ಕುಮಾರರಿಂದ ಕೊಲೆ ಬೆದರಿಕೆ : ಕುಮಾರ್ ದೂರು

ಯಡಿಯೂರಪ್ಪ ಅಧ್ಯಕ್ಷರಾಗುವ ಮೊದಲು ಹಂಗಾಮಿ ಅಧ್ಯಕ್ಷರಾಗಿದ್ದ ಧನಂಜಯ್ ಕುಮಾರ್ ಮತ್ತು ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಅವರು ತಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರಿಂದಲೂ ಉಚ್ಚಾಟನೆಯಾಗಿರುವ ಪ್ರಸನ್ನ ಕುಮಾರ್ ಅವರು ಆರೋಪಿಸಿದ್ದಾರೆ.
ಸದ್ಯಕ್ಕೆ ಭೂಗತರಾಗಿರುವ ಪ್ರಸನ್ನ ಕುಮಾರ್ ಅವರು ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿ ತಮಗೆ ರಕ್ಷಣೆ ನೀಡಬೇಕೆಂದು ಕೋರಲಿದ್ದಾರೆ. ನಂತರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಪಕ್ಷದ ನಿಜವಾದ ಅಧ್ಯಕ್ಷ ಯಾರು, ಯಾರ್ಯಾರು ಏನೇನು ಸುಳ್ಳು ಹೇಳಿದ್ದಾರೆ ಮುಂತಾದ ಎಲ್ಲ ಅಸಲಿಯತ್ತುಗಳನ್ನು ಬಯಲಿಗೆಳೆಯುವುದಾಗಿ ಹೇಳಿದ್ದಾರೆ.
ಡಿಸೆಂಬರ್ 20ರಂದು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಯಡಿಯೂರಪ್ಪ ಅವರನ್ನು ಉಚ್ಚಾಟಿಸುತ್ತಿರುವುದಾಗಿ ಪ್ರಸನ್ನ ಕುಮಾರ್ ಬರೆದಿದ್ದರು. ಆದರೆ, ಪತ್ರ ಬಹಿರಂಗವಾಗಿ ಯಡಿಯೂರಪ್ಪನವರನ್ನು ಅಧಿಕೃತವಾಗಿ ಉಚ್ಚಾಟಿಸಿದ ನಂತರ, ಬಂದೂಕಿನಿಂದ ಶೂಟ್ ಮಾಡುವುದಾಗಿ ಧನಂಜಯ್ ಕುಮಾರ್ ಮತ್ತು ವಿಜಯೇಂದ್ರ ಅವರಿಂದ ಕೊಲೆ ಬೆದರಿಕೆ ಬಂದಿದೆ ಎಂದು ಪ್ರಸನ್ನ ದೂರಿದ್ದಾರೆ.
ಯಡಿಯೂರಪ್ಪ ಅವರು ಕೆಜೆಪಿ ಪಕ್ಷದ ಪ್ರಶ್ನಾತೀತ ನಾಯಕ. ಅವರು ಕಣ್ಣು ಬಿಟ್ಟರೆ ಸಾಕು ಭಸ್ಮ ಆಗಿಬಿಡ್ತೀಯಾ. ಅಂಥವರನ್ನೇ ಉಚ್ಚಾಟಿಸಲು ನಿನಗೆ ಎಷ್ಟು ಧೈರ್ಯ. ಅದು ಹೇಗೆ ರಾಜಕೀಯದಲ್ಲಿ ಮುಂದುವರಿತೀಯ ನೋಡ್ಕೋತೀನಿ ಎಂದು ಯಡಿಯೂರಪ್ಪ ಮಕ್ಕಳು ಬೆದರಿಕೆ ಹಾಕಿದ್ದಾರೆ ಎಂದು ಅವರು ನುಡಿದಿದ್ದಾರೆ. ಅವರು ಕೊಲೆ ಪ್ರಯತ್ನ ಮಾಡಬಹುದೆಂದು ಹೇಳಿರುವ ಅವರು ಪೊಲೀಸರಿಗೂ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಜ.31ರಂದು ನಡೆಸಲಿರುವ ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಸತ್ಯಗಳನ್ನು ದಾಖಲೆ ಸಮೇತ ಬಯಲಿಗೆಳೆಯುತ್ತೇನೆ. ಸೂರ್ಯ ಚಂದ್ರರಿರುವವರೆಗೆ ನಾನೇ ಕೆಜೆಪಿ ಪಕ್ಷದ ಅಧ್ಯಕ್ಷ. ನಾನು ದೇವಸ್ಥಾನದ ಧರ್ಮಾಧಿಕಾರಿ ಇದ್ದಂತೆ. ಉಳಿದವರೇನಾದರೂ ಬಂದು ಹೋಗುವ ಭಕ್ತರಿದ್ದಂತೆ ಎಂದು ಪದ್ಮನಾಭ ಪ್ರಸನ್ನ ಕುಮಾರ್ ಅವರು ಬಣ್ಣಿಸಿದ್ದಾರೆ. [ಹಾವೇರಿ ಸಮಾವೇಶದ ಚಿತ್ರಗಳು]












Click it and Unblock the Notifications