ಮಹಾಲಕ್ಷ್ಮೀ ಲೇಔಟ್ ನಲ್ಲಿ ಗುಂಡಿನ ಮೊರೆತ
ಶನಿವಾರ ರಾತ್ರಿ ಮಹಾಲಕ್ಷ್ಮೀ ಲೇಔಟ್ ನ ವಿಜಯ ಬಾರ್ ಮತ್ತು ರೆಸ್ಟೋರೆಂಟ್ ಮುಂಭಾಗದಲ್ಲಿ ರೌಡಿಗಳು ಗ್ಯಾಂಗ್ ವಾರ್ ಗೆ ಇಬ್ಬರು ಕೊಲೆಯಾಗಿದ್ದರು. ಭಾನುವಾರ ರಾತ್ರಿ ಪ್ರಕರಣದ ಆರೋಪಿ ಯುವರಾಜ್ ಅಲಿಯಾಸ್ ಪಾಪುವನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ಆತ ಹಲ್ಲೆಗೆ ಮುಂದಾದ.
ತಕ್ಷಣ ಯಶವಂತಪುರ ಠಾಣೆ ಇನ್ಸ್ಪೆಕ್ಟರ್ ಪುರುಷೋತ್ತಮ್ ಯುವರಾಜ್ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಆರೋಪಿ ಕಾಲುಗಳಿಗೆ ಗುಂಡು ತಗುಲಿದ್ದು, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಿನೀಮಯ ಕಾರ್ಯಚರಣೆ : ಶನಿವಾರ ರಾತ್ರಿ ನಡೆದ ಇಬ್ಬರ ಹತ್ಯೆ ಪ್ರಕರಣದ ಆರೋಪಿ ಯುವರಾಜ. ಬೈಕ್ನಲ್ಲಿ ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಮಹಾಲಕ್ಷ್ಮೀ ಬಡಾವಣೆಯ ಬಳಿ ಪೊಲೀಸರು ಬಂಧಿಸಲು ಯತ್ನಿಸಿದಾಗ ಪರಾರಿಯಾಗಿದ್ದಾನೆ.
ನಂತರ ಕಂಠೀರವ ಸ್ಟುಡಿಯೋ ಬಳಿ ಯುವರಾಜ್ ತನ್ನನ್ನು ಹಿಂಬಾಲಿಸುತ್ತಿದ್ದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಲಗ್ಗೆರೆ ಮಾರ್ಗವಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕಾಲಿಗೆ ಗುಂಡು ತಗುಲಿದ್ದರಿಂದ ಸುಲಭವಾಗಿ ಪೊಲೀಸರಿಗೆ ಸಿಕ್ಕಿಬಿದಿದ್ದಾನೆ.
ಕೊಲೆಯ ಹಿನ್ನೆಲೆ : ಶನಿವಾರ ರಾತ್ರಿ ಮಹಾಲಕ್ಷ್ಮೀ ಲೇಔಟ್ ನ ವಿಜಯ ಬಾರ್ ಮತ್ತು ರೆಸ್ಟೋರೆಂಟ್ ಗೆ ಬಾಬು ಹಾಗೂ ಧರಣೀಶ್ ತಮ್ಮ ಉಳಿದ ನಾಲ್ವರು ಸ್ನೇಹಿತರ ತೆರಳಿದ್ದರು. ರಾತ್ರಿ ಮದ್ಯ ಸೇವಿಸಿದ ನಂತರ ಆ ಆರು ಜನರ ನಡುವೆಯೇ ಜಗಳ ನಡೆದಿದೆ.
ಬಾರ್ ನಿಂದ ಹೊರಗೆ ಬಂದ ಇವರ ಮೇಲೆ ಹಳೆಯ ವೈರಿಗಳು ದಾಳಿ ನಡೆಸಿದ್ದಾರೆ. ಎರಡು ಗುಂಪುಗಳ ನಡುವೆ ಜಗಳ ನಡೆದಾಗ ಪರಿಮಳನಗರದ ಬಾಬು (26) ಹಾಗೂ ಸೋಮೇಶ್ವರ ನಗರದ ಧರಣೀಶ್ (24) ಕೊಲೆಯಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬಾರ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿ ಮೂವರನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಯುವರಾಜ ಮಾತ್ರ ದೊರಕಿರಲಿಲ್ಲ. ಭಾನುವಾರ ರಾತ್ರಿ ಆತನನ್ನು ಬಂಧಿಸಲು ತೆರಳಿದಾಗ ಪ್ರತಿ ದಾಳಿ ನಡೆಸಿದ ಕಾರಣಕ್ಕಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ