'ಕಳಂಕಿತ' ನ್ಯಾ.ಪಾಟೀಲ್ ಲೋಕಾಯುಕ್ತಕ್ಕೆ ರಾಜೀನಾಮೆ?

ಈ ವಿವಾದದಲ್ಲಿ ತಮ್ಮನ್ನು ಸೂಕ್ತ ದಾಖಲೆಗಳೊಂದಿಗೆ ಸಮರ್ಥಿಸಿಕೊಳ್ಳುತ್ತಾರೋ ಅಥವಾ ನೈತಿಕ ಹೊಣೆಹೊತ್ತು ರಾಜೀನಾಮೆಗೆ ಮುಂದಾಗುತ್ತಾರೋ ಎನ್ನುವುದು ಸೋಮವಾರ ತೀರ್ಮಾನವಾಗಲಿದೆ. ಏಕೆಂದರೆ ರಾಜ್ಯ ಪ್ರವಾಸದಿಂದ ರಾಜಧಾನಿಗೆ ಹಿಂದಿರುಗಿರುವ ನ್ಯಾ. ಶಿವರಾಜ್ ಪಾಟೀಲ್ ಸೋಮವಾರ ಪತ್ರಿಕಾಗೋಷ್ಠಿ ಕರೆದಿದ್ದಾರೆ.
ಬೆಂಗಳೂರಿನ ವಸಂತನಗರದಲ್ಲಿ 1982ರಲ್ಲಿ ತಮ್ಮ ಹೆಸರಲ್ಲಿ ನಿವೇಶನ ಖರೀದಿಸಿದ್ದ ನ್ಯಾ. ಶಿವರಾಜ್ ಪಾಟೀಲ್, 1994ರಲ್ಲಿ ಯಲಹಂಕ ಅಲ್ಲಾಳಸಂದ್ರದಲ್ಲಿ ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸೊಸೈಟಿಯಿಂದ 9600 ಚದರ ಅಡಿಯ ಮತ್ತೂಂದು ನಿವೇಶನ ಪಡೆದುಕೊಂಡಿದ್ದರು. ಇದಲ್ಲದೆ 2006ರಲ್ಲಿ ತಮ್ಮ ಪತ್ನಿ ಹೆಸರಲ್ಲಿ ವೈಯಾಲಿಕಾವಲ್ನಲ್ಲಿ 4,012 ಚದರಡಿಯ ನಿವೇಶನ ಕೊಂಡುಕೊಂಡಿದ್ದರು.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯಾಗಿ ಶಿವರಾಜ್ ಪಾಟೀಲ್ ನಿಯಮ ಉಲ್ಲಂಘಿಸಿ ನಿವೇಶನ ಖರೀದಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಹೀಗಾಗಿ ನ್ಯಾ. ಶಿವರಾಜ್ ಪಾಟೀಲ್ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಲೋಕಾಯುಕ್ತದಂಥ ಸ್ಥಾನದಲ್ಲಿದ್ದುಕೊಂಡು ಕಾನೂನುಬಾಹಿರ ಕೆಲಸ ಮಾಡಿದ ಆರೋಪಕ್ಕೆ ತುತ್ತಾಗಿರುವುದರಿಂದ ಶಿವರಾಜ್ ಪಾಟೀಲ್ಗೆ ಮುಜುಗರ ಉಂಟಾಗಿದೆ. ಅಲ್ಲದೆ ಅವರ ನೈತಿಕತೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪಸ್ವರ ಕೇಳಿ ಬರುತ್ತಿದೆ. ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆ ಕೂಡ ಲೋಕಾಯುಕ್ತ ಸ್ಥಾನಕ್ಕೆ ನ್ಯಾ. ಶಿವರಾಜ್ ಪಾಟೀಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಶನಿವಾರ ಆಗ್ರಹಿಸಿದ್ದಾರೆ.












Click it and Unblock the Notifications