ಉಡುಪಿಯಲ್ಲಿ ರೈತರ ಅರೆಬೆತ್ತಲೆ ಪ್ರತಿಭಟನೆ
ಯುಪಿಸಿಎಲ್ ಕಂಪೆನಿಯಿಂದಾಗಿ ಸ್ಥಳೀಯ ಪರಿಸರ, ಜನಜೀವನದ ಮೇಲೆ ಉಂಟಾಗಿರುವ ಸಮಸ್ಯೆಗಳನ್ನು ಆಲಿಸಲು ಜಿಲ್ಲಾಧಿಕಾರಿ ಡಾ| ಎಂ.ಟಿ. ರೆಜು ಅವರು ಇತ್ತೀಚೆಗೆ ಯುಪಿಸಿಎಲ್ ಪ್ರದೇಶಕ್ಕೆ ಭೇಟಿ ಇತ್ತಾಗ ಅ. 17ರ ಒಳಗೆ ಸಾರ್ವಜನಿಕ ಅಹವಾಲು ಸ್ವೀಕರಿಸುತ್ತೇನೆಂದು ಹೇಳಿದ್ದರು. ಆದರೆ ಸೋಮವಾರ ನಡೆಯಬೇಕಾಗಿದ್ದ ಈ ಅಹವಾಲು ಸಭೆಯನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಿದ್ದು ರೈತಸಂಘದವರನ್ನು ಕೆರಳಿಸಿ ಪ್ರತಿಭಟನೆಗೆ ಮುಂದಾಗಲು ಕಾರಣವಾಯಿತು.
ಊಟದ ತಟ್ಟೆ, ರಾಸಾಯನಿಕ ಮಿಶ್ರಿತಗೊಂಡ ಕಲುಷಿತ ನೀರು, ರೋಗಪೀಡಿತ ಜನ, ಪ್ರಾಣಿಗಳ ಚಿತ್ರಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು ಶುದ್ಧ ಗಾಳಿ, ನೀರು ಇಲ್ಲದೆ ನಾವು ಪರಿತಪಿಸುತ್ತಿದ್ದೇವೆ ಎಂದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಪ್ರತಿಭಟನಾ ನಿರತರ ಮನವೊಲಿಸಿದರೂ ಡಿಸಿ ರೆಜು ಅವರೇ ಬಂದು ನಮಗೆ ಲಿಖಿತ ಭರವಸೆ ನೀಡಬೇಕೆಂದು ಪಟ್ಟು ಹಿಡಿದರು.
ಪ್ರತಿಭಟನಾಕಾರರು ತಮ್ಮ ಶರ್ಟುಗಳನ್ನು ಕಳಚಿಕೊಂಡು ಅರೆಬೆತ್ತಲೆಯಾಗಿ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ಘೋಷಣೆ ಕೂಗಿ ಧರಣಿ ಕುಳಿತರು. ಪ್ರತಿಭಟನಾಕಾರರು ಅರೆಬೆತ್ತಲೆಯಲ್ಲಿಯೇ ಡಿಸಿ ಕಚೇರಿಯೊಳಗೆ ಪ್ರವೇಶಿಸಿ ಮಾತುಕತೆ ನಡೆಸಿದರು.
ಬೇರೆಬೇರೆ ಕಾರಣಗಳಿಂದಾಗಿ ಪರಿಣತ ಸಮಿತಿ ಸದಸ್ಯರು ಸಭೆಗೆ ಹಾಜರಾಗದ ಕಾರಣ ಅಹವಾಲು ಸ್ವೀಕರಿಸಲು ಆಗಲಿಲ್ಲ. ಶೀಘ್ರವೇ ಯುಪಿಸಿಎಲ್ ತಜ್ಞರ ಸಮಿತಿಯ ಸಭೆ ಕರೆದು ತಿಂಗಳಾಂತ್ಯದೊಳಗೆ ಸಾರ್ವಜನಿಕ ಅಹವಾಲು ಸಭೆಗೆ ಅವಕಾಶ ಮಾಡಿಕೊಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.