ಬ್ಲಾಕ್ಬೆರ್ರಿಗೆ ಉತ್ತರಿಸಲು ಆ.31ರ ಗಡುವು
ಆದರೆ ಗುರುವಾರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ನಡೆದ ಸಭೆಗೆ ಗೈರುಹಾಜರಾದ ಆರ್ಐಎಂ ಇಕ್ಕಟ್ಟಿನ ಪರಿಸ್ಥಿತಿಯಿಂದ ನುಣುಚಿಕೊಂಡಿತು.
ಈ ಬಗ್ಗೆ ಕೆನಡಾ ಮೂಲದ ಆರ್ಐಎಂ ಮತ್ತು ಅದರ ನಿರ್ವಾಹಕರಿಗೆ ಬ್ಲ್ಯಾಕ್ಬೆರ್ರಿ ಎಂಟರ್ಪ್ರೈಸಸ್ (BES) ಮತ್ತು ಬ್ಲ್ಯಾಕ್ಬೆರ್ರಿ ಮೆಸೇಂಜರ್ ಸರ್ವೀಸಸ್ (BBM)ಗಳಿಗೆ (ಇವೆರಡೂ ಕಾನೂನು ಅನುಷ್ಠಾನ ಸಂಸ್ಥೆ-LEAನ ನಿಯಂತ್ರಣಕ್ಕೆ ಎಟಕುವಂತಿರಬೇಕು) ಸಂಬಂಧಿಸಿ ಕಾನೂನುಬದ್ಧ ತಡೆಗೆ ಅವಕಾಶ ನೀಡುವಂತಹ ತಾಂತ್ರಿಕ ಪರಿಹಾರವೊಂದನ್ನು ಒದಗಿಸುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೆ ಅವರು ಟೆಲಿಕಾಂ ಇಲಾಖೆ ಕಾರ್ಯದರ್ಶಿ ಪಿ.ಜೆ.ಥಾಮಸ್ ಅವರಿಗೆ ಪತ್ರ ಬರೆದು ಕೇಳಿದ್ದಾರೆ.
ಆ.31ರೊಳಗೆ ಇಂತಹ ಕ್ರಮ ಆಗದಿದ್ದರೆ ಸೇವೆಗಳನ್ನು ತಡೆಹಿಡಿಯಲಾಗುವುದು ಎಂದಿದ್ದಾರೆ. ಬ್ಲ್ಯಾಕ್ಬೆರ್ರಿ ದೇಶದ ಸುರಕ್ಷಾ ವಿಷಯಕ್ಕೆ ತೀವ್ರ ಬೆದರಿಕೆ ಒಡ್ಡುವ ಭೀತಿ ಇದ್ದು ಈ ವಿಷಯದಲ್ಲಿ ಪಿಳ್ಳೆ ಅವರ ದೃಢ ನಿಲುವಿಗೆ ಕೇಂದ್ರ ಸರಕಾರ ಒತ್ತು ನೀಡುವುದೇ ಅಥವಾ ಬ್ಲ್ಯಾಕ್ಬೆರ್ರಿ ಪ್ರಭಾವಕ್ಕೆ ಮಣಿಯಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಪಿಳ್ಳೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಭದ್ರತಾ ಏಜೆನ್ಸಿ ಪ್ರತಿನಿಧಿಗಳು, ದೂರವಾಣಿ ಇಲಾಖೆ ಮತ್ತು ಬಿಎಸ್ಸೆನ್ನೆಲ್ ಮತ್ತು ಎಂಟಿಎನ್ನೆಲ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಆದರೆ, ಈ ಸಭೆಗೆ ಆರ್ಐಎಂ ಮತ್ತು ವೊಡಾಫೋನ್, ಭಾರ್ತಿ ಏರ್ಟೆಲ್ ಸಂಸ್ಥೆಗಳು ಗೈರು ಹಾಜರಾಗಿದ್ದವು.
ಸೌದಿ ಅರೇಬಿಯಾ, ಜರ್ಮನಿ ಸೇರಿದಂತೆ ವಿವಿಧ ದೇಶಗಳು ತಮ್ಮ ಆಂತರಿಕ ಸುರಕ್ಷೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬ್ಲ್ಯಾಕ್ಬೆರ್ರಿಯ ಜೊತೆ ಕಠಿಣ ನಿಲುವು ತಳೆದಿರುವುದೂ ಇಲ್ಲಿ ಉಲ್ಲೇಖನೀಯ.