ಲೈಲಾ ಪ್ರಭಾವ : ಉತ್ತರ ಕರ್ನಾಟಕದಲ್ಲೂ ಭಾರೀ ಮಳೆ
ರಾಜ್ಯದ ಕರಾವಳಿಯಲ್ಲಿ ಭಾರೀ ಮಳೆ ಬೀಳುತ್ತಿದ್ದರೂ ಉತ್ತರ ಕರ್ನಾಟಕದಲ್ಲಿ ಜನ ಇನ್ನೂ ಬಿಸಿಲಿಗೆ ಮೈಯೊಡ್ಡಿದ್ದರು. ಹವಾಮಾನ ಇಲಾಖೆಯ ಪ್ರಕಾರ ಇನ್ನೆರಡು ದಿನಗಳಲ್ಲಿ ಬಿಜಾಪುರ, ಬೀದರ್, ಗುಲಬರ್ಗಾ, ಬಾಗಲಕೋಟೆ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯಲಿದೆ. ಮಳೆ ಜೊತೆಗೆ ಭಾರೀ ಬಿರುಗಾಳಿ ಬೀಸಲಿರುವುದರಿಂದ ಜನ ಎಚ್ಚರದಿಂದಿರಬೇಕೆಂದು ಇಲಾಖೆ ಹೇಳಿದೆ.
ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಬಿದ್ದಿರುವ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಅಪಾರ ಹಾನಿ ಸಂಭವಿಸಿದ್ದು ಒಟ್ಟು ನಾಲ್ವರು ಮಳೆಗೆ ಆಹುತಿಯಾಗಿದ್ದಾರೆ. ಕುಂದಾಪುರದಲ್ಲಿ ಮನೆಗಳು ಧರೆಗುರುಳಿವೆ. ಮರ ಮತ್ತು ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಕೂಡ ಹಾನಿ ಸಂಭವಿಸಿದೆ.
ಭಯಂಕರ ಬಿರುಗಾಳಿ ಜೊತೆಗೆ ಸುರಿದ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಅಡಿಕೆ, ತೆಂಗು, ಬಾಳೆ ಗಿಡಗಳು ಧರೆಗುರುಳಿವೆ. ಹಿರಿಯೂರಿನಲ್ಲಿ ಸಿಡಿಲಿಗೆ ಕುರಿ ಮತ್ತು ದನಕರುಗಳು ಸತ್ತಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದರಿಂದ ವಿದ್ಯುತ್ ವ್ಯತ್ಯಯವಾಗಿತ್ತು. ಉತ್ತರ ಕನ್ನಡ, ಉಡುಪಿ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ ಜಿಲ್ಲೆಗಳಲ್ಲಿಯೂ ಉತ್ತಮ ಮಳೆ ಬಿದ್ದಿದೆ. ಹಲವೆಡೆ ಆಲಿಕಲ್ಲು ಮಳೆ ಬಿದ್ದಿದೆ.
ಲೈಲಾ ಹೆಸರಿನ ಮರ್ಮ : ಬಂಗಾಳ ಕೊಲ್ಲಿಯಲ್ಲಿ ಬೀಸಿರುವ ಬಿರುಗಾಳಿಗೆ ಲೈಲಾ ಎಂಬ ಹೆಸರು ಬಂದಿದ್ದಾದರೂ ಹೇಗೆ? ಕುತೂಹಲದ ಪ್ರಶ್ನೆ ಓದುಗರಲ್ಲಿ ಎದ್ದಿರುವುದು ಅತ್ಯಂತ ಸಹಜ.
ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದಲ್ಲಿ ಬೀಸುವ ಬಿರುಗಾಳಿಗಳಿಗೆ ಹೆಸರಿಡುವ ಪರಿಪಾಠ ಪ್ರಾರಂಭವಾಗಿದ್ದು 2004ರಲ್ಲಿ. ವಿಶ್ವ ಹವಾಮಾನ ಸಂಸ್ಥೆಯ ಅಣತಿಯಂತೆ ಈ ಹೆಸರನ್ನು ಇಡಲಾಗುತ್ತದೆ. ವಿಶ್ವ ಹವಾಮಾನ ಸಂಸ್ಥೆಯ ಸದಸ್ಯರಾಗಿರುವ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಥೈಲ್ಯಾಂಡ್ ಮತ್ತು ಶ್ರೀಲಂಕಾಗಳಿಂದ ಭಾರತದ ಹವಾಮಾನ ಇಲಾಖೆಗೆ ಸುಮಾರು 64 ಹೆಸರುಗಳನ್ನು ಬಿರುಗಾಳಿಗಳಿಗೆ ಸೂಚಿಸಲಾಗಿದೆ. ಅವುಗಳಲ್ಲಿ 22 ಹೆಸರುಗಳನ್ನು ಬಿರುಗಾಳಿಗಳಿಗೆ ಇಡಲಾಗಿದೆ. ಪ್ರಸ್ತುತ ಬೀಸಿರುವ ಲೈಲಾ ಹೆಸರನ್ನು ಸೂಚಿಸಿದ್ದು ಪಾಕಿಸ್ತಾನ!