ಗಾಂಧಿನಗರ ಉಪಚುನಾವಣೆ ಕಾಂಗ್ರೆಸ್ ಜಯಭೇರಿ
ಅನುಕಂಪದ ಅಲೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ಸಿನ ಗೋಪಾಲಕೃಷ್ಣ 6721 ಮತ ಪಡೆದು ವಿಜಯ ಸಾಧಿಸಿದ್ದಾರೆ. ಗೋಪಾಲ್ ತಮ್ಮ ಗೆಲುವನ್ನು ಕಾಂಗ್ರೆಸ್ ಯುವ ನಾಯಕ, ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಅರ್ಪಿಸಿದ್ದಾರೆ. ಸಮೀಪದ ಬಿಜೆಪಿ ಅಭ್ಯರ್ಥಿ ರಾಮಚಂದ್ರ 4725 ಮತ ಪಡೆದಿದ್ದರೆ ಜೆಡಿಎಸ್ ನ ಪಿಕೆ ಸುರೇಶ್ ಕೇವಲ 408 ಮತಗಳಿಸಿ, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಕಾಂಗ್ರೆಸ್ ಸದಸ್ಯ ನಟರಾಜ್ ಹತ್ಯೆಯಿಂದ ತೆರವಾಗಿದ್ದ ಈ ವಾರ್ಡ್ನಲ್ಲಿ ಭಾನುವಾರ (ಫೆ.27) ಮತದಾನ ನಡೆದಿತ್ತು. ಕಾಂಗ್ರೆಸ್ನ ಟಿ. ಗೋಪಾಲಕೃಷ್ಣ, ಬಿಜೆಪಿಯ ಜಿ. ರಾಮಚಂದ್ರ, ಜೆಡಿಎಸ್ನ ಪಿ.ಕೆ. ಸುರೇಶ್, ಎಐಎಡಿಎಂಕೆಯ ಎಂ.ಪಿ. ಯುವರಾಜ್, ಜೆಡಿಯುನ ಎಸ್. ಅಶ್ವತ್ಥ ನಾರಾಯಣ, ಪಕ್ಷೇತರರಾಗಿ ಕೆ. ರಮೇಶ್, ಎಸ್.ಎನ್. ರಮೇಶ್, ಸಿ.ಜಿ.ಕೆ. ರಾಮು, ಅಬ್ದುಲ್ ಗಫಾರ್ ಕಣದಲ್ಲಿದ್ದರು.
ವಾರ್ಡ್ನಲ್ಲಿ ಒಟ್ಟು 24,851 ಮಂದಿ ಮತದಾರರಿದ್ದಾರೆ. ಆದರೆ, ಈ ಬಾರಿಯ ಉಪ ಚುನಾವಣೆಯಲ್ಲಿ ಕೇವಲ 11,718 ಮಂದಿ ಮತ ಚಲಾಯಿಸಿದ್ದು, ಕೇವಲ ಶೇ.47ರಷ್ಟು ಮತದಾನ ಆಗಿತ್ತು.
ರಾಮನಗರ, ಶಿವಮೊಗ್ಗದಲ್ಲಿ ಜೆಡಿ ಎಸ್ ಗೆ ಗೆಲುವು: ಇದೇ ವೇಳೆ, ರಾಮನಗರ ನಗರಸಭೆ 2ನೇ ವಾರ್ಡ್ ಉಪಚುನಾವಣೆಯಲ್ಲಿ ಜೆಡಿ ಎಸ್ ಅಭ್ಯರ್ಥಿ ನಾಗರಾಜ್ ಕೇವಲ 17 ಮತಗಳ ಅಂತದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಶಿವಮೊಗ್ಗ ನಗರಸಭೆ 19ನೇ ವಾರ್ಡ್ ಉಪಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿ ನಾಗರಾಜು 300 ಮತಗಳಿಂದ ಗೆಲುವು ಸಾಧಿಸಿದ್ದಾರೆ.