ಚುನಾವಣಾ ಪೂರ್ವ ಸಮೀಕ್ಷೆ: ಕೆಜೆಪಿ,ಜೆಡಿಎಸ್ಸಿಗೆ ಕಷ್ಟ ಕಷ್ಟ
ಬೆಂಗಳೂರು, ಫೆ 6: ಚುನಾವಣೆಯ ದಿನಾಂಕ ಇನ್ನೂ ಘೋಷಣೆ ಆಗಿಲ್ಲ, ಆದರೂ ಜನರ ನಾಡಿಮಿಡಿತ ಅರಿಯುವ ಚುನಾವಣಾ ಪೂರ್ವ ಸಮೀಕ್ಷೆಗಳು ಆರಂಭವಾಗಿವೆ.
ಸಿ-ವೋಟರ್ ಸಹಯೋಗದೊಂದಿಗೆ ತೆಹೆಲ್ಕಾ ವಾರಪತ್ರಿಕೆ ನಡೆಸಿದ ಸಮೀಕ್ಷೆಯ ಅನ್ವಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (2013) ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಸಮೀಕ್ಷೆಯಲ್ಲಿ ಗಮನಿಸ ಬೇಕಾದ ಅಂಶವೇನೆಂದರೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಯಡಿಯೂರಪ್ಪ ನೇತೃತ್ವದ ಕೆಜೆಪಿ ಮತ್ತು ಜೆಡಿಎಸ್ ಸಂಪೂರ್ಣ ನೆಲಕಚ್ಚಲಿದೆ. ಭಾರತೀಯ ಜನತಾ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಲಿದ್ದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗುತ್ತದೆ.

ಕಾಂಗ್ರೆಸ್ 133 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬರಲಿದ್ದು, ಬಿಜೆಪಿ ಬಲ 63 ಸ್ಥಾನಗಳಿಗೆ ಕುಸಿಯಲಿದೆ. ಜೆಡಿಎಸ್ 19 ಮತ್ತು ಕೆಜೆಪಿಗೆ ಕೇವಲ ಐದು ಸ್ಥಾನ ಲಭಿಸಲಿದೆ ಎಂದು ತೆಹೆಲ್ಕಾ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.
ಜನವರಿ ತಿಂಗಳಲ್ಲಿ ರಾಜ್ಯದಾದ್ಯಂತ ತೆಹೆಲ್ಕಾ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ 4,366 ಮಂದಿಯಲ್ಲಿ ಶೇ.37 ರಷ್ಟು ಜನ ರಾಜ್ಯದಲ್ಲಿ ಕಾಂಗ್ರೆಸ್ ಮುಂದಿನ ಸರಕಾರ ಸ್ಥಾಪಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಹಳೆ ಮೈಸೂರು ಪ್ರದೇಶದಲ್ಲಿರುವ ಹೆಚ್ಚಾಗಿರುವ ತಮ್ಮ ವೋಟ್ ಬ್ಯಾಂಕಿನ ಜೊತೆಗೆ ಉತ್ತರ ಕರ್ನಾಟಕದಲ್ಲೂ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಜಾತ್ಯತೀತ ಜನತಾದಳದ ನಿರೀಕ್ಷೆ ಸುಳ್ಳಾಗಲಿದ್ದು, ಕೇವಲ 19 ಸ್ಥಾನಗಳನ್ನು ಮಾತ್ರ ಪಡೆಯಲು ಶಕ್ತವಾಗತ್ತದೆ.
ಇತರಿಗೆ ಕೇವಲ 4 ಸ್ಥಾನಗಳು ಲಭಿಸಲಿದ್ದು, ಹೊಸದಾಗಿ ಉದಯಿಸಿದ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸಿಗೆ ಭವಿಷ್ಯವಿಲ್ಲ ಮತ್ತು ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.
ಸಮೀಕ್ಷೆಯ ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿ ಕ್ಲಿಕ್ಕಿಸಿ
ಚಿತ್ರ ಕೃಪೆ: ತೆಹೆಲ್ಕಾ












Click it and Unblock the Notifications