ಅತ್ಯಾಚಾರಿಯ ಬಂಧನ, ಚೇತರಿಸಿಕೊಳ್ಳುತ್ತಿರುವ ಮಗು
ಮುಜಫರ್ಪುರ/ನವದೆಹಲಿ, ಏ. 20 : ಐದು ವರ್ಷದ ಪುಟ್ಟ ಕಂದಮ್ಮನ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿರುವ ಕ್ರೂರಿ ಮನೋಜ್ ಕುಮಾರ್ ಷಾ (25) ಎಂಬಾತನನ್ನು ದೆಹಲಿ ಮತ್ತು ಮುಜಫರ್ಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮುಜಫರ್ಪುರ ಜಿಲ್ಲೆಯ ಚಿಕನೌಟಾ ಎಂಬ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ 2.30 ಗಂಟೆಗೆ ಬಂಧಿಸಿದ್ದಾರೆ.
ರೈಲಿನ ಮುಖಾಂತರ ಬಿಹಾರಕ್ಕೆ ಬಂದಿದ್ದ ಮನೋಜ್ನನ್ನು ಆತನ ಮೊಬೈಲ್ ಸಂಖ್ಯೆಯ ಮುಖಾಂತರ ಪತ್ತೆ ಮಾಡಿ ಬಂಧಿಸಲಾಗಿದೆ. ಇತ್ತೀಚೆಗೆ ಮದುವೆಯಾಗಿರುವ ಮನೋಜ್ ತನ್ನ ಹೆಂಡತಿಯ ತಂದೆತಾಯಿಯ ಮನೆಗೆ ಬಂದಿದ್ದ. ಭರಪುವಾ ಗ್ರಾಮದವನಾದ ಕುಮಾರ್ ದೆಹಲಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ.
ದೆಹಲಿಯ ಗಾಂಧಿನಗರದಲ್ಲಿ ಬಾಡಿಗೆ ಇರುವ ಕುಮಾರ್, ಅದೇ ಕಟ್ಟಡದಲ್ಲಿ ವಾಸವಿರುವ ಬಾಲಕಿಯನ್ನು ದುರ್ಬಳಕೆ ಮಾಡಿಕೊಂಡು ಕನಿಷ್ಠ ಎರಡು ದಿನಗಳ ಕಾಲ ಲೈಂಗಿಕವಾಗಿ ಹಿಂಸಿದ್ದಾನೆ. ಆತ ಯಾವ ಪರಿ ಹಿಂಸಿಸಿದ್ದಾನೆಂದರೆ, ಪುಟ್ಟ ಬಾಲಕಿಯ ಜನನಾಂಗದಲ್ಲಿ ಮೇಣದಬತ್ತಿ ಮತ್ತು ಬಾಟಲಿ ಕೂಡ ಹಾಕಿ ಚಿತ್ರಹಿಂಸೆ ನೀಡಿದ್ದ.
ಚೇತರಿಸಿಕೊಳ್ಳುತ್ತಿರುವ ಬಾಲಕಿ : ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಮೇಲಾದ ದೌರ್ಜನ್ಯವನ್ನು ನೋಡಿ ಚಿಕಿತ್ಸೆ ನೀಡುತ್ತಿರುವ ವೈದ್ಯರೇ ದಂಗಾಗಿಹೋಗಿದ್ದರು. ಇಂಥ ಘಾತಕವನ್ನು ನನ್ನ ಜನ್ಮದಲ್ಲೇ ನೋಡಿಲ್ಲ ಎಂದು ವೈದ್ಯರು ಉದ್ಗರಿಸಿದ್ದರು.
ಆಸ್ಪತ್ರೆಗೆ ದಾಖಲಿಸಿದಾಗ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಆದರೆ, ಇದೀಗ ಬಂದಿರುವ ಮಾಹಿತಿ ಪ್ರಕಾರ, ಬಾಲಕಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಆಕೆಯ ಸ್ಥಿತಿ ಸ್ಥಿರತೆಯಿಂದ ಕೂಡಿದೆ ಎಂದು ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕ ಡಿ.ಕೆ. ಶರ್ಮಾ ಅವರು ತಿಳಿಸಿದ್ದಾರೆ.
ಆಸ್ಪತ್ರೆಯ ಮುಂದೆ ಪ್ರತಿಭಟನೆ : ಈ ನಡುವೆ, ಈ ಅಮಾನುಷ ಘಟನೆಯಿಂದ ರೊಚ್ಚಿಗೆದ್ದಿರುವ ದೆಹಲಿ ನಾಗರಿಕರು ಎಐಐಎಂಎಸ್ ಆಸ್ಪತ್ರೆಯ ಮುಂದೆ ಜಮಾಯಿಸಿದ್ದು, ಎರಡು ದಿನಗಳ ಕಾಲ ಕಾಣೆಯಾಗಿದ್ದ ಮಗುವನ್ನು ಹುಡುಕುವಲ್ಲಿ ವಿಫಲರಾಗಿದ್ದ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದ ಯುವತಿಯ ಅತ್ಯಾಚಾರದ ಘಟನೆಯ ನಂದರ ನಡೆದಿದ್ದ ತೀವ್ರತರವಾದ ಪ್ರತಿಭಟನೆಯ ರೀತಿಯಲ್ಲಿ ಈಗ ಮತ್ತೆ ಪ್ರತಿಭಟನೆಗಳು ನಡೆಯುತ್ತಿವೆ. ದೆಹಲಿಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಯುವಜನತೆ ಸಿಡಿದೆದ್ದಿದೆ. ದೌರ್ಜನ್ಯವನ್ನು ನಿಗ್ರಹಿಸಲು ಕಠಿಣ ಕಾನೂನು ರೂಪಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶುಕ್ರವಾರ ಪ್ರತಿಭಟನೆ ನಡೆಯುತ್ತಿದ್ದ ಸಮಯದಲ್ಲಿ 12 ತರಗತಿ ಓದುತ್ತಿರುವ ಬೀನು ರಾವತ್ ಎಂಬ ಯುವತಿಯ ಕೆನ್ನೆಗೆ ಪೊಲೀಸ್ ಅಧಿಕಾರಿಯೊಬ್ಬರು ಬಾರಿಸಿದ್ದರು. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ಯುವಜನತೆ ಆಸ್ಪತ್ರೆಯ ಮುಂದೆ ಇಂದು ಕೂಡ ಪ್ರತಿಭಟನೆ ನಡೆಸಿದೆ. ಆಸ್ಪತ್ರೆಯ ಬಳಿ ಭಾರೀ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.