ಇನ್ಫೋಸಿಸ್ ಪಿತಾಮಹ ನಾರಾಯಣ ಮೂರ್ತಿ ಶನಿವಾರ ನಿವೃತ್ತಿ

ಭಾರಿ ಶ್ರಮವಹಿಸಿ, ಬದುಕನ್ನೇ ಮುಡುಪಾಗಿಟ್ಟು ಕಟ್ಟಿಬೆಳೆಸಿದ, ಮೌಲ್ಯಾಧಾರಿತ, ಭಾರಿ ಮೌಲ್ಯಯುತ ಕಂಪನಿಗೆ ಗುಡ್ ಬೈ ಹೇಳುವ ಕಾಲ ಬಂದೇ ಬಿಟ್ಟಿದೆ. ಎನ್ಆರ್ಎನ್ ಅವರ ಮೌಲ್ಯಗಳನ್ನು ಪೋಷಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ಮುಂದಿನ ಸಾರಥಿಗೆ ಸವಾಲಾಗಿ ಪರಿಣಮಿಸಲಿದೆ.
ಇನ್ಫಿಗೆ ನಾಣಿ ಅವರ ಕೊಡುಗೆ ಅನನ್ಯ. ಅವರ ತ್ಯಾಗ ತುಸು ಹೆಚ್ಚೇ. ಆರಂಭದ ದಿನಗಳಲ್ಲಿ ಎನ್ಆರ್ಎನ್ ಕಂಪನಿ ಕಟ್ಟುವಲ್ಲಿ ಎಷ್ಟು ಶ್ರಮವಹಿಸಿದರೆಂದರೆ ತಮ್ಮ ಸಂಬಳದಲ್ಲಿ ಸ್ರಯಂಪ್ರೇರಣೆಯಿಂದ ಶೇ. 90ರಷ್ಟು ಕಡಿತ ಮಾಡಿಸಿಕೊಂಡರು. ಆದರೆ ಉಳಿದವರಿಗೆ ಶೇ. 20ರಷ್ಟು ಏರಿಕೆ ಸಂದಾಯವಾಗುವಂತೆ ಜಾಗ್ರತೆ ವಹಿಸಿದರು.
ಮುಂದ!?.... ಹಾಗೆ ನೋಡಿದರೆ ಇನ್ಫೋಸಿಸ್ ಕಂಪನಿ ಆಧಾರ ಸ್ತಂಬಗಳು ಇತ್ತೀಚಿನ ದಿನಗಳಲ್ಲಿ ಒಂದೊಂದಾಗಿ ಇನ್ಫಿ ಕ್ಯಾಂಪಸ್ ನಿಂದ ಹೊರಹೋಗಿವೆ. ನಂದನ್ ನೀಲೇಖೆಣಿ ರಾಷ್ಟ್ರ ಕಟ್ಟುವ ಕಾರ್ಯಭಾರ ಹೊತ್ತು ಹೊರಹೋದರು. ಮೊನ್ನೆ ಮೊನ್ನೆ ಕಂಪನಿಯ ಸಹ ಸಂಸ್ಥಾಪಕ ಕೆ. ದಿನೇಶ್ ನಿವೃತ್ತಿಯ ನೆಪವೊಡ್ಡಿ ತಣ್ಣಗೆ ಕಂಪನಿಯಿಂದ ದೂರವಾದರು. ಇನ್ನು ಮೋಹನದಾಸ್ ಪೈ 'ಸ್ವಯಂ' ನಿವೃತ್ತಿ ಪಡೆದರು.
ಎನ್ಆರ್ಎನ್ ಸ್ಥಾನ ಯಾರು ತುಂಬಬಲ್ಲರು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಒಂದು ಸಾಧ್ಯತೆ ಎಂದರೆ ಐಸಿಐಸಿಐ ಬ್ಯಾಂಕಿನ ಹಿಂದಿನ ಅಧ್ಯಕ್ಷ ಹಾಗೂ ಇನ್ಫೋಸಿಸ್ ಕಂಪನಿಯ ಸ್ವತಂತ್ರ ನಿರ್ದೇಶಕ ಕುಂದಾಪುರದ ಕೆ.ವಿ. ಕಾಮತ್ ಕಂಪನಿಯ ಅಧ್ಯಕ್ಷಗಾದಿಗೇರುವ ಸಾಧ್ಯತೆಗಳು ನಿಚ್ಚಳವಾಗಿವೆ. ಇನ್ನು, ಕಂಪನಿಯಲ್ಲಿ ದೀರ್ಘಾವದಿ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಮತ್ತೋರ್ವ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣನ್ ಉಪಾಧ್ಯಕ್ಷರಾಗಲಿದ್ದಾರೆ. ಮತ್ತೊಬ್ಬ ಸಂಸ್ಥಾಪಕ ಶಿಬುಲಾಲ್ ಕಂಪನಿಯ ಸಿಇಒ ಆಗುವ ಲಕ್ಷಣಗಳಿವೆ.
ಇದರ ಹೊರತಾಗಿ, ಕಂಪನಿಯ ಹೊರಗಿನಿಂದ ಕಂಡುಕೇಳರಿಯದ ವ್ಯಕ್ತಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುವ ಸಾಧ್ಯತೆಯೂ ಇದೆ ಎಂದೂ ತರ್ಕಿಸಲಾಗುತ್ತಿದೆ. ಯಾರು ಏನೇ ಹೇಳಲಿ ಕಂಪನಿ ಆಡಳಿತ ಮಂಡಳಿ ಆಯ್ಕೆ ಸಮಿತಿ ಮುಖ್ಯಸ್ಥ ಜೆಫ್ರಿ ಲೆಮನ್ ಹೇಳುವಂತೆ ಎನ್ಆರ್ಎನ್ ಸ್ಥಾನ ತುಂಬುವುದು ಯಾರಿಗೇ ಆಗಲಿ ಅಷ್ಟು ಸುಲಭವಲ್ಲ.ಅಂದಹಾಗೆ, ಕ್ರಿಸ್ ಅವರು ಮಂಡಳಿಯ ಚುಕ್ಕಾಣಿ ಹಿಡಿಯುವ ಸೂಚನೆಗಳಿವೆ. ಅದು ಷೇರು ಮಾರುಕಟ್ಟೆಗೆ ಸಮ್ಮತವೂ ಆಗಬಹುದು. ಕಳೆದೊಂದು ವರ್ಷದಲ್ಲಿ ಷರು ಪೇಟೆಯಲ್ಲಿ ಕಂಪನಿಯ ಸಾಧನೆ ಹೇಳಿಕೊಳ್ಳುವಂತಿಲ್ಲ. ಈ ಹಿನ್ನೆಲೆಯಲ್ಲಿ ಶಿಬುಲಾಲ್ ಅವರು ಕ್ರಿಸ್ ಗೆ ಸಮರ್ಥ ರೀತಿಯಲ್ಲಿ ಸಾಥ್ ನೀಡಬೇಕಿದೆ. [ಎನ್ಆರ್ಎನ್ ರನ್ನು ಹಾರೈಸಿ]











Click it and Unblock the Notifications