ಐಟಿ ರಾಜಧಾನಿ ಪಟ್ಟ ಕಳೆದುಕೊಳ್ಳಲಿರುವ ಬೆಂಗಳೂರು
ಅಸ್ಸೋಚಾಂ (Associated Chambers of Commerce and Industry of India)ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ಈ ವಿಷಯ ಬಹಿರಂಗಗೊಂಡಿದೆ. ಬೆಂಗಳೂರಿನ ಸ್ಥಾನಕ್ಕೆ ನೋಯ್ಡಾದ ನ್ಯಾಷನಲ್ ಕ್ಯಾಪಿಟಲ್ ರೀಜನ್(NCR) ಹಾಗೂ ಗುರ್ ಗಾವ್ ಪೈಪೋಟಿ ನಡೆಸಿವೆ. ಐಟಿ ಕಂಪೆನಿಗಳ ಹಿಂದೆಯೆ ಬಿಪಿಒ, ನಾಲೆಜ್ ಪ್ರೊಸೆಸ್ ಹೊರಗುತ್ತಿಗೆ ಹಾಗೂ ಐಟಿಯೇತರ ಕಂಪೆನಿಗಳು ಸಹಾ ನೋಯ್ಡಾ ಹಾಗೂ ಗುರ್ ಗಾವ್ ನತ್ತ ಮುಖ ಮಾಡಿವೆ ಎಂದು ಸಮೀಕ್ಷೆ ಹೇಳುತ್ತದೆ.
ಮುಳುವಾದ ಮೂಲ ಸೌಕರ್ಯ ಕೊರತೆ: ಬೆಂಗಳೂರಿನ ಐಟಿ ಪ್ರಭೆ ತನ್ನ ಕಾಂತಿ ಕಳೆದುಕೊಳ್ಳಲು ಮೂಲ ಸೌಕರ್ಯಗಳ ಕೊರತೆ ಮುಖ್ಯ ಕಾರಣ ಎನ್ನಲಾಗಿದೆ ಹಾಗೂ ಕೈಗಾರಿಕಾ ವಾತಾವರಣ ಹಾಗೂ ಅನುಕೂಲಕರ ವಸಾಹತು ನಿರ್ಮಾಣದಲ್ಲಿ ವೈಫಲ್ಯತೆ ಕೂಡಾ ಕಾರಣವಾಗಿದೆ.
ಪದೇ ಪದೇ ಲೋಡ್ ಶೆಡ್ಡಿಂಗ್, ಅಸಮರ್ಪಕ ನೀರು ಪೂರೈಕೆ, ಸದಾ ಟ್ರಾಫಿಕ್ ಸಮಸ್ಯೆ, ಹಾಳಾದ ರಸ್ತೆಗಳು, ಮಳೆಗಾಲದಲ್ಲಿ ಉಕ್ಕಿ ಹರಿಯುವ ರಾಜಾ ಕಾಲುವೆ, ಕೊಳಚೆ ಚರಂಡಿಗಳು, ಹೆಚ್ಚುತ್ತಿರುವ ಕ್ರೈಂ ಎಲ್ಲವೂ ಬೆಂಗಳೂರನ್ನು ವಿಲನ್ ಸ್ಥಾನದಲ್ಲಿ ನಿಲ್ಲಿಸಿದೆ ಎಂದು ಅಸ್ಸೋಚಾಂ ನ ಕಾರ್ಯದರ್ಶಿ ಡಿಎಸ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲೂ ಪ್ಲಸ್ ಪಾಯಿಂಟ್ ಹೊಂದಿರುವ ಗುರ್ ಗಾಂವ್ ಹಾಗೂ ನೋಯ್ಡಾ ಕೈಗಾರಿಕಾ ಪ್ರದೇಶಗಳು ದೇಶದ ಐಟಿ ರಾಜಧಾನಿ ಎನಿಸಲು ಎಲ್ಲಾ ಅರ್ಹತೆ ಪಡೆದಿವೆ. ಅಸ್ಸೋಚಾಂ ನಡೆಸಿದ ಈ ಸಮೀಕ್ಷೆಯಲ್ಲಿ ದೇಶಿಯ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳ ಸುಮಾರು 800 ಸಿಇಒಗಳು, ಸಿಎಫ್ ಒಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ ಎಂದು ರಾವತ್ ಹೇಳಿದ್ದಾರೆ.
ಸಮೀಕ್ಷೆ ಪ್ರಕಾರ ಗುರ್ ಗಾವ್ ಗೆ ಶೇ30 ಮತಗಳು, ನೋಯ್ಡಾಗೆ ಶೇ 25, ಚಂಡೀಗಢಕ್ಕೆ ಶೇ 20, ಪುಣೆಗೆ ಶೇ 15 ಹಾಗೂ ಹೈದರಾಬಾದಿಗೆ ಶೇ 10ರಷ್ಟು ಮತಗಳು ಸಿಕ್ಕಿವೆ. ದೆಹಲಿಗೆ ಹತ್ತಿರವಿರುವ ಗುರ್ ಗಾವ್ ನಲ್ಲಿ ಬೆಂಗಳೂರಿನಂತೆ ಕಾಸ್ಮೊಪಾಲಿಟನ್ ಸಂಸ್ಕೃತಿ ಇದೆ. ಆಧುನಿಕ ಮೂಲ ಸೌಕರ್ಯಗಳು, ನುರಿತ ಶ್ರಮಿಕ ವರ್ಗ, ಸರ್ಕಾರದ ಸೌಲಭ್ಯಗಳು ಇತ್ಯಾದಿ ವಿಷಯಗಳು ಬೆಂಗಳೂರನ್ನು ಹಿಂದಕ್ಕೆ ತಳ್ಳಲು ಕಾರಣವಾಗಿದೆ. ಭಾರತದ ಸಿಲಿಕಾನ್ ವ್ಯಾಲಿಯಾಗಿ ಮೆರೆದ ಬೆಂಗಳೂರು ತನ್ನ ವೈಭವವನ್ನು ಕಳೆದುಕೊಳ್ಳುವ ದಿನ ಹತ್ತಿರದಲ್ಲಿದೆ ಎಂದು ರಾವತ್ ಹೇಳಿದ್ದಾರೆ.