ಸೋನಿಯಾ, ರಾಹುಲ್ ಪ್ರಚಾರ ವೇಳಾಪಟ್ಟಿ ಬದಲು

ಶುಕ್ರವಾರ ಕಾಂಗ್ರೆಸ್ ಉಭಯ ನಾಯಕರ ಪರಿಷ್ಕೃತ ವೇಳಾಪಟ್ಟಿಯನ್ನು ಕೆಪಿಸಿಸಿ ಪ್ರಕಟಿಸಿದ್ದು, ಲೋಕಸಭೆ ಅಧಿವೇಶನದ ಹಿನ್ನಲೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದಿನ ವೇಳಾಪಟ್ಟಿ ಪ್ರಕಾರ ರಾಹುಲ್ ಗಾಂಧಿ ಏ. 23ರಂದು ಬಳ್ಳಾರಿ, ರಾಯಚೂರು ಹಾಗೂ ಬಿಜಾಪುರದಲ್ಲಿ ಪ್ರಚಾರ ನಡೆಸಬೇಕಾಗಿತ್ತು. ಆದರೆ ರಾಯಚೂರು ಬದಲು ಸಿಂಧನೂರಿನಲ್ಲಿ ಹಾಗೂ ಬಿಜಾಪುರ ಬದಲು ಬಾಗಲಕೋಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಏ. 26ರಂದು ಕೋಲಾರ, ತುಮಕೂರು, ಹಾವೇರಿ, ಮೇ 1ರಂದು ಮಂಡ್ಯ, ಹಾಸನ ಹಾಗೂ ಶಿವಮೊಗ್ಗದಲ್ಲಿ ರಾಹುಲ್ ಪ್ರಚಾರ ನಡೆಸಲಿದ್ದಾರೆ ಎಂದ ಪರಿಷ್ಕೃತ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.
ಸೋನಿಯಾ ಗಾಂಧಿ ಅವರ ಕಾರ್ಯಕ್ರವೂ ಬದಲಾವಣೆಯಾಗಿದೆ. ಏ. 28ರಂದು ಅವರು ಚಿಕ್ಕಮಗಳೂರು ಹಾಗೂ ಮಂಗಳೂರು ಪ್ರವಾಸ ಕೈಗೊಂಡಿದ್ದರು. ಆದರೆ, ಏ. 25ರಂದು ಆಗಮಿಸಿ ಎರಡು ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಏ 30ರಂದು ಗುಲ್ಬರ್ಗ ಹಾಗೂ ಬೆಳಗಾವಿ, ಮೇ 2ರಂದು ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೋನಿಯಾ ಭಾಗವಹಿಸಲಿದ್ದಾರೆ.
ಪ್ರಧಾನಿ ಡಾ.ಮನಮೋಹನ್ ಸಿಂಗ್ ಏ. 29ರಂದು ಬೆಳಗ್ಗೆ ಹುಬ್ಬಳ್ಳಿಯಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಹಾಗೂ ಮಧ್ಯಾಹ್ನ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಕೆಪಿಸಿಸಿ ಪ್ರಕಟಿಸಿದೆ.
ಸ್ಟಾರ್ ಪ್ರಚಾರಕರು : ಏ. 22 ರಿಂದ ಸ್ಟಾರ್ ಪ್ರಚಾರಕರು ರಾಜ್ಯದ ನಾನಾ ಭಾಗಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲಿದ್ದಾರೆ. ಮಧುಸೂದನ್ ಮಿಸ್ತ್ರಿ, ಆಸ್ಕರ್ ಫರ್ನಾಂಡಿಸ್, ಬಿ.ಕೆ.ಹರಿಪ್ರಸಾದ್, ಅಂಬಿಕಾ ಸೋನಿ, ವಯಲಾರ್ ರವಿ, ಸುಶೀಲ್ಕುಮಾರ್ ಶಿಂಧೆ, ಅಂಬಿಕಾ ಸೋನಿ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೋದಿ ಪ್ರಚಾರ : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುವಂಥ ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಅವರು ರಾಷ್ಟ್ರೀಯ ಮುಖಂಡರಿಗೆ ಸೂಚನೆ ನೀಡಿದ್ದು, ಬಿಜೆಪಿ ಉತ್ತಮವಾಗಿ ಪ್ರದರ್ಶನ ನೀಡುವಂಥ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇನೆ ಎಂದು ರಾಜ್ಯ ನಾಯಕರಿಗೂ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. (ಮೋದಿ ಯಾವಾಗ ಬರ್ತಾರೆ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications