ಸಿಬಿಐ ಅರ್ಜಿ ವಜಾ: ಯಡಿಯೂರಪ್ಪ ಸುಪ್ರೀಂ ಸಮಾಧಾನ
ಸಿಬಿಐ ಮೇಲ್ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಆ ವಿಚಾರವನ್ನು ಹೈಕೋರ್ಟಿನಲ್ಲೇ ಇತ್ಯರ್ಥಪಡಿಸಿಕೊಳ್ಳಿ ಎಂದು ನ್ಯಾಯಮೂರ್ತಿಗಳಾದ ಟಿಎಸ್ ಠಾಕೂರ್ ಮತ್ತು ಇಬ್ರಾಹಿಂ ಖಲೀಫುಲ್ಲಾ ಅವರ ನ್ಯಾಯಪೀಠ ಸೂಚಿಸಿದೆ. ಇದರಿಂದ ಯಡಿಯೂರಪ್ಪ ಅವರನ್ನು ಬಂಧಿಸಿ, ವಿಚಾರಣೆಗೆ ಗುರಿಪಡಿಸುವ ಸಿಬಿಐ ಪ್ರಯತ್ನ ಗಗನಕುಸುಮವಾಗಿದೆ.
ಗಣಿ ದೇಣಿಗೆ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪರಿಗೆ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ಸುಭಾಷ್ ಆದಿ ಅವರ ಏಕಸದಸ್ಯ ಪೀಠ ನಿರೀಕ್ಷಣಾ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ, 'ಯಡಿಯೂರಪ್ಪ ಈ ಪ್ರಕರಣದ ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ಆದ್ದರಿಂದ ಅವರ ಜಾಮೀನನ್ನು ರದ್ದುಗೊಳಿಸಬೇಕು' ಎಂದು ಸಿಬಿಐ ಪರ ವಕೀಲ ಮೋಹನ್ ಪರಶರಣ್ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದರು. ಇದನ್ನು ಆಲಿಸಿದ ನ್ಯಾಯಾಲಯ ಸಿಬಿಐಯ ಮೇಲ್ಮನವಿಯನ್ನು ರದ್ದುಗೊಳಿಸಿ, ಹೈಕೋರ್ಟಿಗೇ ವಾಪಸ್ ಹೋಗಿ ಎಂದು ಸೂಚಿಸಿದೆ.
ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಸಮಾಧಾನ ವ್ಯಕ್ತಪಡಿಸಿರುವ ಬಿ ಎಸ್ ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ತಾನು ಮತ್ತು ತನ್ನ ಕುಟುಂಬದವರು ಸಂಪೂರ್ಣವಾಗಿ ಸಹಕರಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.