ಧರ್ಮಸ್ಥಳ ಮಂಜುನಾಥನಿಗೆ ಇ- ಕಾಣಿಕೆ ಸಲ್ಲಿಸಿ

ಕಾರ್ಪೋರೇಶನ್ ಬ್ಯಾಂಕ್ ರೂಪಿಸಿರುವ, ಅಂತರ್ಜಾಲ ಮೂಲಕ ಸಲ್ಲಿಸುವ ಇ ಕಾಣಿಕೆ ಸೇವೆಯನ್ನು ಉದ್ಘಾಟಿಸಿದ ಹೆಗ್ಗಡೆ, ಆಧುನಿಕತೆಯ ಪರಿಣಾಮ ನಾವಿಂದು ನಮ್ಮ ಹಣಕಾಸಿನ ವ್ಯವಹಾರಗಳನ್ನು ಮನೆಯಲ್ಲೇ ಕುಳಿತು ಮಾಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ವಿದೇಶಗಳಲ್ಲಿದ್ದ ತಾಂತ್ರಿಕತೆ ನಗರಕ್ಕೆ ಬಂದಿದ್ದು ಇದೀಗ ಗ್ರಾಮೀಣ ಪ್ರದೇಶಕ್ಕೂ ಕಾಲಿರಿಸಿದೆ. ದೇಶದ ಪ್ರಗತಿ ನಗರಗಳಿಂದ ಮಾತ್ರವಲ್ಲ ಗ್ರಾಮೀಣ ಪ್ರದೇಶದಿಂದಲೂ ಸಾಧ್ಯ ಎಂಬುದನ್ನು ತಾಂತ್ರಿಕತೆ ತೋರಿಸಿಕೊಟ್ಟಿದೆ ಎಂದರು.
ದೇವರಿಗೆ ಕಾಣಿಕೆ ಸಲ್ಲಿಸಲು ಮನಿಆರ್ಡರ್, ಡಿಡಿ ಸೌಲಭ್ಯಗಳಿವೆ ಆದರೆ ಇದೀಗ ಅದನ್ನೂ ಮೀರಿ ಅಂತರ್ಜಾಲದ ಮೂಲಕ ದೇವರಿಗೆ ಪ್ರಾರ್ಥನಾ ಕಾಣಿಕೆಯನ್ನು ಸಲ್ಲಿಸುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಪೋರೇಶನ್ ಬ್ಯಾಂಕಿನವರು ತಮ್ಮ ಸೇವೆಯನ್ನು ವಿಸ್ತರಿಸಲು ಈ ರೀತಿಯಲ್ಲಿ ಮುಂದಾಗಿರುವುದು ಸಂತಸದ ವಿಚಾರ ಎಂದರು.
ನಾವು ದೂರದ ದೂರಿಗೆ ಪ್ರಯಾಣ ಮಾಡುತ್ತಿರವಾಗ ನಮ್ಮ ಪ್ರಯಾಣ ಸುರಕ್ಷಿತವಾಗುವಂತೆ ದೇವರಲ್ಲಿ ಬೇಡಿಕೊಳ್ಳುವುದರ ಜೊತೆಗೆ ಪ್ರಯಾಣದ ಸಂದರ್ಭದಲ್ಲೇ ಇ ಮೇಲ್ ಮೂಲಕ ನಮ್ಮ ಪ್ರಾರ್ಥನಾ ಕಾಣಿಕೆಯನ್ನು ಸಲ್ಲಿಸಿ ನೆಮ್ಮದಿ ಕಾಣಬಹುದಾಗಿದೆ ಎಂದು ವಿವರಿಸಿದರು.
ಕಾರ್ಪೋರೇಶನ್ ಬ್ಯಾಂಕಿನ ಅಧ್ಯಕ್ಷ ರಾಮನಾಥ ಪ್ರದೀಪ ಮಾತನಾಡಿ, ನಮ್ಮ ಬ್ಯಾಂಕ್ ಸುಮಾರು 162 ಸಾವಿರ ಕೋಟಿ ವ್ಯವಹಾರವನ್ನು ಮಾಡುತ್ತಿದೆ. ನಮ್ಮ ಹಣಕಾಸಿನ ಪದ್ಧತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾದರಿಯಾಗಿ ತೆಗೆದುಕೊಳ್ಳಲು ಚಿಂತನೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ. ನಾವು ಅಂತರ್ಜಾಲದ ಮೂಲಕ ಹಲವು ರೀತಿಯ ಸೇವೆಗಳನ್ನು ನೀಡಿ ಪ್ರಥಮದಲ್ಲಿದ್ದೇವೆ. ಇದೇ ರೀತಿ ಇ ಕಾಣಿಕೆಯೂ ಪ್ರಥಮವಾಗಿದೆ.
ಈ ವ್ಯವಸ್ಥೆಯಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಯಾವುದೇ ಬ್ಯಾಂಕಿನಿಂದ ಭಕ್ತರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದಾಗಿದೆ. ಈ ಸೇವೆ ದಿನದ ಇಪ್ಪತ್ತನಾಲ್ಕು ಗಂಟೆಯೂ ವಿಶ್ವದಲ್ಲಿ ಎಲ್ಲೇ ಇದ್ದರೂ ಉಪಯೋಗಿಸಿಕೊಳ್ಳಬಹುದಾಗಿದೆ. ಇದಕ್ಕೆ ಉಚಿತ ಸೇವಾ ಶುಲ್ಕವಿರುತ್ತದೆ ಎಂದು ವಿವರಿಸಿದರು.
ಹೆಚ್ಚಿನ ವಿವರಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ವೆಬ್ ತಾಣ ವೀಕ್ಷಿಸಿ











Click it and Unblock the Notifications