ಮುರಾರ್ಜಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಪುಠ್ಯಪುಸ್ತಕ ಹಾಗೂ ಇನ್ನಿತರ ಸಾಮಗ್ರಿಗಳನ್ನು ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಈ ಶಾಲೆಗಳಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅಂದರೆ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರ್ಗ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರವೇಶ ಲಭ್ಯವಿದೆ.
ಸಾಮಾನ್ಯ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಆದಾಯ ರೂ.15,000/- ಗಳ ಮಿತಿ ಇರುತ್ತದೆ. ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಶೇ. 50 ಸೀಟುಗಳು ವಿದ್ಯಾರ್ಥಿನಿಯರಿಗೆ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಗಳಲ್ಲಿ ಶೇ.100 ರಷ್ಟು ವಿದ್ಯಾರ್ಥಿನಿಯರಿಗೆ ಸೀಟುಗಳು ಲಭ್ಯವಿರುತ್ತವೆ. ಒಂದು ಸಾರಿ ಈ ವಸತಿ ಶಾಲೆಗೆ ವಿದ್ಯಾರ್ಥಿ ಸೇರಿದಲ್ಲಿ 12 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಬಹುದಾಗಿದೆ.
ಮೇಲ್ಕಂಡ ಪ್ರತಿ ವಸತಿ ಶಾಲೆಗಳಲ್ಲಿ 2010-11ನೇ ಸಾಲಿನಲ್ಲಿ 6ನೇ ತರಗತಿಗೆ 50 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಳ್ಳಲಾಗುವುದು. ಪ್ರಸ್ತುತ ಕರ್ನಾಟಕದ ಯಾವುದೇ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ಈಗಾಗಲೇ ಮಾಡಿರುವ ಅರ್ಹ ವಿದ್ಯಾರ್ಥಿಗಳು ಈ ಬಗ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ 28 ಮಾರ್ಚ 2010 ರಂದು ತಾಲೂಕಾ ಕೇಂದ್ರಗಳಲ್ಲಿ ಜಿಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು.
ಈ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಮೆರಿಟ್ ಅಂಕಪಟ್ಟಿ ತಯಾರಿಸಿ, ಮೆರಿಟ್ ಆಧಾರದ ಮೇಲೆ ಮೀಸಲಾತಿ ಅನ್ವಯ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಲಾಗುವುದು. ಮೊದಲ ಪ್ರಾಶಸ್ತ್ಯವಾಗಿ ಗದಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಆಧ್ಯತೆ ನೀಡಲಾಗುವುದು. ಇತರೇ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಎರಡನೆ ಆದ್ಯತೆ ನೀಡಲಾಗುವುದು. ಪರೀಕ್ಷೆಗೆ ಬೇಕಾದ ಅರ್ಜಿಗಳು ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳ ಕಛೇರಿ, ತಾಲೂಕಿನ ಮುರಾರ್ಜಿ ದೇಸಾಯಿ ಮತ್ತು ಕಿತ್ತೂರ ರಾಣಿ ಚೆನ್ನಮ್ಮಾ ಬಾಲಕಿಯರ ವಸತಿ ಶಾಲೆಗಳಲ್ಲಿ ಲಭ್ಯವಿರುತ್ತವೆ.
ಪ್ರವೇಶ ಪರೀಕ್ಷೆಗೆ ಫೆ.8 ರಿಂದ ಅರ್ಜಿ ವಿತರಿಸಲಾಗುತ್ತಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಫೆ. 26 ಒಳಗೆ ಸಂಬಂಧಪಟ್ಟ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸಲ್ಲಿಸಬೇಕು. ಮಾರ್ಚ 28 ರಂದು ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30ರ ವರೆಗೆ ಪ್ರವೇಶ ಪರೀಕ್ಷೆ ನಡೆಯುವದು. ಅರ್ಹತಾ ಪಟ್ಟಿಯನ್ನು ಏಪ್ರಿಲ್ 12 ರಂದು ಪ್ರಕಟಿಸಲಾಗುವುದು ಹಾಗೂ ಆಯಾ ಜಲ್ಲಾಮಟ್ಟದಲ್ಲಿ 24-4-2010 ರಂದು ಕೌನ್ಸಿಲಿಂಗ್ ಆರಂಭವಾಗುವುದು. ಜಿಲ್ಲೆ, ದಿನಾಂಕ ಮತ್ತು ಸ್ಥಳವನ್ನು ಅರ್ಹತಾಪಟ್ಟಿಯೊಂದಿಗೆ ತಿಳಿಸಲಾಗುವುದು.
ಗದಗ ಜಿಲ್ಲೆಯ ಗದಗ, ಮುಳಗುಂದ, ಕಾಲಕಾಲೇಶ್ವರ, ಹಿರೇವಡ್ಡಟ್ಟಿಯಲ್ಲಿ (ಕನ್ನಡ ಮಾಧ್ಯಮ ಹಾಗೂ ಒಡೆಯರ ಮಲ್ಲಾಪುರದಲ್ಲಿ (ಇಂಗ್ಲೀಷ ಮಾದ್ಯಮ) ಮುರಾರ್ಜಿ ದೇಸಾಯಿ ಸಹ ಶಿಕ್ಷಣ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಗದಗದಲ್ಲಿ ಕನ್ನಡ ಮಾಧ್ಯಮದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ, ನರಗುಂದದಲ್ಲಿ ಹಿಂದುಳಿದ ವರ್ಗಗಳ ಮುರಾರ್ಜಿ ದೇಸಾಯಿ ಸಹ ಶಿಕ್ಷಣ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ಹೆಣ್ಣು ಮಕ್ಕಳಿಗಾಗಿ ಶಿರಹಟ್ಟಿ, ಡಂಬಳ ಹಾಗೂ ಗಜೇಂದ್ರಗಡದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ಈ ಎಲ್ಲ ಶಾಲೆಗಳಿಗೆ 6ನೇ ತರಗತಿಗೆ ಪ್ರವೇಶವಕಾಶವಿದೆಯೆಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.