ಗಣಿಸಂಪತ್ತು ಉಳಿಸಲು ಕಟಿಬದ್ಧ : ಯಡಿಯೂರಪ್ಪ

ಸುಪ್ರೀಂ ಕೋರ್ಟಿಗೆ ಸಿಇಸಿ ಮಧ್ಯಂತರ ವರದಿಯನ್ನು ಏ.15ರಂದು ಸಲ್ಲಿಸಿದ ನಂತರ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಯಡಿಯೂರಪ್ಪ, ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಎಲ್ಲ ಕಂಪನಿಗಳ ವಿರುದ್ಧ ನಡೆಯುತ್ತಿರುವ ತನಿಖೆಗೆ ಸರಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ನುಡಿದರು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲ. ಎಲ್ಲ ಮಾಹಿತಿ ನೀಡಲಾಗಿದೆ ಎಂದು ಸಿಇಸಿ ಕೂಡ ಸುಪ್ರೀಂ ಕೋರ್ಟಿಗೆ ಹೇಳಿದೆ. ಆದರೆ, ದೇಶದ ಸಂಪತ್ತು ಉಳಿಸುವಲ್ಲಿ ಕರ್ನಾಟಕ ಸರಕಾರದ ಜವಾಬ್ದಾರಿ ಎಷ್ಟಿದೆಯೋ ಕೇಂದ್ರ ಸರಕಾರದ್ದೂ ಅಷ್ಟೇ ಇದೆ. ಈ ವಿಷಯದಲ್ಲಿ ಕೇಂದ್ರ ಕೈಕಟ್ಟಿ ಕೂಡಬಾರದು ಎಂದು ಅವರು ಕೇಂದ್ರಕ್ಕೆ ಆಗ್ರಹಿಸಿದರು.
ರೆಡ್ಡಿಗೆ ಸಿಎಂ ಬೆಂಬಲ : ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ಸಂಪುಟದಲ್ಲಿರುವ ರೆಡ್ಡಿ ಸಹೋದರರ ಕೈವಾಡ ಇಲ್ಲ ಎಂದು ಯಡಿಯೂರಪ್ಪ ಸರ್ಟಿಫಿಕೇಟ್ ನೀಡಿದರು. ಅಕ್ರಮ ಗಣಿಗಾರಿಕೆಯ ಬಳುವಳಿ ಸಿಕ್ಕಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರಗಳು ಇದ್ದ ಕಾಲದಲ್ಲಿ ಎಂದು ಮುಖ್ಯಮಂತ್ರಿ ವ್ಯಂಗ್ಯವಾಗಿ ನುಡಿದರು.
ಅಕ್ರಮ ಅವ್ಯಾಹತ : ರಾಜ್ಯದಲ್ಲಿ ಅದರಲ್ಲೂ ಬಳ್ಳಾರಿ, ಸಂಡೂರು, ಹೊಸಪೇಟೆಯಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಸಿಇಸಿ ಸುಪ್ರೀಂ ಕೋರ್ಟ್ ಗೆ ಶುಕ್ರವಾರ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಚುನಾಯಿತ ಜನಪ್ರತಿನಿಧಿಗಳು ಮತ್ತು ಸರಕಾರ ಅಧಿಕಾರಿಗಳ ಮೂಗಿನಡಿಯಲ್ಲೇ ಅಕ್ರಮ ನಡೆಯುತ್ತಿದೆ. 2003 ಮತ್ತು 2010ರ ನಡುವೆ ಯಾವುದೇ ಪರವಾನಗಿಯಿಲ್ಲದೆ 304.91 ಮೆಟ್ರಿಕ್ ಟನ್ ನಷ್ಟು ಅದಿರು ರಫ್ತಾಗಿದೆ. ಇದರಿಂದಾಗಿ ರಾಜ್ಯಕ್ಕೆ 15,245 ಕೋಟಿ ರು.ನಷ್ಟು ನಷ್ಟವಾಗಿದೆ ಎಂದು ಸಿಇಸಿ ತನ್ನ ವರದಿಯಲ್ಲಿ ತಿಳಿಸಿದೆ.
ವರದಿಯನ್ನು ಸ್ವೀಕರಿಸಿರುವ ಮುಖ್ಯ ನ್ಯಾಯಮೂರ್ತಿ ಎಸ್ಎಚ್ ಕಪಾಡಿಯಾ, ನ್ಯಾ. ಅಫ್ತಾಬ್ ಆಲಂ ಮತ್ತು ನ್ಯಾ. ಕೆಎಸ್ ಪಣಿಕ್ಕರ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ ಗ್ರೀನ್ ಬೆಂಚ್ ಕರ್ನಾಟಕಕ್ಕೆ ನೋಟೀಸ್ ನೀಡಿದ್ದು, ವಿಚಾರಣೆಯ ದಿನಾಂಕವನ್ನು ಏ.22ಕ್ಕೆ ನಿಗದಿಪಡಿಸಿದೆ.












Click it and Unblock the Notifications