ಆಯಮ್ ಮಿನಿಸ್ಟರ್, ಮಿನಿಸ್ಟರ್ ಬಚ್ಚೇಗೌಡ!
ಇದು ಸುಳ್ಳಲ್ಲ ನೆಲಮಂಗಲ ಬಳಿ ಭರತ್ ಎಂಬ ಇಂಜಿನಿಯರೊಬ್ಬ ಬಚ್ಚೇಗೌಡ್ರ ಕಾರನ್ನು ಓವರ್ ಟೇಕ್ ಮಾಡಿದ್ದಾನೆ. ಇದರಿಂದ ಕುಪಿತಗೊಂಡ ಸಚಿವರ ಹಿಂಬಾಲಕರು ಓವರ್ ಟೇಕ್ ಮಾಡಿದ ಕಾರನ್ನು ತಡೆದು ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಾನ್ಯಾರು ಗೊತ್ತಾ ಕಾರ್ಮಿಕ ಮಂತ್ರಿ ಬಚ್ಚೇಗೌಡ, ನಿನಗೆ ಗೊತ್ತಿಲ್ವ. ಕಾರಿನ ಮೇಲೆ ಕೆಂಪು ದೀಪ ಇದೆ. ಕರ್ನಾಟಕ ಸರಕಾರ ಅಂತ ಬೋರ್ಡ್ ಬೇರೆ ಇದೆ. ಇಷ್ಟಿದ್ರೂ ನಾನ್ಯಾರು ಅಂತ ಪ್ರಶ್ನಿಸುತ್ತಿಯಾ. ಎಷ್ಟು ಧೈರ್ಯ ನಿನಗೆ ಎಂದು ಅಬ್ಬರಿಸಿದ್ದಾರೆ.
ಅಷ್ಟೊತ್ತಿಗಾಗಲೇ ಸಚಿವರ ಗನ್ ಮ್ಯಾನ್ ಗಳು ಭರತ್ ನನ್ನು ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಅಲ್ಲದೇ, ಆತನ ವಿರುದ್ಧ ಪ್ರಕರಣ ದಾಖಲಿಸುವುದರ ಜೊತೆಗೆ 300 ದಂಡವನ್ನು ಸಹ ತೆಗೆದುಕೊಳ್ಳಲಾಗಿದೆ. ಸಚಿವರ ಈ ಕ್ರಮ ವ್ಯಾಪಕ ಟೀಕಿಗೆ ಒಳಗಾಗಿದ್ದರಿಂದ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಬಗ್ಗೆ ಸಚಿವರ ವಿವರಣೆ ಕೇಳುವುದರ ಜೊತೆಗೆ ಕ್ಷಮೆಯನ್ನೂ ಯಾಚಿಸಿದ್ದಾರೆ. ಭರತ್ ಮೇಲೆ ದಾಖಲಾಗಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ.
ಅವನಿಗೆ ನಾನ್ಯಾಕೆ ಕ್ಷಮೆ ಕೇಳಲಿ. ವೇಗದ ಮಿತಿ ಮೀರಿ ಕಾರು ಚಾಲನೆ ಮಾಡುತ್ತಿದ್ದ ಅವನಿಗೆ ನಾನ್ಯಾಕೆ ಕ್ಷಮೆ ಕೇಳಲಿ ಎಂದು ಬಚ್ಚೇಗೌಡ ಸಿಡಿಮಿಡಿಗೊಂಡಿದ್ದಾರೆ. ಮಿನಿಸ್ಟರ್ ಕಾರು ಎನ್ನುವ ಗ್ಯಾನ ಇಲ್ದೆ ಕಾರು ಚಲಾಯಿಸಿದ, ಜೊತೆಗೆ ದುರಹಂಕಾರದ ಮಾತುಗಳು ಬೇರೆ. ಮಿನಿಸ್ಟರ್ ಆದ್ರೆ ನಾನೇನು ಮಾಡ್ಲಿ. ನೀವ್ಯಾರಾದ್ರೆ ನನಗೇನು. ಇಂತಹ ಉದ್ಧಟತನ ಮಾತುಗಳಿಂದ ಕೋಪಗೊಂಡ ನಾನು ಪ್ರಕರಣ ದಾಖಲಿಸಿಕೊಳ್ಳಲು ಹೇಳಿದೆ. ಸಹನೆ ಕಳೆದುಕೊಂಡ ನಮ್ಮ ಗನ್ ಮ್ಯಾನ್ ಗಳು ಭರತ್ ನಿಗೆ ಏಟು ನೀಡಿದ್ದಾರೆ ಎಂದಿದ್ದಾರೆ. ಕ್ಷಮೆ ಕೇಳಲು ಅವನ್ಯಾರು ಎಂದು ಅವರು ಪ್ರಶ್ನಿಸಿದ್ದಾರೆ.
ದಾಬಾವೊಂದರಲ್ಲಿ ಊಟ ಮುಗಿಸಿಕೊಂಡು ಭರತ್ ಮತ್ತು ಆತನ ಕುಟುಂಬ ಬೆಂಗಳೂರಿಗ ಕಡೆಗೆ ತೆರಳುತ್ತಿತ್ತು. ನೆಲಮಂಗಲದ ಬಳಿದ ಮಿನಿಸ್ಟರ್ ಕಾರನ್ನು ಭರತ್ ಓವರ್ ಟೇಕ್ ಮಾಡಿದ್ದು, ಬಚ್ಚೇಗೌಡ್ರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಭರತ್ ಸದಾಶಿವನಗರದ ನಿವಾಸಿಯಾಗಿದ್ದು, ಇಂಜಿನಿಯರ್, ಅಡ್ವೋಕೇಟ್ ಎಂದು ಹೇಳಿದ್ದಾನೆ. ಭರತ್ ಚಲಾಯಿಸುತ್ತಿದ್ದ ಕಾರು ಟಾಟಾ ಸಪಾರಿ.