ಒಂದೇ ಸೂರಿನಡಿ ಸಕಲ ಸೇವೆ ಇದು ಬಳ್ಳಾರಿಒನ್
ಇಡಿಸಿಎಸ್ ನಿರ್ದೇಶನಾಲಯ, ಇ ಆಡಳಿತ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿಂದು ಪಾಲಿಕೆಯ ಆವರಣದಲ್ಲಿ ಬಳ್ಳಾರಿ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಮತ್ತು ಖಾಸಗಿ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವಂತಹ 'ಬಳ್ಳಾರಿ ಒನ್' ಸಮಗ್ರ ನಾಗರಿಕ ಸೇವಾ ಕೇಂದ್ರವನ್ನು ಗ್ರಾಹಕರು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು. ಬಳ್ಳಾರಿಯ ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಉತ್ತಮವಾಗಿ ತುರ್ತು ಸೇವೆ ನೀಡುವ ಸಲುವಾಗಿ ಮಹಾನಗರ ಪಾಲಿಕೆ ಹಾಗು ಬುಡ ಕಚೇರಿಯಲ್ಲಿ ಬಳ್ಳಾರಿ ಒನ್' ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಪ್ರಸ್ತುತ ಈ ಕೇಂದ್ರಗಳಲ್ಲಿ ವಿದ್ಯುತ್ ಬಿಲ್ , ಸೆಲ್ ಒನ್, ಏರ್ಟೆಲ್, ವೊಡಾಫೋನ್ ಮೊಬೈಲ್ ಬಿಲ್ ಹಾಗು ಪಾಸ್ಪೋರ್ಟ್ ಅರ್ಜಿಗಳನ್ನು ಮಾರಾಟ ಮಾಡಲಾಗುವುದು. ಈ ಎಲ್ಲಾ ಬಿಲ್ ಗಳನ್ನು ಇಲ್ಲಿ ಪಾವತಿ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅಲ್ಲದೇ ಹೆಚ್ಚು ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಬಿ. ಶಿವಪ್ಪ ಅವರು, ಈ ಯೋಜನೆಯು ಅತ್ಯುಪಯುಕ್ತವಾದುದು. ಬೆಂಗಳೂರು ಒನ್ ಅನ್ನು ಅಧ್ಯಯನ ಮಾಡಿ, ಅದೇ ಮಾದರಿಯಲ್ಲಿ ಸೇವೆಗಳನ್ನು ವಿಸ್ತರಿಸಲಾಗುವುದು. ಎಪಿಎಂಸಿ, ರೇಡಿಯೋ ಪಾರ್ಕ್ ಸೇರಿದಂತೆ ಇನ್ನೂ 3 ಕೇಂದ್ರಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುವುದು. ಇದೊಂದು ರೀತಿ ಜನಸ್ನೇಹಿ ಕಾರ್ಯಕ್ರಮವಾಗಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ಶಾಸಕ, ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಅವರು ಮಾತನಾಡಿ, ಮಹಾನಗರ ಪಾಲಿಕೆಯ ನೀರಿನ ಬಿಲ್ಲು, ಮನೆಕಂದಾಯ, ಮರಣ- ಜನನ ಪ್ರಮಾಣ ಪತ್ರ ಸೇರಿಂದತೆ ಎಲ್ಲಾ ಸೇವೆಗಳನ್ನು ಈ ಕೇಂದ್ರಗಳಿಗೆ ಶೀಘ್ರವಾಗಿ ವಿಸ್ತರಿಸಲಾಗುವುದು. ಇದೊಂದು ಅತ್ಯುತ್ತಮವಾದ ಸೇವೆಯಾಗಿದ್ದು, ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇ ಆಡಳಿತ ಇಲಾಖೆಯ ಕಾರ್ಯದರ್ಶಿ ವಿದ್ಯಾಶಂಕರ ಅವರು, ಈ ಸೇವೆಯನ್ನು 2005 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ 70 ಕೇಂದ್ರಗಳು 43 ಸೇವೆಗಳನ್ನು 24 ಗಂಟೆಗಳ ಕಾಲ ನಿರ್ವಹಿಸುತ್ತಿವೆ. 3 ಸಾವಿರ ಕೋಟಿ ರೂ. ವಹಿವಾಟನ್ನು ಹೊಂದಿದೆ ಎಂದರು.
ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಧಾರವಾಡ, ದಾವಣಗೆರೆ, ಗುಲ್ಬರ್ಗಾದಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಶೀಘ್ರವಾಗಿ ಬೆಳಗಾವಿಯಲ್ಲಿ ಪ್ರಾರಂಭಿಲಾಗುವುದು. ಬಳ್ಳಾರಿಯಲ್ಲಿ ಅಗತ್ಯವಿದ್ದರೆ ಇನ್ನೂ ಹೆಚ್ಚು ಕೇಂದ್ರಗಳನ್ನು ಹೆಚ್ಚು ಅವಧಿ ಹಾಗು ಸೇವೆಗಳಿಗೆ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮೇಯರ್ ನೂರ್ ಜಹಾನ್ ಅಲ್ಲಬಕಾಷ್, ಉಪಮೇಯರ್ ತೂರ್ಪು ಯಲ್ಲಪ್ಪ, ಪಾಲಿಕೆಯ ಸದಸ್ಯರು, ವಿವಿಧ ಗಣ್ಯಮಾನ್ಯರು ಉಪಸ್ಥಿತರಿದ್ದರು.ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಬಿ. ತಿಮ್ಮಪ್ಪ ಸ್ವಾಗತಿಸಿದರು. ಇ ಆಡಳಿತದ ಕಾರ್ಯನಿರ್ವಾಹಕ ಡಾ. ಡಿ.ಎಸ್. ರವೀಂದ್ರನ್ ಅವರು ವಂದಿಸಿದರು.