ರಕ್ಷಣೆ ಬೇಕೆಂದು ಗಳಗಳನೆ ಅತ್ತ ಪ್ರಸನ್ನ ಕುಮಾರ್

ಯಡಿಯೂರಪ್ಪ ಮತ್ತು ಅವರ ಮಕ್ಕಳಿಂದ ನಿರಂತರವಾಗಿ ಕೊಲೆ ಬೆದರಿಕೆ ಬರುತ್ತಿದ್ದು, ಕರ್ನಾಟಕದಲ್ಲಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಬುಧವಾರ ಹೇಳಿರುವ ಅವರು, ಚೆನ್ನೈನಲ್ಲಿ ತಮಗೆ ರಕ್ಷಣೆ ಕೊಡಬೇಕೆಂದು ಚೆನ್ನೈಗೆ ಧಾವಿಸಿದ್ದಾರೆ. ಕೆಲ ದಿನಗಳ ಹಿಂದೆ ಕೂಡ ಅವರು ತಮಗೆ ಯಡಿಯೂರಪ್ಪ ಮತ್ತು ಬೆಂಬಲಿಗರಿಂದ ಜೀವಕ್ಕೆ ಅಪಾಯವಿದೆ ಎಂದು ಬಳ್ಳಾರಿಯಲ್ಲಿ ದೂರಿದ್ದರು.
"ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಗೃಹ ಸಚಿವ, ರಾಜ್ಯಪಾಲರಿಗೂ ಭದ್ರತೆಗಾಗಿ ಕೋರಿದ್ದೇನೆ. ಜ.3ರಂದು ಚುನಾವಣಾ ಆಯೋಗಕ್ಕೆ ಎಲ್ಲ ದಾಖಲೆಗಳನ್ನು ಸಲ್ಲಿಸಿದ ನಂತರ ಕರ್ನಾಟಕ ತೊರೆದಿದ್ದೇನೆ. ಅಲ್ಲಿಂದ ಚೆನ್ನೈಗೆ ಬಂದು ಇಲ್ಲಿ ರಕ್ಷಣೆ ಬೇಕೆಂದು ಕೇಳಿದ್ದೇನೆ. ಭದ್ರತೆ ಇಲ್ಲದೆ ಕರ್ನಾಟಕದಲ್ಲಿ ಕಾಲಿಡುವುದು ಸಾಧ್ಯವೇ ಇಲ್ಲ" ಎಂದು ಪ್ರಸನ್ನ ಕುಮಾರ್ ಅವರು ಗಳಗಳನೆ ಅತ್ತಿದ್ದಾರೆ.
ಬುಧವಾರ ಸಂಜೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಭೇಟಿಯಾಗಿ ರಕ್ಷಣೆ ಬೇಕೆಂದು ಕೋರುವುದಾಗಿ ಅವರು ಹೇಳಿದರು. ನನಗೆ ಮತ್ತು ನನ್ನ ಕುಟುಂಬಕ್ಕೆ ಕರ್ನಾಟಕದಲ್ಲಿ ಸುರಕ್ಷತೆಯಿಲ್ಲದ ಕಾರಣ ಚೆನ್ನೈಗೆ ಬಂದಿರುವುದಾಗಿ ಅವರು ಹೇಳಿದರು.
ಬಿಜೆಪಿಯನ್ನು ತೊರೆಯುವಾಗ ಯಡಿಯೂರಪ್ಪನವರು ತಮಗೆ ಕೆಲ ಭರವಸೆಗಳನ್ನು ನೀಡಿದ್ದರು. ಆ ಭರವಸೆಗಳು ನಿಜವಾಗುವುದಾಗಿಯೂ ನಂಬಿದ್ದೆ. ಆ ಕಾರಣದಿಂದ ಅವರನ್ನು ಕೆಜೆಪಿಗೆ ಸೇರಿಸಿಕೊಂಡಿದ್ದೆ, ಅವರಿಗೆ ಅಧಿಕಾರವನ್ನೂ ಹಾವೇರಿಯಲ್ಲಿ ಹಸ್ತಾಂತರಿಸಿದ್ದೆ. ಆದರೆ, ಅವರು ನೀಡಿರುವ ಎಲ್ಲ ಭರವಸೆಗಳು ಸುಳ್ಳಾಗಿವೆ ಎಂದು ಪ್ರಸನ್ನ ಕುಮಾರ್ ಅಲವತ್ತುಕೊಂಡಿದ್ದಾರೆ.
ಡಿ.9ರಂದು ಹಾವೇರಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ 5 ಲಕ್ಷ ಜನರೆದಿರುವ ಯಡಿಯೂರಪ್ಪನವರಿಗೆ ಅಧಿಕಾರವನ್ನು ಹಸ್ತಾಂತರಿಸಲಾಗಿತ್ತು. ನಂತರ, ಭ್ರಮನಿರಸನಗೊಂಡ ಪದ್ಮನಾಭ ಪ್ರಸನ್ನ ಕುಮಾರ್ ಅವರು ಜ.29ರಂದು ಯಡಿಯೂರಪ್ಪನವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಇದರ ತರುವಾಯ ಮರುದಿನ ಪ್ರಸನ್ನ ಕುಮಾರ್ ಅವರನ್ನೇ ಯಡಿಯೂರಪ್ಪನವರು ಹೊರದಬ್ಬಿದ್ದರು.












Click it and Unblock the Notifications