ಸದಾನಂದಗೌಡರ ಪತನಕ್ಕೆ ಕಾರಣವಾದ ದೇವರ ಖಾತೆ
ಬೆಂಗಳೂರು, ಜು.9: ಮಂಡೆಕೋಲು ಗ್ರಾಮದ ದೇವರಗುಂಡ ಕುಟುಂಬದ ಸದಾನಂದ ಗೌಡರು ಕರ್ನಾಟಕ ಮುಖ್ಯಮಂತ್ರಿ ಹುದ್ದೆ ಏರಿ ಇಳಿದಿದ್ದು ಚಂದಮಾಮ ಕಥಾನಕದಂತೆ ನಡೆದು ಬಿಟ್ಟಿದೆ. ಈಗ ಸದಾನಂದಗೌಡರ ಪತನಕ್ಕೆ ನೈಜ ಕಾರಣ ಹುಡುಕುವಲ್ಲಿ ಒಕ್ಕಲಿಗರ ಸಮುದಾಯವಷ್ಟೇ ಅಲ್ಲದೆ ಜನತೆ ಕೂಡಾ ಕಾತುರರಾಗಿದ್ದಾರೆ.
ಈ ಸಂದರ್ಭದಲ್ಲಿ ಸದಾನಂದಗೌಡರ ಪತನಕ್ಕೆ ದೇವರ ಖಾತೆ ಕಾರಣವಾಯಿತು ಎಂಬ ಸತ್ಯ ಹೊರಬಿದ್ದಿದೆ. 21+9 ಖಾತೆ ಭಾರ ಹೊತ್ತಿದ್ದರೂ ಸದಾಕಾಲ ನಗುಮೊಗ ಹೊತ್ತು ರಾಜ್ಯಭಾರ ಮಾಡಿದ ಸದಾನಂದ ಗೌಡರ ಅವನತಿಗೆ ಶಾಪಗ್ರಸ್ತ ಖಾತೆಯೆಂದೇ ಹೆಸರುವಾಸಿಯಾಗಿರುವ 'ಮುಜರಾಯಿ ಖಾತೆ' ಕಾರಣ ಎಂಬ ಜಿಜ್ಞಾಸೆ ನಡೆದಿದೆ.

ಮುಜರಾಯಿ ಖಾತೆ ವಹಿಸಿಕೊಂಡ ಸಚಿವರುಗಳು ನಂತರದ ಚುನಾವಣೆಯಲ್ಲಿ ಸೋಲುಂಡ ಸಂಪ್ರದಾಯಗಳು ಬೆಳೆದು ಬಂದಿದೆ. ಕುಮಾರಸ್ವಾಮಿ ಸರ್ಕಾರದಲ್ಲಿ ಮುಜರಾಯಿ ಸಚಿವರಾಗಿದ್ದ ನಾಗರಾಜ ಶೆಟ್ಟಿ, ಇದಕ್ಕೂ ಮೊದಲು ಈ ಖಾತೆ ವಹಿಸಿಕೊಂಡಿದ್ದ ಸುಮಾ ವಸಂತ್, ಎಂಪಿ ಪ್ರಕಾಶ್ ನಂತರದ ಚುನಾವಣೆಯಲ್ಲಿ ಸೋಲುಂಡಿದ್ದರು. ಈ ಸಂಪ್ರದಾಯವನ್ನು 'ಸೋಲಿಲ್ಲದ ಸರದಾರ' ವಿ ಸೋಮಣ್ಣ ಮುಂದುವರೆಸಿದರು. ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ, ಈ ಖಾತೆ ವಹಿಸಿಕೊಂಡು ನಂತರದ ಚುನಾವಣೆಯಲ್ಲಿ ಗೋವಿಂದರಾಜನಗರದಿಂದ ಸ್ಪರ್ಧಿಸಿ ಸೋತರು.
ಮುಜರಾಯಿ ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟಿ, ಬೇರೆಯವರಿಗೆ ಅಧಿಕಾರ ಹಸ್ತಾಂತರಿಸಲು ಖಾತೆ ಕಳೆದುಕೊಂಡರು, ನಂತರ ಜೈಲು ಸೇರಿದರು. ಗಂಗಾಜಲ, ತಿರುಪತಿ ಲಡ್ಡು ಹಂಚಿಕೆ, ಸಿಎಂ ಹೆಸರಿನಲ್ಲಿ ನಿತ್ಯ ಪೂಜೆ ಮುಂತಾದ ಯೋಜನೆಗಳನ್ನು ಜಾರಿಗೆ ತಂದು ಅಪಹಾಸ್ಯಕ್ಕೀಡಾದರು. ನಂತರ ಸೋಮಣ್ಣ ಕೂಡಾ ದೇವರ ಖಾತೆ ಭಾರದಿಂದ ನೆಲಕಚ್ಚಿದರು.
ದೈವಭಕ್ತ ದಿವಂಗತ ಡಾ. ವಿಎಸ್ ಆಚಾರ್ಯ ಅವರಿಗೆ ಯಾರಿಗೂ ಬೇಡವಾದ ದೇವರ ಖಾತೆ ಹೊರೆಯನ್ನು ನೀಡಲಾಯಿತು. ಅನಾರೋಗ್ಯದಿಂದ ಆಚಾರ್ಯ ಅವರು ಅಕಾಲಿಕ ಮರಣಕ್ಕೆ ತುತ್ತಾದರು. ನಂತರ ಖಾತೆ ಪಡೆದ ಶ್ರೀಕೃಷ್ಣ ಪಾಲೇಮಾರ್ ಅವರು ವಿಧಾನಸಭೆಯಲ್ಲಿ ನೀಲಿ ಚಿತ್ರ ವೀಕ್ಷಿಸಿದ ಶಾಸಕರ ಪಟ್ಟಿಗೆ ಸೇರಿ ಆರೋಪ ಹೊತ್ತು ಅಧಿಕಾರ ಕಳೆದುಕೊಂಡರು.
ನಂತರ ಈ ಶಾಪಗ್ರಸ್ತ ಖಾತೆಯನ್ನು ಯಾರಿಗೂ ನೀಡದೆ ಡಿವಿ ಸದಾನಂದ ಗೌಡರು ತಮ್ಮಲ್ಲೇ ಉಳಿಸಿಕೊಂಡಿದ್ದರು. ಅದರೆ, ಆಂತರಿಕ ಕಿತ್ತಾಟದ ಫಲವಾಗಿ ಸದಾನಂದ ಗೌಡರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಇದು ದೇವರ ಶಾಪವೇ ಕಾರಣ ಎನ್ನಲಾಗುವುದಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಜರಾಯಿ ಇಲಾಖೆಗೆ,ಮಠ ಮಾನ್ಯಗಳಿಗೆ ಯಥೇಚ್ಛವಾಗಿ ದಾನ ಧರ್ಮ ಮಾಡಲಾಗಿದೆ. ದೇವರ ಬಗ್ಗೆ ಭಯ ಭಕ್ತಿಯಿಂದ ನಡೆದುಕೊಳ್ಳಲಾಗಿದೆ. ಆದರೂ ಮುಜರಾಯಿ ಖಾತೆಯಿಂದ ಅಧಿಕಾರ ಕಳೆದುಕೊಳ್ಳುವುದು ನಿಗೂಢತೆ ಇನ್ನೂ ಹಾಗೇ ಉಳಿದಿದೆ.
ಕೃಷ್ಣಯ್ಯ ಶೆಟ್ಟಿ ಕನವರಿಕೆ: ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಅವರ ಹೆಸರಿನಲ್ಲಿ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ನಿತ್ಯ ಪೂಜೆ ಕಡ್ಡಾಯಗೊಳಿಸಲಾಗಿತ್ತು. ಆದರೆ, ಅಂದಿನ ಮುಜರಾಯಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ನೀಡಿದ್ದ ಆದೇಶಕ್ಕೆ ಭಾರಿ ಪ್ರತಿರೋಧ ಕಂಡು ಬಂದಿತ್ತು. ಸ್ವತಃ ಯಡಿಯೂರಪ್ಪ ಅವರು ಮುಜುಗರ ಅನುಭವಿಸಿದ್ದರು.
ನಂತರ ಯಡಿಯೂರಪ್ಪ ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವುದನ್ನು ನಿಲ್ಲಿಸಲಾಗಿತ್ತು. ಇದರ ಪರಿಣಾಮ ಈಗ ಬಿಜೆಪಿಯಲ್ಲಿ ಒಡಕು ಮೂಡಿದೆ. ರಾಜಕೀಯ ಸಮಸ್ಯೆಗಳು ತಲೆದೋರಿವೆ ಎಂದು ಮಾಜಿ ಮಂತ್ರಿ ಕೃಷ್ಣಯ್ಯ ಶೆಟ್ಟಿ ಹೇಳಿದ್ದರು.
ದಿನಂಪ್ರತಿ ಎಲ್ಲಾ ದೇವಾಲಯಗಳಲ್ಲೂ ಪೂಜೆ ಮಾಡಬೇಕೆಂದು ಆದೇಶ ಹೊರಡಿಸಿದ್ದೆ. ಆದರೆ ಅದನ್ನು ಒಂದೇ ತಿಂಗಳು ಮಾಡಲಾಗಿತ್ತು. ನಂತರ ನಿಲ್ಲಿಸಲಾಗಿತ್ತು. ಪೂಜೆಯನ್ನ ಅರ್ಧಕ್ಕೆ ನಿಲ್ಲಿಸಿದ್ದರಿಂದಲೇ ರಾಜ್ಯದ ಈ ದುಸ್ಥಿತಿಗೆ ಕಾರಣವಾಗಿದೆ. ಯಡಿಯೂರಪ್ಪ ಅವರ ಸರ್ಕಾರ ಪತನ, ವೃಥಾ ಆರೋಪಗಳು, ಸ್ವಜನರಿಂದಲೇ ಹಾನಿ ಎಲ್ಲವೂ ಇದರ ಫಲ ಎಂದು ಶೆಟ್ಟರು ಹೇಳಿದ್ದರು.












Click it and Unblock the Notifications