರ ಆದೇಶಿಸಿದೆ.












Click it and Unblock the Notifications