ಅಯೋಧ್ಯೆ ಅಂತಿಮ ಹಣಾಹಣಿ : ಭದ್ರತೆಗೆ ಸಭೆ
ಮತೀಯವಾಗಿ ಸೂಕ್ಷ್ಮ ಪ್ರದೇಶಗಳನ್ನು ಹೊಂದಿರುವ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಹಾಗೂ ಇನ್ನಿತರ ಜಿಲ್ಲೆಗಳ ಎಸ್ಪಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ವಿಶೇಷ ನಿಗಾ ವಹಿಸುವಂತೆ ಸೂಚನೆ ನೀಡಲು ನಿರ್ಧರಿಸಲಾಗಿದೆ.
ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿ, ರಾಜ್ಯದ ಉಳಿದ ಜಿಲ್ಲಾ ಹಾಗೂ ಕಮಿಷನರೇಟ್ ವ್ಯಾಪ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆದಿದ್ದು, ಸೆ.24 ರಂದು ಪ್ರಕಟವಾದ ನಂತರ ಯಾವುದೇ ರೀತಿಯ ಕಾನೂನು-ಸುವ್ಯವಸ್ಥೆ ಸಮಸ್ಯೆ ಉಂಟಾಗ ದಂತೆ ತಡೆಯಲು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಮರ್ಶೆ ನಡೆಸಲಾಯಿತು.
ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು-ಸುವ್ಯವಸ್ಥೆ ) ಗೋಪಾಲ್ ಹೊಸೂರ್, ನಿಸಾರ್ ಅಹ್ಮದ್, ಡಿಸಿಪಿಗಳಾದ ಬಿ.ಎನ್. ಎಸ್.ರೆಡ್ಡಿ, ಪಾಂಡುರಂಗ ರಾಣೆ, ಚಂದ್ರಶೇಖರ್, ರವಿಕಾಂತೇಗೌಡ, ಡಾ.ಜಿ.ರಮೇಶ್, ಶಿವಕುಮಾರ್, ಸೋನಿಯಾ ನಾರಂಗ್, ರೇವಣ್ಣ ಭಾಗವಹಿಸಿದ್ದರು.
ನಗರದ ಸೂಕ್ಷ್ಮ ಪ್ರದೇಶಗಳ ಗುರುತಿಸುವಿಕೆ, ಸಿಎಆರ್, ಕೆಎಸ್ಆರ್ಪಿ ಸೇರಿದಂತೆ ಹೆಚ್ಚುವರಿ ಬಲ ನಿಯೋಜನೆ, ಗಲಭೆ ನಡೆಯುಬಹುದಾದ ಸ್ಥಳಗಳಲ್ಲಿ ಗುಪ್ತವಾರ್ತೆ ಸಂಗ್ರಹಣೆ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ನಗರದಲ್ಲಿ ಈ ಹಿಂದೆ ಕೋಮು ಗಲಭೆ ನಡೆದ ಸ್ಥಳಗಳಲ್ಲಿ ಗಸ್ತು, ಉಭಯ ಕೋಮಿಗೆ ಸೇರಿದ ಧಾರ್ಮಿಕ ಮುಖಂಡರ ಜತೆ ಶಾಂತಿ ಸಭೆ ನಡೆಸುವುದು, ಮುಂಜಾಗ್ರತಾ ಕ್ರಮವಾಗಿ ಸಮಾಜ ವಿದ್ರೋಹಿ ವ್ಯಕ್ತಿಗಳ ಬಂಧನದ ಬಗ್ಗೆ ಚರ್ಚೆ ನಡೆಯಿತು.
ಎಲ್ಲ ವಿಭಾಗಗಳಲ್ಲೂ ಒಂದು ಅಥವಾ ಎರಡು ಸೂಕ್ಷ್ಮ ಪ್ರದೇಶಗಳಿವೆ. ಇಂಥ ಕಡೆಗಳಲ್ಲಿ ಸಿಆರ್ ಪಿಸಿ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇದಾದ ನಂತರ, ಐಜಿಪಿ ಹಾಗೂ ಮೇಲ್ಪಟ್ಟ ದರ್ಜೆ ಅಧಿಕಾರಿಗಳು ವಿಧಾನಸೌಧದಲ್ಲಿ ಸಭೆ ಸೇರಿ ಕಾನೂನು- ಸುವ್ಯವಸ್ಥೆ ಬಗ್ಗೆ ಪ್ರತ್ಯೇಕ ಚರ್ಚೆ ನಡೆಸಿದರು. ಸೂಕ್ಷ್ಮ ಪ್ರದೇಶಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲು ನಿರ್ಧರಿಸಲಾಗಿದೆ.
ಸಿಎಂ ಸಭೆ 22ಕ್ಕೆ : ಅಯೋಧ್ಯಾ ವಿವಾದದ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯುವುದಕ್ಕಾಗಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಹಾಗೂ ಗೃಹ ಕಚೇರಿ ಕೃಷ್ಣಾದಲ್ಲಿ ಧಾರ್ಮಿಕ ಮುಖಂಡರ ಸಭೆ ಕರೆಯಲಾಗಿದೆ.