ಮಧೂರು ನಾರಾಯಣ ರಂಗಭಟ್ಟ ಏನು ಹೇಳುತ್ತಾರೆ?
'ಅನಂತ ಪದ್ಮನಾಭ ದೇಗುಲದಲ್ಲಿ ದೇವಪ್ರಶ್ನೆ ಅಥವಾ ಅಷ್ಟಮಂಗಲ ಪ್ರಶ್ನೆ ನಡೆಸಿಕೊಡಲು ನಾನೂ ಸೇರಿ ಹತ್ತು ಮಂದಿ ದೈವಜ್ಞರು ನಿಯೋಜಿತವಾಗಿದ್ದೆವು. ಈ ಆಚರಣೆ ನಡೆಯುವಾಗ ವೀಕ್ಷಿಸಲು ಸುಮಾರು ನೂರು ಮಂದಿ ಇದ್ದ ವಿದ್ವಾಂಸರು ನೆರೆದಿದ್ದರು. ದೈವಜ್ಞರಾದ ನಾವುಗಳು ಇವರ ಪರಿಚಯ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಇಲ್ಲ-ಸಲ್ಲದ ವಿಚಾರ ಉಂಟಾಗಬಹುದು ಎಂಬುದು ಇದಕ್ಕೆ ಕಾರಣ. ದೇವಪ್ರಶ್ನೆ ಇಡಿಸಿರುವುದು ತುಂಬ ತಡವಾಗಿದೆ ಎಂದೇ ಹೇಳಿದೆವು. ದೇಗುಲದ ನಡವಳಿಗೆ ಸಂಬಂಧಿಸಿ ವ್ಯತ್ಯಯಗಳುಂಟಾಗಿದೆ.
ಇದರ ದೋಷ ನಿವಾರಣೆಗೆ ವಿಶೇಷ ಪೂಜೆ ನಡೆಸಬೇಕು ಎಂದು ಹೇಳಿ ಅದರ ವಿವರಗಳನ್ನು ನೀಡಿದೆವು. ದೇವಪ್ರಶ್ನೆ ಇಡೀ ದೇಗುಲಕ್ಕೆ ಸಂಬಂಧಿಸಿದ್ದಾಗಿತ್ತು. 'ಬಿ' ತೆರೆಯುವ ವಿಚಾರ ಇದರಲ್ಲಿ ಬಂತಷ್ಟೆ. ಆದರೆ ಇದೇ ಮುಖ್ಯ ವಿಚಾರವಾಗಿರಲಿಲ್ಲ. ನೆಲಮಾಳಿಗೆಯಲ್ಲಿರುವುದು ದೇವರ ಅಂತರಂಗದ ಸ್ವತ್ತು. ಇದರ ವಿವರ ನೋಡುವಾಗ ಸೂಕ್ತ ವಿಧಿವಿಧಾನ ಅನುಸರಿಸಿಲ್ಲ".
'ಬಿ" ಕೊಠಡಿ ತೆರೆಯಲೇಬಾರದು ಎಂದು ದೈವಜ್ಞರ ತಂಡ ಹೇಳಿಲ್ಲ. ಜೊತೆಗೆ ಉಳಿದ ಕೊಠಡಿಗಳನ್ನು ತೆರೆಯಬಾರದಿತ್ತು ಎಂದು ತಿಳಿಸಿಲ್ಲ. ಬದಲಾಗಿ ದೈವದ ಅಂತರಂಗದ ವಿವರ ನೋಡುವಾಗ ಸರಿಯಾದ ವಿಧಿವಿಧಾನಗಳನ್ನು ಏರ್ಪಡಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನುವುದು ಅರ್ಥವಾಗುತ್ತದೆ.
'ದೇವಪ್ರಶ್ನೆ ನಡೆಸಿಕೊಡಲು ನಾನು ತಿರುವಂತನಪುರದಲ್ಲಿ ಇದ್ದಷ್ಟು ದಿನವೂ ದೇಗುಲದ ಆಡಳಿತಸ್ಥರು (ರಾಜಮನೆತನ) ನೇಮಿಸಿದ ಇಬ್ಬರು ದೃಢಕಾಯರಾದ ಭದ್ರತಾ ಸಿಬ್ಬಂದಿ ಸದಾ ಬೆನ್ನುಗಿರುತ್ತಿದ್ದರು. ಇನ್ನೂ ಒಂಭತ್ತು ಮಂದಿ ದೈವಜ್ಞರ ಹಿಂದೆಯೂ ಇಬ್ಬಿಬ್ಬರು ಸಿಬ್ಬಂದಿ ಇದ್ದರು. ಬೇರೆಯವರು ನಮ್ಮಿಂದ ಯಾವುದೆ ಮಾಹಿತಿ ಪಡೆಯಬಾರದೆಂಬುದು ಇದರ ಉದ್ದೇಶವಾಗಿತ್ತು. ಹೀಗೆಂದರು ನಾರಾಯಣ ರಂಗ ಭಟ್ಟರು. ದೈವಜ್ಞರ ಹಿಂದೆ ಈ ರೀತಿ ಬೆಂಗಾವಲು ಪಡೆ ಇರಿಸುವ ಅವಶ್ಯಕತೆಯಾದರೂ ಏನಿತ್ತು. ರಾಜಮನೆತನಕ್ಕಿದ್ದ ಅಳುಕೇನು...?
ದೈವಜ್ಞರ ಹಿಂದೆ ಕಟುಮಸ್ತಾದ ಭದ್ರತಾ ಸಿಬ್ಬಂದಿ ನಿಂತಿರುವುದನ್ನು ಗಮನಿಸಿ. ಸೊಂಟಕ್ಕೆ ಕೇಸರಿ ಸಮವಸ್ತ್ರ ಸುತ್ತಿಕೊಂಡು, ಕುತ್ತಿಗೆಗೆ ಐಡೆಂಟಿಟಿ ಕಾರ್ಡ್ ಹಾಕಿಕೊಂಡಿರುವಾತ ಸಹ ದೇಗುಲದ ಖಾಸಗಿ ಭದ್ರತಾ ಪಡೆ ಸದಸ್ಯ. ಟ್ರಾವೆಂಕೂರು ರಾಜಮನೆತನ 'ಅಪಾಯ" ಎಂದು ಹೇಳುತ್ತಿರುವುದೇಕೆ…? ಇಂದುಸುಪ್ರೀಮ್ ಕೋರ್ಟ್ ಏನು ತೀರ್ಮಾನ ತೆಗೆದುಕೊಳ್ಳಬಹುದು…?