ಕ್ರೈಸ್ತ ಧರ್ಮ ಅವಹೇಳನಕ್ಕೆ ಮೊರೆಸ್ ಮುನಿಸು
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಶಾಸಕರು ಕ್ರೈಸ್ತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಕ್ರೈಸ್ತರಿಗೆ ನೋವುಂಟು ಮಾಡಿದೆ. ಈ ವಿಷಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದೇನೆ. ಶಾಸಕರ ನಡವಳಿಕೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅವರು ಈ ಬಗ್ಗೆ ನಾನೇ ಸಾರ್ವಜನಿಕವಾಗಿ ಕ್ಷೇಮೆ ಕೋರುವುದಾಗಿ ಹೇಳಿದ್ದಾರೆ. ಇದಲ್ಲದೆ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಪತ್ರ ಬರೆದಿರುವೆ, ಅದೇ ಪತ್ರವನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೂ ರವಾನಿಸಿರುವೆ. ಹಾಗೂ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸಿರುವೆ. ರಾಜ್ಯಪಾಲರು ಕೂಡಾ ತಮ್ಮ ಮಿತಿಯೊಳಗೆ ಶಾಸಕರಿಗೆ ತಿಳಿಹೇಳುವ ಭರವಸೆ ನೀಡಿದ್ದಾರೆ ಎಂದು ಮೊರೆಸ್ ಹೇಳಿದ್ದಾರೆ.
ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ಎರಡು ಅಂಶಗಳನ್ನು ಬಿಟ್ಟು ಹೋಗಿದ್ದಾರೆ. ಒಂದು ದೇಶ ವಿಭಜನೆ ಇನ್ನೊಂದು ಕ್ರೈಸ್ತ ಧರ್ಮ. ಕ್ರೈಸ್ತರು ಮತಾಂತರದ ಮೂಲಕ ಭಾರತವನ್ನು ಮುಗಿಸಲು ಹೊರಟಿದ್ದಾರೆ. ನಾನು ಕ್ರೈಸ್ತರಿಂದ ದೇಶವನ್ನು ರಕ್ಷಿಸಲು ಹೋರಾಡುತ್ತೇನೆ. ಕ್ರೈಸ್ತರನ್ನು ತೊಲಗಿಸಲು ನೀವು ಕೈಜೋಡಿಸಿ ಎಂದು ಖಾನಾಪುರ ಶಾಸಕ ಪ್ರಹ್ಲಾದ್ ರೆಮಾನೆ ಅವರು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.