ಪ್ರಧಾನಿ ಸಮಾವೇಶಕ್ಕೆ ಸ್ಥಳವಿಲ್ಲ : ಕಾರ್ಯಕ್ರಮ ರದ್ದು?
ಲೋಕಸಭೆ ಕಲಾಪ ನಡೆಯುತ್ತಿರುವುದರಿಂದ ಪ್ರಧಾನಿ ಕರ್ನಾಟಕ ಭೇಟಿಯೇ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ. ಪ್ರಧಾನಿ ಆಗಮಿಸುತ್ತಾರೆ ಎಂದು ಉತ್ಸಾಹದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ತೀವ್ರ ನಿರಾಸೆ ಉಂಟಾಗಿದೆ.
ನಿಗದಿತ ಕಾರ್ಯಕ್ರಮದಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಏ.29ಕ್ಕೆ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಕಾರ್ಯಕರ್ತರು ಹಾಗೂ ಜನರನ್ನು ಉದ್ದೇಶಿಸಿ ಮಾತನಾಡಬೇಕಾಗಿತ್ತು. ಆದರೆ ಮೈದಾನದಲ್ಲಿ ಈ ಮೈದಾನದಲ್ಲಿ ಪ್ರಧಾನಿಗೆ ರಕ್ಷಣೆ ನೀಡುವುದು ಸಾಧ್ಯವಿಲ್ಲ ಬೇರೆ ಸ್ಥಳ ಗುರುತಿಸಿ ಎಂದು ಪೊಲೀಸರು ಹೇಳಿದ್ದಾರೆ.
ಸಮಸ್ಯೆ ಏನು : ನೆಹರು ಮೈದಾನದ ಸುತ್ತಾ ಬೃಹದಾಕಾರದ ಕಟ್ಟಡಗಳಿವೆ. ಪ್ರಧಾನಿ ಈ ಮೈದಾನಕ್ಕೆ ಆಗಮಿಸುವುದಾದದರೆ ರಕ್ಷಣೆ ನೀಡುವುದು ಸವಾಲಿನೆ ಕೆಲಸವಾಗಲಿದೆ. ಆದ್ದರಿಂದ ಬೇರೆ ಸ್ಥಳ ಗುರುತಿಸಿ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ಬಿ.ಎ.ಪದ್ಮನಯನ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ರೇಲ್ವೆ ಮೈದಾನ ನೀಡುವುದಿಲ್ಲ : ಸ್ಥಳೀಯ ಕಾಂಗ್ರೆಸ್ ಮುಖಂಡರು ನಗರದ ರೇಲ್ವೆ ಮೈದಾನದಲ್ಲಿ ಸಮಾವೇಶ ನಡೆಸಬಹುದು ಎಂಬ ಆಸೆಯಿಂದ ಅಧಿಕಾರಿಗಳ ಬಳಿ ತೆರಳಿದ್ದಾರೆ. ರೇಲ್ವೆ ಉನ್ನತ ಅಧಿಕಾರಿಗಳು ಮೈದಾನವನ್ನು ರಾಜಕೀಯ ಕಾರ್ಯಕ್ರಮಗಳಿಗೆ ನೀಡುವುದಿಲ್ಲ. ಪ್ರಧಾನಿ ಕಾರ್ಯಕ್ರಮವಾದರೂ ಕೊಡುವುದಿಲ್ಲ ಎಂದು ಕಾರ್ಯಕರ್ತರ ಆಸೆಗೆ ತಣ್ಣೀರು ಸುರಿದಿದ್ದಾರೆ.
ಈಗ ಸಮಾವೇಶಕ್ಕಾಗಿ ಮೈದಾನ ಹುಡುಕುವುದು ಕಾರ್ಯಕರ್ತರ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದು, ಹೊಸ ಜಾಗದ ಹುಡುಕಾಟ ನಡೆಸಿದ್ದಾರೆ. ನೆಹರು ಮೈದಾನ ಮತ್ತು ರೇಲ್ವೆ ಮೈದಾನ ಹೊರತು ಪಡಿಸಿ ನಗರದಲ್ಲಿ ಬೃಹದಾಕಾರದ ಸ್ಥಳ ಮತ್ತೊಂದಿಲ್ಲ.
ಪ್ರಧಾನಿ ಬರುತ್ತಾರೆ ಎಂದ ಮೇಲೆ ಕಾಂಗ್ರೆಸ್ ಮುಖಂಡರು, ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸೇರುತ್ತಾರೆ. ಆದ್ದರಿಂದ ಬೃಹದಾಕರದ ಜಾಗದ ಅವಶ್ಯಕತೆ ಇದೆ. ಉತ್ತಮ ರಸ್ತೆ ಸಂಪರ್ಕ ಹಾಗೂ ವಿಮಾನ ಸೌಲಭ್ಯ ಇದ್ದ ಕಾರಣ ಪ್ರಧಾನಿಗಳ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ನಡೆಸಲು ತೀರ್ಮಾನಿಸಿಲಾಗಿತ್ತು.
ಕೊನೆಯ ಪ್ರಯತ್ನವೆಂಬಂತೆ ಕಾರ್ಯಕರ್ತರು ರೇಲ್ವೆ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಸಜ್ಜಾಗಿದ್ದಾರೆ. ಎರಡನೇ ಪ್ರಯತ್ನದಲ್ಲಿಯೂ ಸ್ಥಳವಕಾಶ ದೊರೆಯದಿದ್ದರೆ ಪ್ರಧಾನಿ ಕಾರ್ಯಕ್ರಮ ರದ್ದಾಗುವುದು ಖಂಡಿತ. ಪ್ರಧಾನಿ ಆಗಮನಕ್ಕೆ ಕೇವಲ ನಾಲ್ಕು ದಿನಗಳ ಕಾಲಾವಕಾಶ ಮಾತ್ರ ಬಾಕಿ ಇದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ