ರಾವಣನಿಗೆ ಪ್ರಚಂಡ ಜಯ; ಕೆಎಫ್ ಸಿಸಿಗೆ ಮುಖಭಂಗ
ಬೆಂಗಳೂರು, ಜೂ.18: 'ರಾವಣ್'(ಹಿಂದಿ) ಹಾಗೂ 'ರಾವಣನ್'(ತಮಿಳು) ಚಿತ್ರ ವಿತರಕರ ಮೇಲೆ ನೇರ ಹಾಗೂ ಪರೋಕ್ಷವಾಗಿ ಯಾವುದೇ ಕ್ರಮಕೈಗೊಳ್ಳದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ(ಕೆಎಫ್ ಸಿಸಿ) ದಿ ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ (ಸಿಸಿಐ) ಕಟ್ಟಾಜ್ಞೆ ವಿಧಿಸಿದೆ. ಈ ಮೂಲಕ ಕೆಎಫ್ ಸಿಸಿ ಮುಖಭಂಗ ಅನುಭವಿಸಿದಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಹಾಗೂ ಕೆಎಫ್ ಸಿಸಿ ಸದಸ್ಯ ಮಧುಸೂಧನ್ ರೆಡ್ಡಿ, 'ರಾವಣ್' ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ಕೆಎಫ್ ಸಿಸಿಯಿಂದ ಸಮಸ್ಯೆ ಉಂಟಾದ ಕಾರಣ, ರಿಲಯನ್ಸ್ ಬಿಗ್ ಪಿಕ್ಚರ್ ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ನ್ಯಾಯಾಲಯ ಸಿಸಿಐಗೆ ಒಪ್ಪಿಸಿತ್ತು. ಸಿಸಿಐ ತನ್ನ ಅಂತಿಮ ತೀರ್ಪನ್ನು ರಿಲಯನ್ಸ್ ಬಿಗ್ ಪಿಕ್ಚರ್ಸ್ ಪರವಾಗಿ ನೀಡಿದೆ. ಸಿಸಿಐ ತೀರ್ಪಿಗೆ ನಾವು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.
ಈ ಮೂಲಕ ಕರ್ನಾಟಕದಲ್ಲಿ 'ರಾವಣ್' ಚಿತ್ರ ಪ್ರದರ್ಶನಕ್ಕಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗಿವೆ. ಮೈಸೂರು ವಲಯದಲ್ಲಿ ಎಲ್ಲಾ ಮಲ್ಟಿಫೆಕ್ಸ್ ಗಳಲ್ಲಿ ತಮಿಳು ಮತ್ತು ಹಿಂದಿ 'ರಾವಣ್' ತಲಾ 24 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲಿದೆ. ಈ ಮೂಲಕ ಪರಭಾಷಾ ಚಿತ್ರಗಳ ಮೇಲಿನ ಕೆಎಫ್ ಸಿಸಿ ನೀತಿ, ನಿಯಮಗಳಿಗೆ ಕಲ್ಲು ಬಿದ್ದಂತಾಗಿದೆ.
ಚಿತ್ರವನ್ನು ಎರಡು ಭಾಷೆಗಳಲ್ಲಿ ತೆಗೆಯಲಾಗಿದೆ. ಎರಡೂ ಭಾಷೆಗಳಲ್ಲಿ ವಿಭಿನ್ನ ತಾರಾಗಣವಿದೆ. ಹಿಂದಿ ಹಾಗೂ ತಮಿಳು ಚಿತ್ರಗಳನ್ನು ಒಂದೇ ಚಿತ್ರ ಎಂದು ಪರಿಗಣಿಸದೆ ಎರಡು ಬೇರೆ ಬೇರೆ ಚಿತ್ರಗಳೆಂದು ಪರಿಗಣಿಸಲು ರಿಲಯನ್ಸ್ ಬಿಗ್ ಪಿಕ್ಚರ್ಸ್ ವಿನಂತಿಸಿಕೊಂಡಿತ್ತು.
ಇದೀಗ ಹೊರ ಬಿದ್ದಿರುವ ತೀರ್ಪು ರಿಲಯನ್ಸ್ ಬಿಗ್ ಪಿಕ್ಚರ್ಸ್ ಗೆ ಜಯಮಾಲೆ ಹಾಕಿದೆ. ಹಾಗಾಗಿ ಈ ಎರಡೂ ಚಿತ್ರಗಳು ತಲಾ 24 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿವೆ. ಆದರೆ ಕೆಎಫ್ ಸಿಸಿ ಮಾತ್ರ ಹಿಂದಿ ಹಾಗೂ ತಮಿಳು ರಾವಣ ಒಂದೇ ಚಿತ್ರ ಎಂಬ ತನ್ನ ಹಳೆ ಸಿದ್ಧಾಂತವನ್ನು ಪುನಃ ಉಚ್ಚರಿಸಿದೆ.
"ರಾವಣ್ ಚಿತ್ರ ಅಪಾರ ಶ್ರಮವಹಿಸಿ ತೆಗೆದ ಚಿತ್ರವಾಗಿದೆ. ಇಂತಹ ಚಿತ್ರಗಳಿಗೆ ಕೆಎಫ್ ಸಿಸಿ ತನ್ನ ನೀತಿ ನಿಯಮಗಳನ್ನು ಸಡಿಸಿಕೊಂಡು ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಅವಕಾಶ ಕಲ್ಪಿಸಬೇಕು" ಎಂದು ಕೆಎಫ್ ಸಿಸಿಗೆ ಬರೆದ ಪತ್ರದಲ್ಲಿ ರಿಲಯನ್ಸ್ ಬಿಗ್ ಪಿಕ್ಚರ್ಸ್ ವಿನಂತಿಸಿಕೊಂಡಿತ್ತು.
ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರತನ್ನ ಬಿಗಿ ಪಟ್ಟನ್ನು ಸಡಿಲಿಸಿಲ್ಲ. ಹಿಂದಿ ಹಾಗೂ ತಮಿಳು 'ರಾವಣ್' ಚಿತ್ರಗಳು ಎರಡೂ ಒಂದೇ. ಅವು ಬೇರೆ ಬೇರೆ ಅಲ್ಲ. ಹಾಗಾಗಿ ಅವುಗಳನ್ನು ತಲಾ 12ರಂತೆ ಒಟ್ಟು 24 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ತನ್ನ ಹಳೆ ಸಿದ್ಧಾಂತಕ್ಕೆ ಕಟ್ಟುಬಿದ್ದಿದೆ.