ಮೋದಿ ಒಂದು ದಿನ ಮಾತ್ರ ಪ್ರಚಾರ ಮಾಡ್ತಾರಂತೆ
ಬೆಂಗಳೂರು ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಮುಕ್ತಾರ್ ಅಬ್ಬಾಸ್ ನಕ್ವಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಒಂದು ದಿನ ಮಾತ್ರ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಆದರೆ, ಅದು ಯಾವ ಜಿಲ್ಲೆಯಲ್ಲಿ ಎಂಬುದು ರಾಜ್ಯ ನಾಯಕರು ತಯಾರಿಸುವ ವೇಳಾಪಟ್ಟಿ ಮೇಲೆ ನಿರ್ಧರಿತವಾಗಿದೆ ಎಂದು ಹೇಳಿದರು.
ಗುರುವಾರ ಸಭೆ ನಡೆಸಲಿರುವ ಬಿಜೆಪಿ ನಾಯಕರು ಏ.28ಕ್ಕೆ ಬೆಂಗಳೂರಿಗೆ ಆಗಮಿಸುವ ಮೋದಿ ಯಾವ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಯೋಜನೆ ತಯಾರಿಸಲಿದ್ದಾರೆ. ಮೋದಿ ಕೇವಲ ಒಂದು ದಿನದ ಪ್ರವಾಸ ಕೈಗೊಳ್ಳುವುದರಿಂದ ಅವರನ್ನು ಯಾವ ಜಿಲ್ಲೆಯಲ್ಲಿ ಪ್ರಚಾರಕ್ಕೆ ಕರೆದೊಯ್ಯಬೇಕು ಎಂದು ಬಿಜೆಪಿ ನಾಯಕರು ಈಗ ತಲೆಕೆಡಿಸಿಕೊಂಡಿದ್ದಾರೆ.
ಬಿಜೆಪಿಯ ಕೆಲವು ನಾಯಕರು ಮೋದಿ ಬೆಂಗಳೂರಿನಲ್ಲಿ ಮಾತ್ರ ಪ್ರಚಾರ ಮಾಡಿದರೆ ಸಾಕು ಎಂದು ಹೇಳುತ್ತಿದ್ದರೆ, ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್ ಹುಬ್ಬಳ್ಳಿ, ಮೈಸೂರುಗಳಲ್ಲೂ ಪ್ರಚಾರ ನಡೆಸಲಿ ಎಂದು ಹೇಳುತ್ತಿದ್ದಾರೆ.
ಆದ್ದರಿಂದ ಮೋದಿ ಪ್ರಚಾರದ ವೇಳಾಪಟ್ಟಿ ತಯಾರಿಸುವುದು ನಾಯಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೊದಲು ಮೋದಿ ನಾಲ್ಕದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಸದ್ಯ ಅದು ಒಂದು ದಿನಕ್ಕೆ ಇಳಿದಿದೆ. ಒಂದು ದಿನ ಮೋದಿ ಯಾವ ಜಿಲ್ಲೆಗಳಲ್ಲಿ ಪ್ರಚಾರ ಮಾಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬಾಂಬ್ ಸ್ಪೋಟ ಕಾರಣವೇ : ನರೇಂದ್ರ ಮೋದಿ ರಾಜ್ಯ ಪ್ರವಾಸ ಮೊಟಕುಗೊಳ್ಳಲು ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಪೋಟಿಸಿರುವುದೇ ಕಾರಣವೇ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಮೋದಿ ಪ್ರಧಾನಿ ಅಭ್ಯರ್ಥಿಯ ಸಾಲಿನಲ್ಲಿದ್ದಾರೆ. ಅವರಿಗೆ ಭಯೋತ್ಪಾದಕರಿಂದ ಜೀವ ಬೆದರಿಕೆ ಇದೆ.
ಬೆಂಗಳೂರಿನಲ್ಲಿ ಬಾಂಬ್ ಸ್ಪೋಟಗೊಂಡಿದೆ ಈ ನಡುವೆಯೇ ಮೋದಿ ನಗರದಲ್ಲಿ ವಾಸ್ತವ್ಯ ಹೂಡಿದರೆ ತೊಂದರೆ ಯಾಗಬಹುದೆಂದು ಅವರ ಪ್ರವಾಸ ಮೊಟಕುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಮೋದಿ ಹೊರತು ಪಡಿಸಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ರಾಜ್ಯದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. (ಬಿಜೆಪಿ ಕರ್ನಾಟಕ )
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ