ಗಣಿಧಣಿಗಳ ವಿರುದ್ಧ ದೇವೇಗೌಡ ಪತ್ರ
ರಾಜ್ಯದಲ್ಲಿ ಜನರಿಗೆ ರಕ್ಷಣೆ ಹಾಗೂ ನೆಮ್ಮದಿಯ ಬದುಕು ನಡೆಸುವ ವಾತಾವರಣ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಬಳ್ಳಾರಿಯ ಗಣಿಧಣಿ ಸಚಿವರ ಕಪಿಮುಷ್ಠಿಯಲ್ಲಿ ಆಡಳಿತ ಯಂತ್ರ ಸಿಲುಕಿದೆ ಎಂದು ಹಲವು ಘಟನೆ ಹಾಗೂ ನಿದರ್ಶನಗಳ ಮೂಲಕ ಸಾಬೀತಾಗಿದೆ. ಅದರಲ್ಲೂ ಬಳ್ಳಾರಿಯಲ್ಲಿ ಸಂವಿಧಾನಿಕ ಯಂತ್ರ ಸಂಪೂರ್ಣ ಕುಸಿದಿದೆ ಎನ್ನುವುದಕ್ಕೆ ಗಣಿ ಮಾಲೀಕ ಟಪಾಲು ಗಣೇಶ್ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಸ್ಪಷ್ಟ ನಿದರ್ಶನ ಎಂದು ದೇವೇಗೌಡ ಆರೋಪಿಸಿದ್ದಾರೆ.
ಬಳ್ಳಾರಿಯಲ್ಲಿ ಪೊಲೀಸರು ಸೇರಿದಂತೆ ಅಧಿಕಾರಿಗಳ ವರ್ಗ ರೆಡ್ಡಿ ಸಹೋದರರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಇನ್ನೊಂದು ಪ್ರಮುಖ ನಿದರ್ಶನವೆಂದರೆ ಒಬಳಾಪುರಂ ಮೈನಿಂಗ್ ಕಂಪನಿ ವಿರುದ್ಧ ಸಿಬಿಐಗೆ ದಾಖಲೆ ಒದಗಿಸಿದ್ದ ಅಂಜನೇಯ ಎಂಬುವವರನ್ನು ಚಿತ್ರಹಿಂಸೆ ನೀಡಲಾಯಿತು. ಇದರಿಂದ ಬೇಸತ್ತು ಅವರು ಅತ್ಮಹತ್ಯೆ ಶರಣಾದರು. ಇಂತಹ ಅನೇಕ ಘಟನೆಗಳು ಬಳ್ಳಾರಿಯಲ್ಲಿ ನಡೆಯುತ್ತಲೇ ಇವೆ ಎಂದು ದೇವೇಗೌಡ ಪತ್ರದಲ್ಲಿ ವಿವರಿಸಿದ್ದಾರೆ. ಹೀಗಾಗಿ ರಾಜ್ಯ ಸರಕಾರದ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.