ಭ್ರಷ್ಟಾಚಾರ ನಿರ್ಮೂಲನೆ ಯುವಕರಿಂದ ಸಾಧ್ಯ : ಹೆಗ್ಡೆ
ಜಯನಗರ 7ನೇ ಬ್ಲಾಕ್ನಲ್ಲಿರುವ ನ್ಯಾಷನಲ್ ಪದವಿ ಕಾಲೇಜಿನ ಬಿ.ವಿ.ಜಗದೀಶ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ 'ಪತ್ರಿಕೋದ್ಯಮ ವಿದ್ಯಾರ್ಥಿಗಳೊಡನೆ ಸಂವಾದ' ಕಾರ್ಯಕ್ರಮದಲ್ಲಿ ನ್ಯಾ. ಸಂತೋಷ್ ಹೆಗ್ಡೆಯವರು, ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿರುವ ಭ್ರಷ್ಟಾಚಾರ, ಅದನ್ನು ನಿಗ್ರಹಿಸುವಲ್ಲಿ ಪತ್ರಕರ್ತರ ಪಾತ್ರ ಎಂಬ ವಿಷಯ ಕುರಿತು ವಿಸ್ತೃತವಾಗಿ ಮಾತನಾಡಿದರು.
ಹಲವಾರು ವರ್ಷಗಳಿಂದ ಭ್ರಷ್ಟಾಚಾರ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿಬಿಟ್ಟಿದೆ. ಅದನ್ನು ಬೇರುಸಮೇತ ಕಿತ್ತುಬಿಸಾಕುವುದು ಅಷ್ಟು ಸುಲಭವಲ್ಲ. ಆದರೆ, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ವಿದ್ಯಾರ್ಥಿಗಳು ಭ್ರಷ್ಟಾಚಾರವನ್ನು ಕಿತ್ತೊಗೆಯಲು ಸಂಕಲ್ಪ ಮಾಡಬೇಕು. ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ವಿದ್ಯಾರ್ಥಿಗಳು ಧುಮುಕಬೇಕು ಎಂದು ಅವರು ಆಗ್ರಹಿಸಿದರು.
ಭ್ರಷ್ಟಾಚಾರ ಕುರಿತ ಅನೇಕ ಪ್ರಕರಣಗಳನ್ನು ಮಾಧ್ಯಮಗಳು ಬಯಲು ಮಾಡಿದ್ದನ್ನು, ಭ್ರಷ್ಟಾಚಾರಿಗಳನ್ನು ಬಯಲಿಗೆಳೆದದ್ದನ್ನು ಉದಾಹರಣೆ ಸಮೇತ ವಿವರಿಸಿದ ಹೆಗ್ಡೆ ಅವರು, ಇಂದಿನ ಪತ್ರಕರ್ತರು ಆ ಭ್ರಷ್ಟ ವ್ಯವಸ್ಥೆಯ ಭಾಗವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕುಡಿಯೊಡೆಯುತ್ತಿರುವ ಮರಿಪತ್ರಕರ್ತರಿಗೆ ಕಿವಿಮಾತು ಹೇಳಿದರು. ಭ್ರಷ್ಟ ವ್ಯವಸ್ಥೆಯನ್ನು ಬುಡಮೇಲು ಮಾಡುವುದಾಗಿ ವಿದ್ಯಾರ್ಥಿಗಳು ಪ್ರಮಾಣ ಸ್ವೀಕರಿಸಬೇಕು ಎಂದು ಕರೆ ನೀಡಿದರು.
ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಮತ್ತು ಅದರ ವಿರುದ್ಧ ಹೋರಾಡುವ ಮಾಧ್ಯಮವನ್ನು ತಾವು ಯಾವತ್ತೂ ಬೆಂಬಲಿಸುವುದಾಗಿ ಅವರು ನುಡಿದರು. ನ್ಯಾ.ಹೆಗ್ಡೆಯವರ ಮಾತು ಕೇಳಬೇಕೆಂದು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ನ್ಯಾಷನಲ್ ಕಾಲೇಜಿನಲ್ಲಿ ನೆರೆದಿದ್ದರು. ಹೆಗ್ಡೆಯವರ ಅನುಭವದ ಮಾತುಗಳನ್ನು ತದೇಕಚಿತ್ತದಿಂದ ಕೇಳಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕ್ರಿಯಾತ್ಮಕವಾಗಿ ಸಂವಾದದಲ್ಲಿ ಭಾಗವಹಿಸಿದರು.
ಮಾಧ್ಯಮದ ಭವಿಷ್ಯ ಇಂಟರ್ನೆಟ್ನಲ್ಲಿ : ಹೆಗ್ಡೆಯವರ ನಂತರ 'ಆನ್ಲೈನ್ ಪತ್ರಿಕೋದ್ಯಮ' ವಿಷಯ ಕುರಿತು ಒನ್ಇಂಡಿಯಾ ಕನ್ನಡ ಪೋರ್ಟಲ್ ಸಂಪಾದಕ ಎಸ್.ಕೆ. ಶಾಮ ಸುಂದರ ಅವರು ತಮ್ಮ ಅನುಭವದ ನುಡಿಗಳನ್ನು ರಂಜನೀಯವಾಗಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ನಾವು ನೀವು ಎಲ್ಲರೂ ಇರುವವರೆಗೆ ದಿನಪತ್ರಿಕೆ, ಟಿವಿ ಮಾಧ್ಯಮ ಜೀವಂತವಾಗಿಯೇ ಇರುತ್ತದೆ. ಆದರೆ, ಭವಿಷ್ಯ ಇರುವುದು ಡಿಜಿಟಲ್ ಮೀಡಿಯಾದಲ್ಲಿ ಎಂದು ಅವರು ಪ್ರತಿಪಾದಿಸಿದರು.
ಇಂಟರ್ನೆಟ್ ಮಾಧ್ಯಮ ಪತ್ರಿಕೆ ಮತ್ತು ಟಿವಿ ಮಾಧ್ಯಮಕ್ಕಿಂತ ಇಂಟರಾಕ್ಟೀವ್ ಆಗಿರುತ್ತದೆ. ಇಲ್ಲಿ ಬರವಣಿಗೆಯೊಂದೇ ಪ್ರಮುಖ ಕೆಲಸವಾಗಿರುವುದಿಲ್ಲ. ಇಮೇಲ್ ನೋಡುವುದು, ಫೇಸ್ಬುಕ್ ಬಳಸುವುದು, ಟ್ವಿಟ್ಟರ್ನಂತಹ ಸಾಮಾಜಿಕ ತಾಣಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳುವುದು ದೈನಂದಿನ ಕೆಲಸದ ಭಾಗವಾಗಿರುತ್ತದೆ. ಇಂಟರ್ನೆಟ್ಟಿನಲ್ಲಿ ಬರವಣಿಗೆ ಓದುಗರೊಡನೆ ನಡೆಸುವ ನೇರಾನೇರ ಸಂವಾದದಂತಿರುತ್ತದೆ. ಬರವಣಿಗೆ ಕಾಲದ ವೇಗಕ್ಕೆ ತಕ್ಕಂತೆ ಹೊಸತನ ಕಾಣುತ್ತಲೇ ಇರುತ್ತದೆ ಎಂದು ಶಾಮಸುಂದರ ವಿವರಿಸಿದರು.
ಪತ್ರಿಕೋದ್ಯಮದ ಭವಿಷ್ಯ ಡಿಜಿಟಲ್ ಮತ್ತು ಮೊಬೈಲ್ನಲ್ಲಿ ಅಡಗಿದೆ. ಒಂದು ವರದಿಯ ಪ್ರಕಾರ, 2015ರ ಹೊತ್ತಿಗೆ ಭಾರತದಲ್ಲಿ 350 ಮಿಲಿಯನ್ ಇಂಟರ್ನೆಟ್ ಬಳಕೆದಾರರು ಇರಲಿದ್ದಾರೆ. ಹೀಗಾಗಿ, ಭವಿಷ್ಯದ ಪತ್ರಕರ್ತರಿಗೆ ಇಂಟರ್ನೆಟ್ ಅವಕಾಶದ ಹೆಬ್ಬಾಗಿಲು ತೆರೆಯುವುದರ ಜೊತೆಗೆ ಅನೇಕ ಸವಾಲುಗಳನ್ನು ಕೂಡ ಒಡ್ಡಲಿದೆ ಎಂದು ಹೇಳಿದ ಶಾಮ್, ಈ ಅವಕಾಶವನ್ನು ನೀವು ಬಾಚಿಕೊಳ್ಳಬೇಕು ಎಂದು ಯುವಪತ್ರಕರ್ತರಿಗೆ ಆಹ್ವಾನ ನೀಡಿದರು.