ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿದ ವರ್ತೂರ್ ಪ್ರಕಾಶ್
ಯಾವುದೇ ಪಕ್ಷದ ಬೆಂಬಲ ನನಗೆ ಬೇಕಿಲ್ಲ. ಟಿಕೆಟ್ ಗಾಗಿ ನಾನು ಯಾರ ಬಳಿಯೂ ಕೈ ಚಾಚಿಲ್ಲ, ಚಾಚುವುದೂ ಇಲ್ಲ. ಜನತೆಯ ಬೆಂಬಲ ನನಗಿದೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ ಎಂದು ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಚುನಾವಣಾ ಅಖಾಡಕ್ಕಿಳಿದಿದ್ದಾರೆ.
ರಾಜಕೀಯ ಪಕ್ಷಗಳು ಇನ್ನು ಪಟ್ಟಿ ಪ್ರಕಟಿಸುವ ಗೊಂದಲದಲ್ಲಿ ಮುಳುಗಿವೆ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ವರ್ತೂರ್ ಪ್ರಕಾಶ್ ಅವರು ಅಧಿಸೂಚನೆ ಹೊರಬಿದ್ದ ಮೊದಲ ದಿನವೇ ತಮ್ಮ ನಾಮಪತ್ರ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ. ವರ್ತೂರ್ ಪ್ರಕಾಶ್ ಅವರು ತಮ್ಮ ಬೆಂಬಲಿಗರೊಂದಿಗೆ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ನಾಮಪತ್ರ ಸಲ್ಲಿಸಿದರು.
ನಾಳೆಯಿಂದ ರಣೋತ್ಸಾಹ: ಇಂದು ಅಮಾವಾಸ್ಯೆಯಾಗಿರುವುದರಿಂದ ನಾಮಪತ್ರ ಸಲ್ಲಿಕೆಗೆ ಅಂತಹ ಉತ್ಸಾಹ ಕಂಡುಬರಲಿಲ್ಲ. ನಾಳೆ ಯುಗಾದಿ ಹಬ್ಬದ ಸಲುವಾಗಿ ರಜೆ ಇದೆ. ಹೀಗಾಗಿ ನಾಮಪತ್ರ ಸಲ್ಲಿಕೆಯ ಭರಾಟೆಗಳು ಏ.12ರ ನಂತರವೇ ಹೆಚ್ಚಾಗುವ ನಿರೀಕ್ಷೆ ಇದೆ. ಹೆಚ್ಚಿನ ವಿವರಗಳಿಗೆ ಈ ಸುದ್ದಿ ಓದಿ
ವರ್ತೂರು ಪ್ರಕಾಶ್ ಅಲ್ಲದೆ ಮೈಸೂರಿನ ಚಾಮರಾಜ ಕ್ಷೇತ್ರದಿಂದ ಎಸ್ಯುಸಿಐನ ಪಕ್ಷೇತರ ಅಭ್ಯರ್ಥಿ ಉಮಾದೇವಿ ಯವರು ನಾಮಪತ್ರ ಸಲ್ಲಿಸಿದ್ದಾರೆ.
ನಾಳೆ ಯುಗಾದಿ ಸಂಭ್ರಮ, ಶುಕ್ರವಾರ ವರ್ಷದ ತಡಕು ಇರುವುದರಿಂದ ರಾಜಕಾರಣಿಗಳು ನಾಮಪತ್ರ ಸಲ್ಲಿಕೆ ಶುಭದಿನ ಹುಡುಕುತ್ತಿದ್ದಾರೆ. ಬಹಳಷ್ಟು ಮಂದಿ ಅಭ್ಯರ್ಥಿಗಳು ಜ್ಯೋತಿಷಿಗಳ ಮೊರೆ ಹೋಗಿದ್ದಾರೆ. ರಾಜಕೀಯ ಪಕ್ಷಗಳು ಕೂಡ ಹಂತ ಹಂತವಾಗಿ ಅಧಿಕೃತ ಅಭ್ಯರ್ಥಿಗಳನ್ನು ಪ್ರಕಟಿಸುತ್ತಲೇ ಇವೆ.
ಯಾವ ಪಕ್ಷಗಳು 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಕಾಂಗ್ರೆಸ್ 177 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದರೆ, ಆಡಳಿತರೂಢ ಬಿಜೆಪಿ 175 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ. ಜೆಡಿಎಸ್ 172, ಕೆಜೆಪಿ 184, ಬಿಎಸ್ಆರ್ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಿವೆ.
ಏ.10 ರಿಂದ ಆರಂಭವಾಗಿರುವ ನಾಮಪತ್ರ ಸಲ್ಲಿಕೆ ಏ.17ರವರೆಗೂ ನಡೆಯಲಿದೆ. ಏ.18 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ವಾಪಸ್ ಪಡೆಯಲು ಏ.20 ನಿಗದಿಯಾಗಿದೆ.
ಮೇ.5 ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಚುನಾವಣೆ ನಡೆಯಲಿದ್ದು ಮೇ.8 ರಂದು ಮತ ಎಣಿಕೆ, ಫಲಿತಾಂಶ ಹೊರಬೀಳಲಿದೆ.