ಪಕ್ಷೇತರ ಶಾಸಕರಿಗೆ ಮತದಾನಕ್ಕೆ ಅವಕಾಶವಿಲ್ಲ
ಮುಖ್ಯ ನ್ಯಾಯಮೂರ್ತಿ ಜಗದೀಶ್ ಎಸ್ ಖೇಹರ್ ಮತ್ತು ನ್ಯಾ. ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಪಕ್ಷೇತರರು ಸಲ್ಲಿಸಿದ್ದ ಮೂರು ಮಧ್ಯಂತರ ಅರ್ಜಿಗಳನ್ನು ಆಲಿಸಿ ಈ ಆದೇಶ ಹೊರಡಿಸಿದೆ. ಅನರ್ಹಗೊಳಿಸಿ ಸಭಾಧ್ಯಕ್ಷ ಕೆಜಿ ಬೋಪಯ್ಯ ಹೊರಡಿಸಿದ ಆದೇಶಕ್ಕೆ ತಡೆ ನೀಡಲೂ ಹೈಕೋರ್ಟ್ ನಿರಾಕರಿಸಿದೆ. ತಾತ್ಪರ್ಯ: ಪಕ್ಷೇತರರು ಮತ್ತು ಅವರ ಪರವಾಗಿ ಅರ್ಜಿ ಗುಜರಾಯಿಸಿದ್ದ ಜೆಡಿಎಸ್ ವಕ್ತಾರ ವೈ ಎಸ್ ವಿ ದತ್ತ ಅವರಿಗೆ ಸೋಲು.
ನಾಳೆ ನಡೆಯಲಿರುವ ವಿಶ್ವಾಸಮತದಲ್ಲಿ ಐವರು ಪಕ್ಷೇತರರು ಮತ್ತು ಅನರ್ಹಗೊಂಡಿರುವ 11 ಬಿಜೆಪಿ ಶಾಸಕರು ಭಾಗವಹಿಸುವಂತಿಲ್ಲ ಮತ್ತು ಸದನವನ್ನು ಪ್ರವೇಶಿಸುವಂತಿಲ್ಲ. ಅ.18ರಂದು ನಡೆಯಲಿರುವ ಮುಂದುವರಿದ ವಿಚಾರಣೆಯ ನಂತರ ತೀರ್ಪು ಹೊರಬಿದ್ದ ಮೇಲೆ ಮತ ನೀಡುವ ಹಕ್ಕು ತೀರ್ಮಾನವಾಗಲಿದೆ. ಒಂದು ವೇಳೆ ಪಕ್ಷೇತರರ ಪರ ತೀರ್ಪು ಬಂದರೆ ಮತ್ತೊಂದು ಅಧಿವೇಶನ ಕರೆದು ವಿಶ್ವಾಸಮತ ಕೋರುವ ಸಂದರ್ಭ ಬಂದರೂ ಬರಬಹುದು.
ಆದರೆ, ಈ ಆದೇಶಕ್ಕೆ ಜೆಡಿಎಸ್ ನ ವೈಎಸ್ ವಿ ದತ್ತಾ ವ್ಯತಿರಿಕ್ತ ಹೇಳಿಕೆ ನೀಡಿ, ಪಕ್ಷೇತರರಿಗೆ ಸದನ ಪ್ರವೇಶಿಸಲು ಅವಕಾಶವಿದೆ ಮತ್ತು ಮುಚ್ಚಿದ ಲಕೋಟೆಯಲ್ಲಿ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳಿದರು. ಬಿಜೆಪಿ ಸಚೇತರರಾಗಿರುವ ಜೀವರಾಜ್ ಅವರು ಇದಕ್ಕೆ ಪ್ರತಿಕ್ರಿಯಿಸಿದ್ದು, ಅನರ್ಹಗೊಂಡ ಪಕ್ಷೇತರರಿಗೆ ಮತ್ತು ಬಿಜೆಪಿ ಶಾಸಕರಿಗೆ ಮತದಾನ ಮಾಡಲು ಯಾವುದೇ ಅವಕಾಶ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆನಂತರ ಇಡೀ ಪ್ರಕರಣ ಕುರಿತು ಮಾತನಾಡಿದ ಭಾಜಪದ ಸಿಟಿ ರವಿ, ದತ್ತ ಅವರು ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದರು ಎಂದು ಹೇಳಿದರು.