ನಮಗೆ ಹಿಂದೂ-ಮುಸ್ಲಿಂಗಿಂತ ಮನುಷ್ಯತ್ವ ಮುಖ್ಯ
ಮಂಗಳವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಜಮಾತೆ ಇಸ್ಲಾಮಿ ಹಿಂದ್ ಸಂಸ್ಥೆಯ ಸದಸ್ಯ ಎಂ. ಅಬ್ದುಲ್ ವಹಾಬ್, ಹ್ಯೂಮಾನಿಟಿ ರಿಲೀಫ್ ಸೊಸೈಟಿಯ ಫಾರುಖ್ ನಕ್ತರ್, ಎಪಿಸಿಆರ್ ಸಂಘಟನೆಯ ಎಂ.ಅಬ್ದುಲ್ ವಹಾಬ್ ಮತ್ತು ಇರ್ಶಾದ್, ಶಿವಮೊಗ್ಗದಲ್ಲಿ ಇಂತಹ ಗಲಭೆ ನಡೆಯಬಾರದಿತ್ತು. ಇದೊಂದು ಅತ್ಯಂತ ಖಂಡನಾರ್ಹ ಘಟನೆ. ಶಿವಮೊಗ್ಗದ ನಾಗರೀಕರ ಮಟ್ಟಿಗೆ ಇದೊಂದು ದೌರ್ಭಾಗ್ಯದ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ 60 ವರ್ಷಗಳಿಂದ ಜಮಾತೆ ಇಸ್ಲಾಮಿ ಹಿಂದ್ ಸೌಹಾರ್ದಯುತ ವಾತಾವರಣಕ್ಕಾಗಿ ಕೆಲಸ ಮಾಡುತ್ತಿದೆ. ಮಂಡ್ಯದ ತಮಿಳ್ ಕ್ಯಾಂಪ್ನಲ್ಲಿ ಹಲವು ಮನೆಗಳು ಬೆಂಕಿಗಾಹುತಿಯಾದಾಗ ತಮಿಳು ಬಾಂಧವರಿಗಾಗಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇವೆ. ನೆರೆ ಹಾವಳಿ ಉತ್ತರ ಕರ್ನಾಟಕದಲ್ಲಿ ಆದ ಸಂದರ್ಭದಲ್ಲಿ 400ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇವೆ. ನಮಗೆ ಹಿಂದೂ-ಮುಸ್ಲೀಂರಿಗಿಂತ ಮನುಷ್ಯರು ಮುಖ್ಯ. ಶಿವಮೊಗ್ಗದ ಗಲಭೆ ಘಟನೆಗೆ ಸಂಬಂಧಿಸಿದಂತೆ ಒಂದು ಹಂತದ ಸರ್ವೇ ಮಾಡಿದ್ದೇವೆ. ಕಳೆದ 62 ವರ್ಷಗಳಲ್ಲಿ ದೇಶದಾದ್ಯಂತ ಇಂತಹ 50 ಸಾವಿರಕ್ಕಿಂತ ಹೆಚ್ಚು ಕೋಮುಗಲಭೆಗಳಾಗಿವೆ. ಈ ಕೋಮುಗಲಭೆಗಳನ್ನು ಮಾಡಿಸುತ್ತಿರುವವರು ಅಮೇರಿಕಾ, ಇಸ್ರೇಲ್ ಮೂಲದವರು. ಜಗಳ ಮಾಡಿಸುವವರ ಕೈಗೊಂಬೆಯಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ರಾಜ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲವಾಗಿರುವ ರಾಜ್ಯ ಸರ್ಕಾರ ನೆರೆ ಹಾವಳಿಗೆ ಬಲಿಯಾಗಿರುವ ಜನಸಮುದಾಯಕ್ಕಾಗಿ 600 ಕೋಟಿ ರೂ.ಗಳನ್ನು ವೆಚ್ಚ ಮಾಡುವ ಮಾತನ್ನಾಡಿದೆ. ಈ ಹಣವನ್ನು ರಾಜ್ಯ ಸರ್ಕಾರ ಎಲ್ಲಿ ಖರ್ಚು ಮಾಡಿದೆ ಎಂಬುದು ತಿಳಿದುಬರುತ್ತಿಲ್ಲ. ಲೆಕ್ಕ ಬಚ್ಚಿಡುವ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರ ಇಂತಹ ದಂಗೆಗಳನ್ನು ಹುಟ್ಟುಹಾಕುತ್ತಿದೆ. ಸ್ವತಃ ಸರ್ಕಾರದಿಂದ ಈ ಕೆಲಸ ನಡೆಯುತ್ತಿರುವುದು ವಿಷಾದನೀಯ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಮಾತೆ ಇಸ್ಲಾಮಿ ಹಿಂದ್, ಹ್ಯೂಮಾನಿಟಿ ರಿಲೀಫ್ ಸೊಸೈಟಿ ಮತ್ತು ಎಪಿಸಿಆರ್ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.