ಬಾವರ್ ಸುರಿಸುತ್ತಿರುವ ಬೆವರು ಸಾರ್ಥಕವಾಗಲಿ
ಈ ಯುವಕನ ಹೆಸರು ಬಾಹುಸಾಬ ಬಾವರ್ (45). ಮಹಾರಾಷ್ಟ್ರದ ಜಲನಾ ಜಿಲ್ಲೆಯ ಹಸ್ನಾಬಾದ್ ಗ್ರಾಮ ನಿವಾಸಿ. ಸೈಕ್ಲಿಂಗ್ ಪಟು. ತಂಗಿ ಮಗಳ ಮದುವೆಯಲ್ಲಿ ಅನುಭವಿಸಿದ ವರದಕ್ಷಿಣೆ ಕಿರುಕುಳದಿಂದ ಬೇಸತ್ತು, ಸೈಕಲ್ ಏರಿ ದೇಶವನ್ನೇ ಸುತ್ತತೊಡಗಿದ್ದಾರೆ. ವರದಕ್ಷಿಣೆ ವಿರುದ್ಧ ಜಾಗೃತಿ ಮೂಡಿಸುವುದೇ ಮೂಲ ಗುರಿ. ಜೊತೆಗೆ ಇತರ ಸಾಮಾಜಿಕ ಪಿಡುಗುಗಳನ್ನೂ ಆಯ್ದುಕೊಂಡಿದ್ದಾರೆ.
ಇದುವರೆಗೆ 2 ಲಕ್ಷ ಕಿ.ಮೀ. ದೂರ ಕ್ರಮಿಸಿರುವ ಈ ಬಾವರ್, 1 ಕೋಟಿಗೂ ಹೆಚ್ಚಿನ ಜನರನ್ನು ವೈಯಕ್ತಿಕವಾಗಿ ಮಾತನಾಡಿ ವರದಕ್ಷಿಣೆ, ಭ್ರೂಣ ಹತ್ಯೆ, ಅನಕ್ಷರತೆ, ಮೂಢನಂಬಿಕೆ ಇನ್ನಿತರೆಗಳ ಜಾಗೃತಿಗಾಗಿ ಶ್ರಮಿಸುತ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಂಚರಿಸುತ್ತಿರುವ ಇವರು, ಜಾಗೃತಿ ಯಾತ್ರೆಗೆ ಆಯ್ಕೆ ಮಾಡಿಕೊಂಡಿದ್ದು ಕಾಲೇಜು ವಿದ್ಯಾರ್ಥಿಗಳನ್ನು.
ಬಳ್ಳಾರಿಯಲ್ಲಿ ಒಂದೆರೆಡು ದಿನಗಳ ಕಾಲ ಇದ್ದ ಬಾವರ್, ಕಾಲೇಜುಗಳ ಸಮಯದ ನಂತರ ಕೆಲ ಪ್ರದೇಶಗಳಿಗೆ ಭೇಟಿ ನೀಡಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಮಾತನಾಡಿಸಿ ತನ್ನ ಹೋರಾಟ, ಉದ್ಧೇಶಗಳನ್ನು ವಿವರಿಸಿದರು. ತನ್ನಂತೆ ಯುವ ಪೀಳಿಗೆ ವರದಕ್ಷಿಣೆ, ಅನಕ್ಷರತೆ, ಭ್ರೂಣಹತ್ಯೆಗಳಂಥಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಲು ಮನವಿ ಮಾಡಿದರು.
"ಕಳೆದ 16 ವರ್ಷಗಳಿಂದ ಸೈಕಲ್ ತುಳಿಯುತ್ತಿದ್ದೇನೆ. ಭಾರತದ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. 26 ರಾಜ್ಯಪಾಲರು, 14 ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಯುವ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ನನ್ನ ಕರ್ತವ್ಯವವನ್ನು ನಾನು ನಿರ್ವಹಿಸುತ್ತಿದ್ದೇನೆ. ಸಮಾಧಾನವಿದೆ" ಎನ್ನುವಾಗ ಬಾವರ್ ಮುಖದಲ್ಲಿ ಸಾರ್ಥಕತೆಯ ಭಾವ.
ಮಾರ್ಗದುದ್ದಕ್ಕೂ ಅವರಿವರು ನೀಡುವ ಸಹಾಯವೇ ಆಸರೆ. 16 ವರ್ಷಗಳ ಈ ಯಾತ್ರೆಯಲ್ಲಿ ಇದುವರೆಗೆ ಮೂರು ಸುತ್ತುಗಳಾದ್ದು, 10 ಸೈಕಲ್ಗಳನ್ನು ಬದಲಾಯಿಸಿದ್ದಾರೆ. ಬಳ್ಳಾರಿ ಮಾರ್ಗವಾಗಿ ಕರ್ನೂಲ್, ವಿಜಯವಾಡ ಪ್ರವಾಸ ಮುಗಿಸಿ ಒರಿಸ್ಸಾ ರಾಜ್ಯ ಪ್ರವೇಶಿಸಲಿದ್ದಾರೆ. ಬಾಂಗ್ಲಾ, ಬರ್ಮಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೂ ಸಂಚರಿಸುವ ಗುರಿ ಹೊಂದಿದ್ದಾರೆ ಬಾವರ್.
"ಸೈಕಲ್ ಯಾತ್ರೆಯಿಂದ ಪರಿಸರ ಸಂರಕ್ಷಣೆ ಆಗುತ್ತಿದೆ. ನಿತ್ಯ 50 - 75 ಕಿಮೀ ದೂರ ಸೈಕಲ್ ತುಳಿಯುತ್ತೇನೆ. ಬೇಸರವಾದಲ್ಲಿ ತಂಗುತ್ತೇನೆ. ಹಸಿದಲ್ಲಿ ಊಟ ಮಾಡುತ್ತೇನೆ. ಮಾರ್ಗದುದ್ದಕ್ಕೂ ಜನರು ನನ್ನ ಬಗ್ಗೆ ತೋರುವ ಪ್ರೀತಿ, ಸಲ್ಲಿಸುವ ಗೌರವ ಸ್ಮರಣೀಯ. ಜನರ ಪ್ರತಿಕ್ರಿಯೆ - ಸ್ಪಂದನೆಯೇ ನನ್ನ ಚೈತನ್ಯ" ಎನ್ನುತ್ತಾರೆ ಬಾವರ್.