ರಕ್ತಸಿಕ್ತ ಕರ್ನಾಟಕ : ನಮ್ಮ ನೆಮ್ಮದಿಯ ಕೊಂದವರಾರು?

ಮಹಾನಗರದಲ್ಲಿ ಇತ್ತೀಚಿಗೆ ನಡೆದ ಕೊಲೆಗಳು ದಂಡುಪಾಳ್ಯ ಚಿತ್ರದ ಪೈಶಾಚಿಕ ದೃಶ್ಯಗಳು ಕಣ್ಣೆದುರಿಗೆ ಬಂದು ಹಾದುಹೋಗುತ್ತದೆ. ಗಂಡನ, ಮಕ್ಕಳ ಬರುವಿಕೆಗಾಗಿ ಒಬ್ಬಂಟಿಯಾಗಿ ಕಾಯುವ ಗೃಹಿಣಿಯರಂತೂ ಆತಂಕದ ಮಡಿಲಲ್ಲೇ ದಿನದೂಡುವಂತಾಗಿದೆ.
ದಂಡುಪಾಳ್ಯ ಚಿತ್ರದಲ್ಲಿ ಗ್ಯಾಂಗ್ ನಡೆಸುವ ಎಲ್ಲಾ ಕೊಲೆಗಳು "ಸ್ವಲ್ಪ ನೀರು ಕೊಡ್ತೀರಾ" ಎಂದು ಶುರುವಾಗಿ ನಂತರ ಮನೆಯೊಳಗೇ ಪ್ರವೇಶಿಸಿ ಕೊಲೆ ನಡೆಸಿ. ಹಣದೊಚಿ, ಗಂಡಾಗಲಿ, ಹೆಣ್ಣಾಗಲಿ ಅತ್ಯಾಚಾರವೆಸಗಿ ಅಲ್ಲಿಂದ ಕಾಲ್ಕೀಳುತ್ತವೆ.
ಇತ್ತೀಚಿಗೆ ರಾಜಧಾನಿಯಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ಗ್ಯಾಂಗ್ ವಾರ್, ಅತ್ಯಾಚಾರಗಳು ಬೆಂಗಳೂರು ನಗರ ಸುರಕ್ಷಿತವಾಗಿದೆಯೇ ಎನ್ನುವ ಭಯ ಸಾರ್ವಜನಿಕರಲ್ಲಿ ಮೂಡಿದರೆ ಅದಕ್ಕೆ ಗೃಹ ಮತ್ತು ಪೋಲೀಸ್ ಇಲಾಖೆ ನೇರ ಹೊಣೆ ಹೊರಬೇಕಾಗುತ್ತದೆ.
ಡಿಸಿಎಂ, ಸಾರಿಗೆ ಖಾತೆಯ ಜೊತೆ ಗೃಹ ಖಾತೆಯನ್ನೂ ನೋಡಿಕೊಳ್ಳುತ್ತಿರುವ ಅಶೋಕ್ ಪಾತಕಿ, ಕ್ರಿಮಿನಲ್ ಗಳನ್ನು ಮಟ್ಟಹಾಕಲು ಪೋಲೀಸ್ ಮತ್ತು ಗೃಹ ಇಲಾಖೆಯ ಅಧಿಕಾರಿಗಳ ಸಭೆಯನ್ನು ತುರ್ತಾಗಿ ಕರೆದು ಬಂದೋಬಸ್ತ್ ಹೆಚ್ಚಿಸಿ ಸಾರ್ವಜನಿಕರ ಸೂಕ್ತ ರಕ್ಷಣೆಗೆ ಮುಂದಾಗಬೇಕಿದೆ.
ಬೆಂಗಳೂರು ನಗರ ಈ ವರ್ಷದಲ್ಲಿ ಕಂಡ ಅತ್ಯಂತ ಅಚ್ಚರಿಯ ಗ್ಯಾಂಗ್ ವಾರ್ ಎಂದರೆ ನೆಲಮಂಗಲದ ಸಮೀಪ ಬಿಎಂಎಲ್ ಕೃಷ್ಣಪ್ಪ ಮತ್ತು ಬೆತ್ತನಗೆರೆ ಸೀನ ನಡುವೆ ನಡೆದ ರೌಡಿಗಳ ಕಾಳಗ. ಸುಮಾರು 30ಕ್ಕೂಹೆಚ್ಚುಮಂದಿ ಸೀನನ ಕಡೆಯವರು ಕೃಷ್ಣಪ್ಪ ಅವರನ್ನು ಹಿಂಬಾಲಿಸಿ ಬೈಪಾಸ್ ನಲ್ಲೇ ಕೊಂದಿದ್ದು.
ಶಂಕರ್ ಬಿದರಿ ಮಹಾನಗರದ ಪೋಲೀಸ್ ವರಿಷ್ಠರಾಗಿದ್ದಾಗ ಪಾತಕ ಜಗತ್ತಿಗೆ ಬಿಸಿ ಮುಟ್ಟಿಸುವಲ್ಲಿ ಒಂದು ಮಟ್ಟಿಗೆ ಯಶಸ್ಸನ್ನು ಕಂಡಿದ್ದರು. ರೌಡಿಗಳು, ಕ್ರಿಮಿನಲ್ ಗಳು ಬೆಂಗಳೂರಿನಿಂದ ಭೂಗತವಾಗಿದ್ದರು. ಬಿದರಿ ಸಾಹೇಬ್ರು ಪದವಿಯಿಂದ ನಿರ್ಗಮಿಸುವ ತನಕ ಕಾದು ಈಗ ಮತ್ತೆ ನಗರದಲ್ಲಿ ತಲೆ ಎತ್ತಿದ್ದಾರೆಯೇ?
ಪಾತಕಿಗಳಿಗೆ ಸಿಂಹಸ್ವಪ್ನವಾಗಿದ್ದ ಸಿಸಿಬಿಯ ಡೈನಾಮಿಕ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಸಿಸಿಬಿಯಿಂದ ವರ್ಗಾವಣೆ ಮಾಡಿದ್ದು ನಗರದ ನೆಮ್ಮದಿಗೆ ಮತ್ತಷ್ಟು ಮುಳುವಾಯಿತೇ?
ನಗರದಲ್ಲಿ ಮತ್ತು ಇತರ ಭಾಗದಲ್ಲಿ ಇದುವರೆಗೆ ನಡೆದ ಕೊಲೆಗಳು ವೈಯಕ್ತಿಕ ಕಾರಣಕ್ಕಾಗಿ ನಡೆದ ಕೊಲೆಗಳು ಎನ್ನುವ ಹೇಳಿಕೆ ನೀಡಿರುವ ಗೃಹ ಸಚಿವರು, ಬೆಂಗಳೂರು ಕೂಡಾ ನೆಮ್ಮದಿಯ ತಾಣ ಎನ್ನುವ ಭರವಸೆಯನ್ನು ಸಾರ್ವಜನಿಕರಿಗೆ ನೀಡುವ ಅಗತ್ಯವಿದೆ.
ಬೆಂಗಳೂರನ್ನು ರೌಡಿಗಳ ಸಾಮ್ರಾಜ್ಯವಾಗಲು ಬಿಡುವುದಿಲ್ಲ. ಸಿಸಿಬಿಗೆ ಮತ್ತಷ್ಟು ಬಲವನ್ನು ನೀಡಿ ಮೇಲ್ದರ್ಜೆಗೆ ಏರಿಸಲಾಗುವುದು. ರೌಡಿಗಳ ನಿಯಂತ್ರಣಕ್ಕೆ ವಿಶೇಷ ದಳ ರೂಪಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗುವುದು ಎನ್ನುವ ಸಚಿವ ಆರ್ ಅಶೋಕ್ ಹೇಳಿಕೆ ಸ್ವಾಗತಾರ್ಹ, ಈ ನಿಟ್ಟಿನಲ್ಲಿ ಶೀಘ್ರ ಕಾರ್ಯ ಪ್ರವೃತ್ತರಾಗಲಿ.
ನಾಡಿನಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ರೌಡಿಗಳ ಅಟ್ಟಹಾಸ ಮುಂತಾದ ಪ್ರಕರಣಗಳನ್ನು ಮಾಧ್ಯಮಗಳು ಸವಿವರವಾಗಿ, ಡಿಟಿಎಸ್ ಎಫೆಕ್ಟ್, ವೀಕ್ಷಕ ವಿವರಣೆಯೊಂದಿಗೆ ನೀಡುತ್ತಿರುವುದು ಕೂಡಾ ಬೆಂಗಳೂರಿಗರು ಬೆಚ್ಚಿ ಬೀಳಲು ಕಾರಣವಿರಬಹುದೇ?












Click it and Unblock the Notifications