ಸ್ವೀಟ್ ಕೊಡದ ಹುಡುಗಿಯರಿಗೆ ಆಸೀಡ್ ಎರಚಿದ
ಜಗದೀಶ್ ಮತ್ತು ನಿರ್ಮಲ ಎಂಬವರ ಮಕ್ಕಳಾದ ಸಹನಾ(16) ಮತ್ತು ಸುಷ್ಮಾ(14) ಮನೆಯಲ್ಲಿದ್ದರು. ಸಹನಾ ಪಾಸಾದ ಲೆಕ್ಕದಲ್ಲಿ ಸಿಹಿ ಹಂಚುತ್ತಿದ್ದಳು. ಆಗ ಪಾನಮತ್ತನಾಗಿ ಬಂದ ನಂದಕುಮಾರ್ ಎಂಬಾತ ಇವರಲ್ಲಿ ಸ್ವೀಟ್ ಕೇಳಿದ್ದಾನೆ. ಈತನ ಸ್ಥಿತಿಯನ್ನು ಕಂಡು ಸ್ವೀಟ್ ಕೊಡೊದಿಲ್ಲ ಎಂದು ನಿರಾಕರಿಸಿದ್ದಾರೆ. ಕುಪಿತಗೊಂಡ ಆತ ಅವರಿಬ್ಬರ ಮೇಲೆ ಶೌಚಾಲಯಕ್ಕೆ ಬಳಸುವ ಆಸೀಡನ್ನು ಎರಚಿದ್ದಾನೆ. ಜೊತೆಗೆ ಬ್ಲೇಡ್ ನಿಂದ ಗಾಯಗೊಳಿಸಿದ್ದಾನೆ. ಈ ಘಟನೆ ನಡೆದಾಗ ಸಹನಾ ಪೋಷಕರು ಮನೆಯಲ್ಲಿರಲಿಲ್ಲ.
ನಂತರ ಮನೆಗೆ ಬಂದ ನಂದಕುಮಾರ್ ಪಶ್ಚಾತ್ತಾಪಗೊಂಡು ವಿಷ ಸೇವಿಸಿದ. ವಿಷಯ ತಿಳಿದು ಅಲ್ಲಿಗೆ ಬಂದ ಸಾರ್ವಜನಿಕರು ಮನೆಯೊಳಗಿದ್ದ ನಂದಕುಮಾರ್ ನನ್ನು ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಮಧ್ಯೆ ಪ್ರವೇಶಿಸಿದ ಪೋಲಿಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.
"ಹೆತ್ತವರು ಮನೆಯಲ್ಲಿಲ್ಲದ ಸಂದರ್ಭದಲ್ಲಿ ನಂದಕುಮಾರ್ ಸ್ವೀಟ್ ಕೇಳಿದಾಗ ಇವರು ನಿರಾಕರಿಸಿದ್ದಾರೆ. ಆತ ಕುಪಿತಗೊಂಡ ಇವರಿಗೆ ಆಸೀಡ್ ಎರಚಿದ್ದಾನೆ. ಅವರಿಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೋಸ್ಟ್ ಮಾರ್ಟಂನಲ್ಲಿ ಈತ ವಿಷ ಸೇವಿಸಿರುವುದು ಬೆಳಕಿಗೆ ಬಂತು." ಎಂದು ಸಹಾಯಕ ಪೋಲಿಸ್ ಆಯುಕ್ತ ಎಸ್. ಎನ್. ಸಿದ್ರಾಮಪ್ಪ ಹೇಳಿದ್ದಾರೆ.
ಪೋಲಿಸರು ಹೇಳುವ ಪ್ರಕಾರ ನಂದಕುಮಾರ್ ಪತ್ನಿ 5 ವರ್ಷದ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ನಂತರ ಈತ ತನ್ನ ಸಹೋದರ ಜಯದೇವಪ್ಪನೊಂದಿಗೆ ವಾಸಿಸುತ್ತಿದ್ದ. ನಂದಕುಮಾರಿಗೆ 8 ವರ್ಷದ ಮಗನಿದ್ದಾನೆ. ಪತ್ನಿಯನ್ನು ಕಳೆದುಕೊಂಡ ನಂತರ ಈತ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಆಗಾಗ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಆತನ ಸಹೋದರ ಹೇಳುತ್ತಾನೆ. ಆದರೆ ಈತ ಆರೋಗ್ಯವಂತನಾಗಿದ್ದ ಎಂದು ಸಾರ್ವಜನಿಕರು ಹೇಳುತ್ತಾರೆ.