ಸಾಯಿ ಟ್ರಸ್ಟ್ ಸೇವೆ ಅಬಾಧಿತ, ಆತಂಕ ಬೇಡ: ರತ್ನಾಕರ್
ಸಾಯಿಬಾಬಾ ಅವರ ಅಂತ್ಯಸಂಸ್ಕಾರದ ಏರ್ಪಾಡುಗಳ ಬಗ್ಗೆ ಮತ್ತು ಟ್ರಸ್ಟ್ ನ ಭವಿಷ್ಯದ ಬಗ್ಗೆ ಚರ್ಚಿಸಲು ಟ್ರಸ್ಟ್ ನ ಪದಾಧಿಕಾರಿಗಳು ಸುದೀರ್ಘ ಸಭೆ ನಡೆಸಿದರು. ಬಾಬಾ ನಿಧನಾನಂತರ ಟ್ರಸ್ಟ್ ನ ಮೊದಲ ಸಭೆ ಇದಾಗಿತ್ತು. ಟ್ರಸ್ಟ್ ಆರಂಭವಾದಾಗಿನಿಂದ ಬಾಬಾ ತಪ್ಪದೇ ಎಲ್ಲ ಸಭೆಗಳಲ್ಲೂ ಪಾಲ್ಗೊಳ್ಳುತ್ತಿದ್ದರು ಎಂಬುದು ಗಮನಾರ್ಹ.
ಸಭೆ ಮುಕ್ತಾಯವಾಗುತ್ತಿದ್ದಂತೆ ರತ್ನಾಕರ್ ಅವರು ಸುದ್ದಿಗಾರರೊಂದಿಗೆ ಮಾತಾಡಿ, ಬಾಬಾ ಸಂಕಲ್ಪಗಳನ್ನು ನಿರ್ವಂಚನೆಯಿಂದ ಪೂರೈಸಲಾಗುವುದು. ಟ್ರಸ್ಟ್ ನ ಎಲ್ಲ ಸದಸ್ಯರೂ ಒಗ್ಗಟ್ಟಿನಿಂದ ಸಮಾಜ ಸೇವೆಯನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಿದ್ದಾರೆ ಎಂದು ಅವರು ಹೇಳಿದರು.
ಈಮಧ್ಯೆ, ಪುಟ್ಟಪರ್ತಿಗೆ ಸಂಜೆ ಆಗಮಿಸಿದ ಪ್ರಧಾನಿ ಮನಮೋಹನ್ ಸಿಂಗ್, ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ, ಗೃಹ ಸಚಿವ ಚಿದಂಬರಂ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಕೇಂದ್ರ ವಾರ್ತಾ ಸಚಿವೆ ಅಂಬಿಕಾ ಸೋನಿ, ಆಂಧ್ರ ಸಿಎಂ ಕಿರಣ್ ಕುಮಾರ್ ರೆಡ್ಡಿ, ಬಿಡದಿಯ ನಿತ್ಯಾನಂದ ಸ್ವಾಮಿ ಮುಂತಾದವರು ಕುಲವಂತ್ ಹಾಲ್ ನಲ್ಲಿ ಬಾಬಾ ಅವರ ಅಂತಿಮ ದರ್ಶನ ಪಡೆದರು.