ಹೆಸರಘಟ್ಟ ಹುಲ್ಲುಗಾವಲನ್ನು ಉಳಿಸಲು ಸಹಿಹಾಕಿರಿ
ಬೆಂಗಳೂರು ನಗರದ ಸುತ್ತಲಿರುವ ಏಕೈಕ ನೈಸರ್ಗಿಕವಾದ ಹುಲ್ಲುಗಾವಲನ್ನು ಸರ್ವನಾಶ ಮಾಡಲು ಸರಕಾರ ತುದಿಗಾಲಲ್ಲಿ ನಿಂತಿದೆ. ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಬರುವ, ಹೆಸರಘಟ್ಟದಲ್ಲಿರುವ 305 ಎಕರೆಯಷ್ಟಿರುವ ಹುಲ್ಲುಗಾವಲಿನಲ್ಲಿ ಥೀಮ್ ಪಾರ್ಕ್, ಫಿಲ್ಮ್ಂ ಸಿಟಿ ಮತ್ತು ಗೋಲ್ಫ್ ಕೋರ್ಸ್ ನಿರ್ಮಿಸಲು ಸರಕಾರ ಅನುಮತಿ ನೀಡಿದೆ. ಈ 'ಅಭಿವೃದ್ಧಿ' ಕಾರ್ಯ ಕೈಗೊಂಡರೆ ಪರಿಸರದ ಗತಿ ಏನಾಗಲಿದೆ ಎಂಬ ಬಗ್ಗೆ ಸರಕಾರ ಎಳ್ಳಷ್ಟೂ ಚಿಂತನೆ ನಡೆಸಿಲ್ಲ.
ಹೆಸರಘಟ್ಟ ಕೆರೆಗೆ ಹೊಂದಿಕೊಂಡಿರುವ ಹಚ್ಚಹಸುರಾಗಿರುವ ಈ ಹುಲ್ಲುಗಾವಲನ್ನು ಅನೇಕ ಕಾರಣಗಳಿಂದಾಗಿ ನಾವು ಇಂದು ಉಳಿಸಿಕೊಳ್ಳಬೇಕಾಗಿದೆ. ಮೊದಲನೇಯದು, ಇದು ಬೆಂಗಳೂರಿನ ಸುತ್ತಲಿರುವ ಕಟ್ಟಕಡೆಯ ನೈಸರ್ಗಿಕ ಹುಲ್ಲುಗಾವಲು, ಎರಡನೆಯದಾಗಿ, ಇಲ್ಲಿ ಬೆಳೆಯುವ ವಿಶಿಷ್ಟ ಹೂವುಗಳು ಮತ್ತು ಚಳಿಗಾಲದಲ್ಲಿ ಇಲ್ಲಿಗೆ ಯುರೋಪ್ ಮತ್ತು ಏಷ್ಯಾ ಖಂಡದ ಅನೇಕಕಡೆಗಳಿಂದ ಹಾರಿಬರುವ ವಿಶಿಷ್ಟ ಹಕ್ಕಿಗಳು. ಇಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡರೆ ಈ ವಿಶಿಷ್ಟ ಹಕ್ಕಿಗಳು ಇನ್ನು ಇಲ್ಲಿ ಬರಲಾರವು.
ಮತ್ತೊಂದು ಪ್ರಮುಖ ಕಾರಣವೆಂದರೆ, ಸತ್ತುಹೋಗಿರುವ ಅರ್ಕಾವತಿ ನದಿಯ ಪುನರುಜ್ಜೀವನಕ್ಕಾಗಿ ಈ ಹುಲ್ಲುಗಾವಲನ್ನು ನಾವು ಉಳಿಸಿಕೊಳ್ಳಲೇಬೇಕಾಗಿದೆ. ಅರ್ಕಾವತಿ ನದಿ ಪುನರುಜ್ಜೀವನಗೊಳಿಸಲು ಟೆಂಡರ್ ಕೂಡ ಇತ್ತೀಚೆಗೆ ಕರೆಯಲಾಗಿತ್ತು. ಆದರೆ, ಅಷ್ಟರಲ್ಲಿಯೇ ಥೀಮ್ ಪಾರ್ಕ್, ಫಿಲ್ಮಂ ಸಿಟಿ ಮತ್ತು ಗೋಲ್ಫ್ ಕೋರ್ಸ್ ನಿರ್ಮಿಸಲು ಸರಕಾರ ಮುಂದಡಿ ಇಟ್ಟಿದೆ. ಇದೆಂಥ ದ್ವಂದ್ವ? ಕಳೆದ ಬಜೆಟ್ನಲ್ಲಿಯೇ ಥೀಮ್ ಪಾರ್ಕ್ ನಿರ್ಮಿಸಲು ಸರಕಾರ ಅನುಮೋದನೆ ನೀಡಿದೆ.
ಈ 'ಮಹತ್ವಾಕಾಂಕ್ಷಿ' ಯೋಜನೆಯನ್ನು ಶುರುಮಾಡುವ ಮೊದಲೇ ನಿಲ್ಲಿಸಲು ಆನ್ಲೈನ್ ಅಭಿಯಾನವನ್ನು ಆರಂಭಿಸಲಾಗಿದೆ. change.org ಆರಂಭಿಸಿರುವ 'ಹುಲ್ಲುಗಾವಲು ಉಳಿಸಿ' ಅಭಿಯಾನಕ್ಕೆ ಅಭೂತಪೂರ್ವ ಪ್ರತಿಸ್ಪಂದನೆ ವ್ಯಕ್ತವಾಗಿದೆ. ಈಗಾಗಲೆ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನರು ಇದಕ್ಕೆ ಸಹಿ ಹಾಕಿದ್ದಾರೆ. ಜನಸ್ಪಂದನೆಯನ್ನು ಗಮನಿಸಿ, ಗೌರವಿಸಿ ಈ ಯೋಜನೆಯನ್ನು ಸರಕಾರ ನಿಲ್ಲಿಸುವುದೆ? ಪರಿಸರವನ್ನು ಉಳಿಸಲು ಕಾಳಜಿ ತೋರುವುದೆ? ಎಂಬುದು ಕಾದುನೋಡಬೇಕಾಗಿದೆ. ಕೊನೆಯುಸಿರು ಹಿಡಿದು ಕೂತಿರುವ ಹುಲ್ಲುಗಾವಲು ಉಳಿಯಬೇಕು ಅಂತ ನಿಮಗೆ ಅನಿಸಿದರೆ ಇಲ್ಲಿ ಸಹಿ ಹಾಕಿರಿ.