ಆಂಧ್ರದಲ್ಲಿ 50 ಸಾವಿರ ಕೋಟಿ ನಷ್ಟ, ಲೋಕಾಯುಕ್ತರೇ ಕಾಪಾಡಿ
ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಯಿಂದ ಸುಮಾರು 16,085 ಕೋಟಿ ರು ನಷ್ಟವಾಗಿದೆ ಎಂದು ವರದಿ ಹೇಳುತ್ತದೆ. ಆದರೆ, ಆಂಧ್ರ ಪ್ರದೇಶದಲ್ಲಿ ಕಳೆದ ಏಳು ವರ್ಷಗಳಲ್ಲಿ ಗಣಿಗಾರಿಕೆಯಿಂದ ಆಗಿರುವ ನಷ್ಟದ ಮೊತ್ತ 50,000 ಕೋಟಿ ಮೀರುತ್ತದೆ. ಬಳ್ಳಾರಿ ರೆಡ್ಡಿ ಸೋದರರು ಹಾಗೂ ವೈಎಸ್ ರಾಜಶೇಖರ ರೆಡ್ಡಿ ಕುಟುಂಬ ಒಎಂಸಿ ಕಂಪನಿ ಗಣಿಗಾರಿಕೆ ಮೂಲಕ ಗಡಿಭಾಗವನ್ನು ಲೂಟಿ ಮಾಡಿದ್ದಾರೆ.
ಈ ಕೂಡಲೇ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಸೇರಿದಂತೆ, ಜಗನ್ ಮೋಹನ್ ರೆಡ್ಡಿ ಆಸ್ತಿ ತನಿಖೆಯಾಗಬೇಕು. ಇದಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಲೋಕಾಯುಕ್ತರನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಟಿಡಿಪಿ ಹಿರಿಯ ನಾಯಕ ಯರ್ರಂ ನಾಯ್ಡು ಆಗ್ರಹಿಸಿದ್ದಾರೆ.
ಗಣಿ ವರದಿ ಸ್ಫೋಟಕ್ಕೆ ಬೆಚ್ಚಿದ ಜಗನ್: ಆಸ್ತಿ ಪಾಸ್ತಿ ವಿವರದ ಹಿಂದೆ ಸಿಬಿಐ ಬೆನ್ನು ಹತ್ತಿರುವ ಸಂದರ್ಭದಲ್ಲಿ, ರೆಡ್ಡಿ ಸೋದರರು ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವುದು ಜಗನ್ ಗೆ ಹಿನ್ನೆಡೆಯಾಗಿದೆ.
ತನ್ನ ತಂದೆ ಕಾಲದಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರ ಕುಟುಂಬದ ಜೊತೆ ಇದ್ದ ಆತ್ಮೀಯತೆ ಹಾಗೂ ವ್ಯವಹಾರ ಈಗ ಅಷ್ಟಾಗಿ ಇಲ್ಲವಾದರೂ ಹಳೆ ಕೊಂಡಿಯನ್ನು ಹಿಡಿದು ಜಗ್ಗಿದರೆ ಇಲ್ಲಿವರೆವಿಗೂ ಕಟ್ಟಿರುವ ಕನಸಿನ ಸೌಧ ಕುಸಿಯುವ ಭೀತಿಯಲ್ಲಿ ಜಗನ್ ಇದ್ದಾರೆ.