ಸಮ್ಮಿಶ್ರ ಸರ್ಕಾರ ರಚಿಸುವುದು ಜೆಡಿಎಸ್ ಗುರಿ : ಕೃಷ್ಣ

ಭಾನುವಾರ ಸಂಜೆ ಕಡೂರಿನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಕೃಷ್ಣ, ಯಾವುದೇ ರಾಜ್ಯವಾದರೂ ಏಕ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರಬೇಕು. ಆದರೆ, ಜೆಡಿಎಸ್ ನಂತಹ ಪ್ರಾದೇಶಿಕ ಪಕ್ಷ ಸಮ್ಮಿಶ್ರ ಸರ್ಕಾರ ರಚನೆ ಆಗಲಿ ಎಂದು ಶ್ರಮಿಸುತ್ತಿದೆ. ಕೇವಲ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆ ಮತ ನೀಡಿ ಎಂದು ಅವರು ಮನವಿ ಮಾಡಿದರು.
ಬಿಜೆಪಿ ಸರ್ಕಾರ ಮೂರು ವರ್ಷಗಳಿಗೆ ಮೂವರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿ ಸಮ್ಮಶ್ರ ಸರ್ಕಾರದಂತೆ ಆಡಳಿತ ನಡೆಸಿದೆ. ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದೆ, ಸ್ಥಿರ ಸರ್ಕಾರ ನಡೆಸುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಅವರು ಕೋರಿದರು.
ಕಾಂಗ್ರೆಸ್ ಸ್ಪಷ್ಟ ಬಹುಮತಗಳಿಸಲಿದೆ ಎಂಬ ಸಮೀಕ್ಷೆಗಳು ಸತ್ಯವಾಗಿವೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ಣಾಟಕ ಎಂದರೆ ವಿದೇಶಿಯರು ಗೌರವದಿಂದ ನೋಡುತ್ತಿದ್ದರು. ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ವಿಧಾನಸೌಧದ ಘನತೆಯ ಜೊತೆಗೆ ರಾಜ್ಯದ ಗೌರವಕ್ಕೂ ಚ್ಯುತಿ ತರುವಂತೆ ಆಡಳಿತ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ನಡೆಸಿದ ಭ್ರಷ್ಟ ಆಡಳಿತದಿಂದ ದೇಶದಲ್ಲಿ ರಾಜ್ಯಕ್ಕೆ ಕಪ್ಪು ಚುಕ್ಕೆ ತಗುಲಿದೆ ಎಂದು ದೂರಿದರು.
1989ರಲ್ಲಿ 189 ಸ್ಥಾನ ಪಡೆದು ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಮೂವರಿಗೆ ಮುಖ್ಯಮಂತ್ರಿ ಹುದ್ದೆ ಕೊಟ್ಟ ಕಾರಣ ನಂತರದ ಚುನಾವಣೆಯಲ್ಲಿ ಕೇವಲ 34 ಸ್ಥಾನ ಪಡೆಯುವ ದುರ್ಗತಿ ಬಂದಿತ್ತು. ಬಿಜೆಪಿಗೂ ಈ ಚುನಾವಣೆಯಲ್ಲಿ ಇಂತಹ ಸ್ಥಿತಿ ಬರಲಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿ ಪಕ್ಷವನ್ನು ಮುನ್ನೆಡೆಸುವ ಶಕ್ತಿ ಕೇವಲ ವಾಜಪೇಯಿ ಅವರಿಗಿತ್ತು. ಸದ್ಯ ನಾಯಕರ ಕೊರತೆ ಎದುರಿಸುತ್ತಿರುವ ಬಿಜೆಪಿ ಆರ್ಎಸ್ಎಸ್ ಸಂಘಟನೆಯ ಕೈಗೊಂಬೆಯಾಗಿದೆ ಎಂದರು. ಕಡೂರು, ಅರಸೀಕರೆ, ಶಿವಮೊಗ್ಗ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೃಷ್ಣ ಪ್ರಚಾರ ನಡೆಸಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications