ಬಂಗಾರಪೇಟೆಯಲ್ಲಿ ಚಿರಂಜಿವಿ ಮೆಗಾ ರೋಡ್ ಶೋ
ಅವರು ಇಂದು ಕೋಲಾರ ಜಿಲ್ಲೆ ಬಂಗಾರಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೆಸಾರ್ಟ್ ನಾರಾಯಾಣಸ್ವಾಮಿ ಪರವಾಗಿ ಏರ್ಪಡಿಸಿದ್ದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು. ತಮ್ಮ ಪ್ರಜಾರಾಜ್ಯಂ ಪಕ್ಷ ಅಧಿಕೃತವಾಗಿ ಕಾಂಗ್ರೆಸ್ ನೊಂದಿಗೆ ಸೇರ್ಪಡೆಗೊಂಡ ಬಳಿಕ ಭಾಗವಹಿಸುತ್ತಿರುವ ಪ್ರಥಮ ಸಭೆ ಇದಾಗಿದೆ ಎಂದ ಅವರು, ರಾಜ್ಯ ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಉಪಚುನಾವಣೆಯ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದ್ದು, ತೆಲುಗು ಭಾಷಿಕರೇ ಜಾಸ್ತಿಯಾಗಿರುವ ಈ ಪ್ರದೇಶದಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡಲು ಜನಸಾಗರವೇ ನೆರೆದಿತ್ತು. ಚಿರಂಜೀವಿ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಚಿರಂಜೀವಿ ಅಭಿಮಾನಿಗಳ ಮೇಲೆ ಲಾಠಿ ಪ್ರಹಾರ ಮಾಡಬೇಕಾಯಿತು.
ಕೋಲಾರಕ್ಕೆ ಆಗಮಿಸಿದ ನಂತರ ಅವರು ನೇರವಾಗಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಅವರ ಮನೆಗೆ ತೆರಳಿ, ನಂತರ ಬಂಗಾರಪೇಟೆಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು ಯುಪಿಎ ಸರಕಾರದ ಸಾಧನೆಗಳನ್ನು ಹಾಡಿ ಹೊಗಳಿದರು. ಕೋಲಾರ ಜಿಲ್ಲೆಯಲ್ಲಿ ಉತ್ತಮ ಅಭಿವೃದ್ಧಿಯಾಗಿದೆ ಎಂದು ಮುನಿಯಪ್ಪ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಂದು ವೇಳೆ ರೆಸಾರ್ಟ್ ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಿದ್ದೇ ಆದಲ್ಲಿ ಅಭಿನಂದನಾ ಸಮಾರಂಭಕ್ಕೆ ಬಂಗರಪೇಟೆಗೆ ಮತ್ತೆ ಬರುವುದಾಗಿ ಚಿರಂಜೀವಿ ಜನತೆಗೆ ವಾದ್ಗಾನ ಮಾಡಿದರು.
ಆಪರೇಷನ್ ಕಮಲಕ್ಕೆ ಬಲಿಯಾಗಿ ಕಾಂಗ್ರೆಸ್ ನಿಂದ ಬಿಜೆಪಿಗೆ ಎಂ ನಾರಾಯಣಸ್ವಾಮಿ ಹಾರಿದ್ದರಿಂದ ಉಪಚುನಾವಣೆ ನಡೆಯುತ್ತಿದೆ. ಚುನಾವಣೆಯಲ್ಲಿ ಇಬ್ಬರೂ ನಾರಾಯಣಸ್ವಾಮಿ ನಡುವೆ ತೀವ್ರವಾದ ಪೈಪೋಟಿ ನಡೆಯುವ ಸಂಭವವಿದೆ. ಈ ಕಾರಣದಿಂದಾಗಿ ಸ್ವತಃ ಕೆಎಚ್ ಮುನಿಯಪ್ಪನವರೇ ರೆಸಾರ್ಟ್ ನಾರಾಯಣಸ್ವಾಮಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ಪರ ಸಿ ವೆಂಕಟೇಶಪ್ಪ ಸ್ಪರ್ಧೆಯಲ್ಲಿದ್ದಾರೆ.