ಮೋದಿ ಮೇಲೆ ಕೇಜ್ರಿವಾಲ್ ಗಂಭೀರ ಆರೋಪ
ಪ್ರಶ್ನೆ: ಬಾಬಾ ರಾಮದೇವ್ ಅವರು ಟೀಂ ಅಣ್ಣಾ ಜತೆಗೂಡಿದ್ದು, ತಂಡದ ಉಪವಾಸ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇದೇ ವೇಳೆ ಅವರು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಜತೆ ವೇದಿಕೆ ಹಂಚಿಕೊಂಡಿದ್ದಾರೆ. ಜತೆಗೆ ಅವರನ್ನು ಸಮರ್ಥಸಿಕೊಂಡು, ಹೊಗಳಿದ್ದಾರೆ.
ಆದರೆ ಅಣ್ಣಾ ಹಜಾರೆ ಆಂದೋಲನದ ಸದಸ್ಯರು ಬಾಬಾ ರಾಮದೇವರ ಈ ನಡೆಯನ್ನು ವಿರೋಧಿಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ?
ಅರವಿಂದ್ ಕೇಜ್ರಿವಾಲ: ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಕೋಮು ದಳ್ಳುರಿ ಆರೋಪಗಳಷ್ಟೇ ಅಲ್ಲ; ಅವರ ರಾಜ್ಯದಲ್ಲಿ ಬಹಳಷ್ಟು ಭ್ರಷ್ಟಾಚಾರವೂ ಇದೆ. ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮಂತ್ರಿಮಂಡಲದಲ್ಲಿ ಪುರುಷೋತ್ತಮ್ ಸೋಲಂಕಿ ಮತ್ತಿತರ ಸಚಿವರ ವಿರುದ್ಧ ಗಂಭೀರವಾದ ಭ್ರಷ್ಟಾಚಾರ ಆರೋಪಗಳಿವೆ.
ಈ ಸಚಿವರ ವಿರುದ್ಧ ತನಿಖೆಗೆ ಸಿಎಂ ಮೋದಿ ಅನುಮತಿಯನ್ನೇ ನೀಡುತ್ತಿಲ್ಲ. ಇವರ ವಿರುದ್ಧದ ತನಿಖೆಗೆ ಮೂರು ತಿಂಗಳಲ್ಲಿ ಅನುಮತಿ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಆದರೂ ಮೋದಿ ಜಗ್ಗುತ್ತಿಲ್ಲ. ಭ್ರಷ್ಟ ಮಂತ್ರಿಗಳನ್ನು ರಕ್ಷಿಸುವಲ್ಲಿ ಮೋದಿ ಪ್ರಧಾನ ಪಾತ್ರ ನಿರ್ವವಹಿಸುತ್ತಿದ್ದಾರೆ. ಆದ್ದರಿಂದ ಇಂತಹ ವ್ಯಕ್ತಿಗಳ ಜತೆ ಗುರುತಿಸಿಕೊಳ್ಳುವುದು ಔಚಿತ್ಯಪೂರ್ಣವಲ್ಲ.
ಪ್ರಶ್ನೆ: ಅರವಿಂದ್ ಕೇಜ್ರಿವಾಲ ಆರೋಗ್ಯ ಹೇಗಿದೆ? ನಿಮಗೆ ಮಧುಮೇಹ ಇದೆಯಂತೆ? ಆದರೂ ಕಳೆದ 5 ದಿನಗಳಿಂದ ಉಪವಾಸವಿರುವುದರ ಗುಟ್ಟೇನು?
ಅರವಿಂದ್ ಕೇಜ್ರಿವಾಲ: ಒಂದಷ್ಟು ಜನ ಮತ್ತು ಮಾಧ್ಯಮ ಮಿತ್ರರು ಈ ಬಗ್ಗೆ ಹೇಳುತ್ತಿರುವುದು ನನ್ನ ಕಿವಿಗೂ ಬಿದ್ದಿದೆ. ಉಪವಾಸ ವೇದಿಕೆಯ ಹಿಂದೆ ಹೋಗಿ ಒಂದಷ್ಟು ತಿಂದುಕೊಂಡು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವುದೇ ಘಳಿಗೆಯಲ್ಲಿ ಯಾರೇ ಬೇಕಾದರೂ ಬಂದು ನಾನು ಏನನ್ನು ತಿನ್ನುತ್ತಿದ್ದೇನೆ ಎಂಬುದನ್ನು ಪರಾಂಬರಿಸಬಹುದು.
ಐದು ದಿನಗಳ ಹಿಂದೆ ನಾನು ಉಪವಾಸಕ್ಕೆ ಕುಳಿತಾಗ ವೈದ್ಯರು ಬೇಡ ಮಾರಾಯಾ ಎಂದಿದ್ದರು. ನನ್ನ ಆರೋಗ್ಯದಲ್ಲಿ ಭಾರಿ ಏರುಪೇರಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದರು. ಆದರೆ ಈಗ 5 ದಿನಗಳ ನಂತರವೂ ನಾನು ಉಪವಾಸದಿಂದ ಕಂಗೆಟ್ಟಿಲ್ಲ. ಮಾನಸಿಕವಾಗಿ/ ದೈಹಿಕವಾಗಿ ಸದೃಢವಾಗಿದ್ದೇನೆ. ಕೋಟ್ಯಂತರ ಜನ ನಮಗಾಗಿ ಪ್ರಾರ್ಥಿಸುತ್ತಿದ್ದಾರೆ. ಆ ದೇವರು ಸಹ ನಮ್ಮ ಪರವೇ ಇದ್ದಾರೆ. ಇನ್ನೂ 20-30 ದಿನ ಉಪವಾಸ ಮಾಡುವಷ್ಟು ದೈಹಿಕ ಸಾಮರ್ಥ್ಯ ನನಗೆ ಇದೆ.