ಕೃಷ್ಣ ಬೈರೇಗೌಡರಿಗೆ ಸಾಥ್ ನೀಡಿದ ಬುಲೆಟ್
ಬೆಂಗಳೂರು, ಏ. 26 : ಬ್ಯಾಟರಾಯನಪುರದಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಕೆಲ ದಿನಗಳ ಹಿಂದೆ ಬಿಡುಗಡೆಯಾದ 'ಪರಾರಿ' [ವಿಮರ್ಶೆ] ಕನ್ನಡ ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿರುವ ಹಾಸ್ಯ ನಟ ಬುಲೆಟ್ ಪ್ರಕಾಶ್ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡರ ಪರವಾಗಿ ರೋಡ್ ಶೋನಲ್ಲಿ ಭಾಗವಹಿಸಿದರು.
ಕೃಷ್ಣ ಅವರು ಎಂದೂ ಸುಳ್ಳು ಭರವಸೆ ನೀಡುವುದಿಲ್ಲ. ಅವರ ಭರವಸೆಗಳೆಲ್ಲ ವಾಸ್ತವಿಕ ಮತ್ತು ಜಾತ್ಯತೀತ. ವಿವಿಧ ಜಾತಿಗಳ ನಡುವೆ, ಬಡವರು, ಶ್ರೀಮಂತರ ನಡುವೆ 'ವಿಭಜಿಸಿ ಆಳುವ' ಆಟವನ್ನು ಕೃಷ್ಣ ಆಡುವುದೇ ಇಲ್ಲ. ಅವರದು ಏನಿದ್ದರೂ ರಾಜಧರ್ಮ, ರಾಜಕೀಯ 'ಡ್ರಾಮಾ' ಅವರಿಗೆ ಗೊತ್ತಿಲ್ಲ ಎಂದು ಪ್ರಕಾಶ್ ಕೃಷ್ಣರನ್ನು ಹಾಡಿಹೊಗಳಿದರು.
ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಸಾರ್ವಜನಿಕ ಹಣದ ಲೂಟಿ ಪ್ರಕರಣಗಳನ್ನು ಹೋಲಿಸಿದಾಗ, ಕೃಷ್ಣ ಅವರ 3 ಬಾರಿಯ ಶಾಸಕತ್ವದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಪ್ರಕರಣವೂ ನಡೆದಿಲ್ಲ. ಸಾರ್ವಜನಿಕ ಹಣ ಶೇ 100ರಷ್ಟು ಜನರಿಗಾಗಿಯೇ ಬಳಕೆಯಾಗಬೇಕು ಎಂದು ಕೃಷ್ಣಬೈರೇಗೌಡರು (ಫೇಸ್ ಬುಕ್ ಪುಟ) ಬಲವಾಗಿ ನಂಬಿದ್ದಾರೆ ಎಂದರು. ಬುಲೆಟ್ ಪ್ರಕಾಶ್ ಆಗಮನ ಸಾವಿರಾರು ಅಭಿಮಾನಿಗಳಿಗೆ ಖುಷಿ ನೀಡಿತು.
ಚುನಾವಣಾ ಕಣದಲ್ಲಿ ಇಳಿದಿರುವ ನಟನಟಿಯರು ಹಲವರಾದರೆ, ಚುನಾವಣೆಗೆ ನಿಲ್ಲದೆ ಬರೀ ಪ್ರಚಾರ ಮಾಡುತ್ತಿರುವವರ ದಂಡೇ ಕನ್ನಡ ಚಿತ್ರರಂಗದಲ್ಲಿ ತಯಾರಾಗಿದೆ. ಅವರಲ್ಲನೇಕರು ನಾನಾ ಪಕ್ಷಗಳಿಗೆ ಪ್ರಚಾರ ಮಾಡುತ್ತಿದ್ದಾರೆ. ಅವರಾರೆಂದರೆ...
ಬುಲೆಟ್ ಪ್ರಕಾಶ್
ಬ್ಯಾಟರಾಯನಪುರ ವಿಧಾನಸಭಾ ವ್ಯಾಪ್ತಿಯ ಬಾಗಲೂರು, ಹೂವಿನಾಯಕನಹಳ್ಳಿ, ಬಂಡಿ ಕೊಡಿಗೇಹಳ್ಳಿ, ಜಾಲ ಹೋಬಳಿ ಸೇರಿದಂತೆ ವಿವಿಧೆಡೆ ಪ್ರಚಾರ ಕಾರ್ಯ ನಡೆಸಿದ ಬುಲೆಟ್ ಪ್ರಕಾಶ್ ತಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ. ಆದರೆ ಕೃಷ್ಣ ಬೈರೇಗೌಡರು ಸ್ವಚ್ಛ ರಾಜಕಾರಣಿ. ವ್ಯಕ್ತಿಯ ಪರವಾಗಿ ಪ್ರಚಾರ ನಡೆಸುತ್ತಿದ್ದೇನೆ. ಅವರು ಕೊಳಕು ರಾಜಕೀಯ ಮಾಡುವುದಿಲ್ಲ. ಇದನ್ನು ವಿರೋಧಿಗಳೂ ಒಪ್ಪುತ್ತಾರೆ ಎಂದು ಬುಲೆಟ್ ಹೇಳಿದರು.
ದರ್ಶನ್
ಚಾಲೇಂಜಿಂಗ್ ಸ್ಟಾರ್ ದರ್ಶನ್ ಈ ಚುನಾವಣೆಯಲ್ಲಿ ಡಬಲ್ ರೋಲ್ ಮಾಡುತ್ತಿದ್ದಾರೆ. ತಾವು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ, ಆದರೆ ವ್ಯಕ್ತಿಯ ಪರವಾಗಿ ಪ್ರಚಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. ಈಗಾಗಲೆ ಅವರು ತಮ್ಮ ಆರಾಧ್ಯ ನಟ ಅಂಬರೀಷ್ ಪರವಾಗಿ ಮತ್ತು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ಮಾಪಕ, ಕಿತ್ತೂರಿನ ಜೆಡಿಎಸ್ ಅಭ್ಯರ್ಥಿ ಆನಂದ್ ಅಪ್ಪುಗೋಳ್ ಅವರ ಪರವಾಗಿ ಮತ ಯಾಚಿಸಿದ್ದಾರೆ.
ಸುದೀಪ್
ನಾನು ಕೇವಲ ಪ್ರಚಾರಕ್ಕೆ ಮಾತ್ರ ಬಂದಿದ್ದೇನೆ, ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಎಂದು ಹೇಳಿರುವ 'ಆಂಗ್ರಿ ಯಂಗ್ ಮ್ಯಾನ್' ಸುದೀಪ್ ಬಿಜೆಪಿಯ ಪದ್ಮನಾಭನಗರ ಕ್ಷೇತ್ರದ ಅಭ್ಯರ್ಥಿ ಆರ್ ಅಶೋಕ್ ಅವರ ಪರವಾಗಿ ಮತ ಯಾಚನೆಗೆ ಇಳಿದಿದ್ದಾರೆ. ಮುಂದೆಂದಾದರೂ ರಾಜಕೀಯಕ್ಕೆ ಬರ್ತಾರಾ? ಈಗಲೇ ಹೇಳುವುದು ಹೇಗೆರೀ?
ಭಾವನಾ
ಚಂದ್ರಮುಖಿ ಪ್ರಾಣಸಖಿ ಖ್ಯಾತಿಯ ಮತ್ತು ಭಾಗೀರತಿ ಚಿತ್ರಕ್ಕಾಗಿ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದಿರುವ ಭಾವನಾ ಕಾಂಗ್ರೆಸ್ನ ಸ್ಟಾರ್ ಪ್ರಚಾರಕಿಯಲ್ಲೊಬ್ಬರು. ಅವರು ರಾಜಾಜಿನಗರದಲ್ಲಿ ಚುನಾವಣೆಗೆ ನಿಂತಿರುವ ಮಂಜುಳಾ ನಾಯ್ಡು ಮತ್ತಿತರರ ಪರ ಪ್ರಚಾರ ನಡೆಸಿದ್ದಾರೆ.
ರಮ್ಯಾ
ಇಂಗ್ಲೆಂಡ್ ಪ್ರವಾಸದಲ್ಲಿದ್ದ ನಟಿ ರಮ್ಯಾ ಸ್ವಲ್ಪ ತಡವಾಗಿ ಕಾಂಗ್ರೆಸ್ ಪರ ಸ್ಟಾರ್ ಪ್ರಚಾರಕಿಯಾಗಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಅವರು ಮಂಗಳೂರು ನಗರ ಕ್ಷೇತ್ರದ ಅಭ್ಯರ್ಥಿ ಯು.ಟಿ. ಖಾದರ್ ಮತ್ತು ಬೆಂಗಳೂರಿನ ಶಿವಾಜಿನಗರದಲ್ಲಿ ರೋಶನ್ ಬೇಗ್ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು. ರಮ್ಯಾ ಅವರು ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರಾದರೂ ಯಾವುದೇ ಕಣದಿಂದ ಸ್ಪರ್ಧಿಸಿಲ್ಲ.
ಪ್ರೇಮ್
ನೆನಪಿರಲಿ ಮತ್ತು ಚಾರ್ ಮಿನಾರ್ ಖ್ಯಾತಿಯ ಲವ್ಲಿ ಸ್ಟಾರ್ ಪ್ರೇಮ್ ಅವರು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ಪರವಾಗಿ ಮತಯಾಚನೆಗೆ ಇಳಿದಿದ್ದಾರೆ. ಪ್ರೇಮ್ ಮುಂದೆ ಚುನಾವಣೆಗೆ ಇಳಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಈಗಾಗಲೇ ಕೇಳಿಬರುತ್ತಿವೆ.
ಶೃತಿ
ಭಿನ್ನ ವಿಭಿನ್ನ ಪಾತ್ರಗಳಿಂದ ಜನರನ್ನು ರಂಜಿಸಿದ್ದ ನಟಿ ಶೃತಿ ಪಕ್ಷದಿಂದ ಪಕ್ಷಕ್ಕೆ ಜಿಗಿದಾಡುತ್ತ ಸದ್ಯಕ್ಕೆ ಕೆಜೆಪಿಯಲ್ಲಿ ಸೆಟ್ಲ್ ಅಗಿದ್ದು, ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಎಲ್ಲರಿಗಿಂತ ಒಂದು ಹೆಜ್ಜೆಯನ್ನು ಮುಂದೆ ಇಟ್ಟಿರುವ ಶೃತಿಯವರು, ಯಡಿಯೂರಪ್ಪನವರನ್ನು ರಾಜ್ ಕುಮಾರ್ ಅವರಿಗೆ ಹೋಲಿಸಿ ಜನರಿಂದ ಚಪ್ಪಾಳೆ ಗಿಟ್ಟಿಸಿದ್ದಾರೆ.
ಐಶ್ವರ್ಯ
ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋದಿಂದ ಲೈಮ್ ಲೈಟಿಗೆ ಬಂದಿದ್ದ ಕಿರುತೆರೆ ನಟಿ ಐಶ್ವರ್ಯ ನಾನೂ ಯಾಕೆ ರಾಜಕೀಯದಲ್ಲಿ ಒಂದು ಕೈ ನೋಡಬಾರದು ಎಂದು ಪ್ರಚಾರಕ್ಕೆ ಹೊರಟಿದ್ದಾರೆ. ಧಾರವಾಡದಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಮತಯಾಚನೆಗೆ ಇಳಿದಿದ್ದಾರೆ.